
ಪ್ರಗತಿವಾಹಿನಿ ಸುದ್ದಿ: ನೈಋತ್ಯ ಮುಂಗಾರು ಮಾರುತಗಳು ಇನ್ನು 2-3 ದಿನಗಳಲ್ಲಿ ಕೇರಳ ಕರಾವಳಿಯನ್ನು ಪ್ರವೇಶಿಸಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜೂನ್ 8 ರೊಳಗೆ ಕೇರಳಕ್ಕೆ ಮುಂಗಾರು ಅಪ್ಪಳಿಸಿದರೆ ಅದನ್ನು ತಡವಾದ ಮುಂಗಾರು ಎಂದು ಪರಿಗಣಿಸಲಾಗುವುದಿಲ್ಲ ಎಂದು ಹವಾಮಾನ ತಜ್ಞರು ಸ್ಪಷ್ಟಪಡಿಸಿದ್ದಾರೆ. ಆದರೆ, ಈ ಬಾರಿ ‘ಎಲ್ ನಿನೋ’ ಹವಾಮಾನ ವೈಪರೀತ್ಯ ಸಕ್ರಿಯವಾಗಿರುವುದರಿಂದ ದೇಶದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ.
ಕೇರಳಕ್ಕೆ ಮುಂಗಾರು ಅಪ್ಪಳಿಸಿದ ಕೆಲವೇ ದಿನಗಳಲ್ಲಿ ಇದು ಕರ್ನಾಟಕದ ಕರಾವಳಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಮಲೆನಾಡು ಭಾಗಗಳಿಗೆ ವಿಸ್ತರಿಸಲಿದೆ. ಈಗಾಗಲೇ ಕರಾವಳಿ ಭಾಗದಲ್ಲಿ ಮುಂಗಾರು ಪೂರ್ವ ಮಳೆ ಚುರುಕಾಗಿದ್ದು ಬಿತ್ತನೆ ಕಾರ್ಯಗಳಿಗಾಗಿ ರಾಜ್ಯದ ರೈತರು ಮುಂಗಾರಿನ ಅಧಿಕೃತ ಆಗಮನವನ್ನು ಕಾತರದಿಂದ ಕಾಯುತ್ತಿದ್ದಾರೆ.
ವಾಡಿಕೆಗಿಂತ ಕಡಿಮೆ ಮಳೆಯ ಮುನ್ಸೂಚನೆ ಇರುವುದರಿಂದ ಜಲಾನಯನ ಪ್ರದೇಶಗಳಲ್ಲಿ ನೀರು ನಿರ್ವಹಣೆ ಈ ಬಾರಿ ಸವಾಲಾಗುವ ಸಾಧ್ಯತೆಯಿದೆ.


