ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೈಲಹೊಂಗಲದ ಕಿತ್ತೂರು ರಾಣಿ ಚನ್ನಮ್ಮ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ನಗರ ಬಿಎಡ್ ಕಾಲೇಜಿನ ಪ್ರಾಚಾರ್ಯೆ ಡಾಕ್ಟರ್ ನಿರ್ಮಲಾ ಬಟ್ಟಲ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಇಂದಿನ ಆಧುನಿಕ ಯುಗದಲ್ಲಿ ಅಂಗಳದಲ್ಲಿ ಆಡುವ ಮಗಳು ಬಾನಂಗಳಕ್ಕೆ ರೆಕ್ಕೆಗಳನ್ನು ಕಟ್ಟಿಕೊಂಡು ಹಾರುತ್ತಿದ್ದಾಳೆ. ಎಲ್ಲ ರಂಗದಲ್ಲಿಯೂ ಪುರುಷರಷ್ಟೇ ಸರಿಸಮಾನವಾಗಿ ಸಾಧನೆಯನ್ನು ಮಾಡುತ್ತಿದ್ದಾಳೆ. ಕುಟುಂಬ ಮತ್ತು ವೃತ್ತಿಯನ್ನು ಸರಿ ಸಮಾನವಾಗಿ ನಿಭಾಯಿಸುವ ಜಾಣ್ಮೆ ಮತ್ತು ತಾಳೆ ತಾಳ್ಮೆ ಸ್ತ್ರೀಯರಿಗೆ ಪುರುಷರಿಗಿಂತ ಹೆಚ್ಚಿದೆ ಎಂದು ಅವರು ಹೇಳಿದರು.
ಶಿಕ್ಷಕರು ಲಿಂಗ ತಾರತಮ್ಯವನ್ನು ನಿವಾರಿಸಿ ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನಗಳ ಅವಶ್ಯಕತೆಯ ಕುರಿತು ಜಾಗೃತಿ ಮೂಡಿಸಬೇಕು. ಇದಕ್ಕೆ ಶಿಕ್ಷಣವೇ ಪ್ರಮುಖ ಅಸ್ತ್ರ ಎಂದು ನಿರ್ಮಲಾ ಹೇಳಿದರು.
ಅಧ್ಯಕ್ಷತೆಯನ್ನು ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ ಎಂ.ಬಿ. ತಲ್ಲೂರು ವಹಿಸಿ, ಮಹಿಳೆಯರು ಇಂದು ಎಲ್ಲ ಸವಾಲುಗಳನ್ನು ಸ್ವೀಕರಿಸಿ ಮುನ್ನುಗ್ಗುತ್ತಿರುವುದು ಪ್ರಗತಿಯ ಸಂಕೇತವಾಗಿದೆ. ಹೆಣ್ಣುಮಕ್ಕಳೇ ಹೆಣ್ಣುಮಕ್ಕಳಿಗೆ ಪ್ರೇರಣೆಯನ್ನು, ಪ್ರೋತ್ಸಾಹವನ್ನು ನೀಡುವ ಮೂಲಕ ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವ ಗಾದೆ ಮಾತನ್ನು ಸುಳ್ಳು ಮಾಡಬೇಕಾಗಿದೆ ಎಂದರು.
ಸಾಂಸ್ಕೃತಿಕ ಘಟಕದ ಕಾರ್ಯಾಧ್ಯಕ್ಷರಾದ ಪ್ರೊಫೆಸರ್ ಆಯಾಚಿತ, ಪ್ರೊಫೆಸರ್ ಗಡೆಣ್ಣವರ ವೇದಿಕೆಯಲ್ಲಿದ್ದರು. ಪ್ರೊಫೆಸರ್ ಶಶಿಕಲಾ ಕರಡಿಗುದ್ದಿ, ಪ್ರೊಫೆಸರ್ ಭಾರತಿ ಕಾಡೇಶನವರ, ಪ್ರೊಫೆಸರ್ ಪಿ.ಬಿ.ಹುಲಿ, ಪ್ರೊಫೆಸರ್ ಮುನ್ವರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಎಲ್ಲ ಪ್ರಶಿಕ್ಷಣಾರ್ಥಿಗಳು ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.