*ರಾಜ್ಯದಲ್ಲಿ 1 ವರ್ಷ ಕೃತಕ ಪನ್ನೀರ್ ನಿಷೇಧ: ಆಹಾರ ಸುರಕ್ಷತಾ ಇಲಾಖೆ ಆದೇಶ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಒಂದು ವರ್ಷಗಳ ಕಾಲ ಕೃತಕ ಪನ್ನೀರ್ ನೀಷೇಧಿಸಿ ಆಹಾರ ಸುರಕ್ಷತಾ ಇಲಾಖೆ ಆದೇಶ ಹೊರಡಿಸಿದೆ.
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಹೋಟೆಲ್, ರೆಸ್ಟೋರೆಂಟ್ ಹಾಗೂ ಆಹಾರ ಸಂಸ್ಥೆಗಳಲ್ಲಿ ಕೃತಕವಾಗಿ ತಯಾರಿಸುವ ‘ಅನಲಾಗ್ ಪನ್ನೀರ್’ ಬಳಕೆಯನ್ನು ಒಂದು ವರ್ಷದ ಅವಧಿಗೆ ಸಂಪೂರ್ಣವಾಗಿ ನಿಷೇಧಿಸಿ ಅಧಿಕೃತ ಆದೇಶ ಹೊರಡಿಸಿದೆ.
ಸಾಮಾನ್ಯವಾಗಿ ಅಸಲಿ ಪನ್ನೀರ್ ಅನ್ನು ಸಂಪೂರ್ಣವಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ತಯಾರಿಸಲಾಗುತ್ತದೆ. ಆದರೆ, ವೆಚ್ಚ ಕಡಿಮೆ ಮಾಡಲು ಮತ್ತು ಹೆಚ್ಚಿನ ಲಾಭ ಗಳಿಸಲು ಹಲವು ಹೋಟೆಲ್ ಹಾಗೂ ರೆಸ್ಟೋರೆಂಟ್ಗಳು ಹಾಲಿನ ಬದಲು ಸಸ್ಯಜನ್ಯ ಎಣ್ಣೆ, ಪಿಷ್ಟ ಹಾಗೂ ಕೆಮಿಕಲ್ಗಳನ್ನು ಬಳಸಿ ತಯಾರಿಸಿದ ‘ಅನಲಾಗ್ ಪನ್ನೀರ್’ ಅನ್ನು ಗ್ರಾಹಕರಿಗೆ ನೀಡುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಕೃತಕ ಪನ್ನೀರ್ನಲ್ಲಿ ಬಳಸುವ ರಾಸಾಯನಿಕಗಳು ಮತ್ತು ಗುಣಮಟ್ಟವಿಲ್ಲದ ಕೊಬ್ಬಿನಾಂಶ ಸಾರ್ವಜನಿಕ ಆರೋಗ್ಯದ ಮೇಲೆ ತೀವ್ರ ತರಹದ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತಿವೆ. ಆಹಾರ ಸುರಕ್ಷತಾ ಕಾಯ್ದೆಯಡಿ ಹಾಲಿನ ಉತ್ಪನ್ನವಲ್ಲದ ಕೃತಕ ವಸ್ತುವನ್ನು ‘ಪನ್ನೀರ್’ ಹೆಸರಿನಲ್ಲಿ ಗ್ರಾಹಕರಿಗೆ ನೀಡುವುದು ಕಾನೂನುಬಾಹಿರ.
ಪನ್ನೀರ್ ತಯಾರಿಕೆಗೆ ಕಡ್ಡಾಯವಾಗಿ ಶುದ್ಧ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನಷ್ಟೇ ಬಳಸಬೇಕು. ಯಾವುದೇ ಕಾರಣಕ್ಕೂ ಕೃತಕ ಅನಲಾಗ್ ಪನ್ನೀರ್ ಬಳಸಿ ಗ್ರಾಹಕರಿಗೆ ವಿತರಿಸುವಂತಿಲ್ಲ ಎಂದು ಹೋಟೆಲ್, ರೆಸ್ಟೋರೆಂಟ್ ಗಳಿಗೂ ಖಡಕ್ ಸೂಚನೆ ನೀಡಲಾಗಿದೆ.




