*ನಾಳೆ ಸಕಲ ಸರ್ಕಾರಿ ಗೌರವಗಳೊಂದಿಗೆ ಮಾವಿನ ಕೆರೆಯಲ್ಲಿ ನಡೆಯಲಿದೆ ಚೆನ್ನಮ್ಮ ಅಂತ್ಯಕ್ರಿಯೆ*

ಪ್ರಗತಿವಾಹಿನಿ ಸುದ್ದಿ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅನಾರೋಗ್ಯದಿಂದ ನಿನ್ನೆ ವಿಧಿವಶರಾಗಿದ್ದು, ಅವರ ಅಂತ್ಯಕ್ರಿಯೆ ನಾಳೆ ಸೋಮವಾರ ಹಾಸನದ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ನಡೆಯಲಿದೆ.
ದೇವೇಗೌಡರ ಪದ್ಮನಾಭನಗರದ ನಿವಾಸದಲ್ಲಿ ಇಂದು ಬೆಳಿಗ್ಗೆಯಿಂದ 11 ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 11.05ಕ್ಕೆ ಬೆಂಗಳೂರಿನಿಂದ ಹಾಸನ ಜಿಲ್ಲೆಯ ಹೊಳೆನರಸೀಪುರವರೆಗೆ ಚೆನ್ನಮ್ಮ ಅಂತಿಮ ಯಾತ್ರೆ ನಡೆಯಲಿದೆ. ಹೊಳೆನರಸೀಪುರದ ರೇವಣ್ಣ ನಿವಾಸದಲ್ಲಿ ನಾಳೆ ಬೆಳಗ್ಗೆ 7 ರಿಂದ 9.30ರವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, 10 ಗಂಟೆಗೆ ಹೊಳೆನರಸೀಪುರದಿಂದ ಪಾರ್ಥಿವ ಶರೀರ ರವಾನೆಯಾಗಲಿದೆ. ಬೆಳಗ್ಗೆ 11.30ಕ್ಕೆ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಅಂತಿಮಯಾತ್ರೆ ಸಾಗುವ ಮಾರ್ಗ
ಬೆಂಗಳೂರಿನಿಂದ ನೆಲಮಂಗಲ ಕ್ರಾಸ್, ಸೋಲೂರು ಕ್ರಾಸ್, ಮರೂರು ಹ್ಯಾಂಡ್ ಪೋಸ್ಟ್, ಕುಣಿಗಲ್ ಕ್ರಾಸ್, ಬೆಳ್ಳೂರು ಕ್ರಾಸ್, ಕದಬಳ್ಳಿ ಕ್ರಾಸ್, ಹಿರಿಸಾವೆ, ಚನ್ನರಾಯಪಟ್ಟಣ, ಎಲೆಯೂರು, ಹಾಸನ ಡೈರಿ ಸರ್ಕಲ್, ಭೂನಳ್ಳಿ ಕ್ರಾಸ್, ಶಾಂತಿ ಗ್ರಾಮ, N.R.ಸರ್ಕಲ್ ಮೂಲಕ ಮೊಸಳೆ ಹೊಸಳ್ಳಿಗೆ ತಲುಪಲಿದೆ.
ಇನ್ನು ಪತ್ನಿಯ ಅಗಲುವಿಕೆಯ ನೋವಲ್ಲಿರುವ ದೇವೇಗೌಡರು, ದುಃಖ ತಾಳಲಾರದೆ ಚೆನ್ನಮ್ಮ ಅವರ ಪಾರ್ಥಿವ ಶರೀರ ಇರಿಸಿದ್ದ ಶೈತ್ಯಾಗಾರ ಪೆಟ್ಟಿಗೆ ಮೇಲೆರಗಿ ಕಣ್ಣೀರು ಹಾಕಿದ್ದಾರೆ. ಈ ವೇಳೆ ಮಾಜಿ ಪ್ರಧಾನಿಗಳನ್ನು ಮಗಳು ಶೈಲಜಾ ಸಂತೈಸಿದ್ದಾರೆ.
ಚೆನ್ನಮ್ಮನ್ನವರ ಅಂತಿಮ ದರ್ಶನ ಪಡೆದ ಬಳಿಕ ಸಕಲ ಸರ್ಕಾರಿ ಗೌರವದೊಂದಿಗೆ ಅವರ ಅಂತ್ಯಕ್ರಿಯೆಗೆ ತೀರ್ಮಾನಿಸಿರೋದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ದೇಶದ ಮಾಜಿ ಪ್ರಧಾನಿಯ ಧರ್ಮಪತ್ನಿ, ಕೇಂದ್ರ ಸಚಿವರ ತಾಯಿ ಎಂಬುದನ್ನು ಗಮನದಲ್ಲಿರಿಸಿ ಈ ತೀರ್ಮಾನ ಮಾಡಿರೋದಾಗಿ ಹೇಳಿದ್ದಾರೆ. ಇಂದು ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿಯೂ ಚೆನ್ನಮ್ಮನವರಿಗೆ ಗೌರವ ನಮನ ಸಲ್ಲಿಸಲಾಗುತ್ತೆ ಎಂದು ತಿಳಿಸಿದ್ದಾರೆ.




