ಮೈತ್ರಿಗೆ ಮಂಡ್ಯ ಆತಂಕ: ಕಾಂಗ್ರೆಸ್ ನನಗೆ ಹೊಸದಲ್ಲ ಎಂದ ಸುಮಲತಾ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಬಿಜೆಪಿ – ಜೆಡಿಎಸ್ ಮೈತ್ರಿಗೆ ಮಂಡ್ಯ ಲೋಕಸಭಾ ಕ್ಷೇತ್ರ ಅಡ್ಡಿಯಾಗಲಿಯದೆಯೇ? ಅಂತಹುದೊಂದು ಆತಂಕ ಈಗ ಉಂಟಾಗಿದೆ.
ಮಂಡ್ಯದ ಹಾಲಿ ಸಂಸದೆ ಸುಮಲತಾ ಅಂಬೀರೀಶ್ ಅವರು ಈಗಾಗಲೆ ಬಿಜೆಪಿಗೆ ಹತ್ತಿರವಾಗಿದ್ದಾರೆ. ಮಂಡ್ಯ ಕ್ಷೇತ್ರ ಉಿಸಿಕೊಳ್ಳಲು ಶತಾಯ ಗತಾಯ ಪರಯತ್ನ ನಡೆಸಿದ್ದಾರೆ. ಮಂಡ್ಯ ಬಿಟ್ಟು ರಾಜಕಾರಣವಿಲ್ಲ ಎಂದೂ ಹೇಳಿದ್ದಾರೆ.
ಆದರೆ ಇನ್ನೊಂದೆಡೆ, ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಜೆಡಿಎಸ್ ಪಟ್ಟು ಹಿಡಿದಿದೆ. ಇದು ಈಗ ದೊಡ್ಡ ಆತಂಕ ತಂದಿಟ್ಟಿದೆ. ಈ ಕುರಿತು ಖಾಸಗಿ ಟಿವಿಗೆ ಸಂದರ್ಶನ ನೀಡಿರುವ ಸುಮಲತಾ, ಮಂಡ್ಯ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಮಂಡ್ಯ ಬಿಟ್ಟು ಬೇರೆ ಕಡೆ ಸ್ಪರ್ಧಿಸಲು ಸಾಧ್ಯವೇ ಇಲ್ಲ ಎಂದೂ ಹೇಳಿದ್ದಾರೆ.
ಮಂಡ್ಯವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಲ್ಲಿ ನಿಮ್ಮ ನಿಲುವೇನು ಎನ್ನುವ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರ ನೀಡದಿದ್ದರೂ, ಕಾಂಗ್ರೆಸ್ ನನಗೇನೂ ಹೊಸದಲ್ಲ. ಅಂಬರೀಶ್ ಕಾಗ್ರೆಸ್ ನಲ್ಲೇ ಇದ್ದರಲ್ವಾ ಎಂದು ಪ್ರಶ್ನಿಸಿದ್ದಾರೆ.
ವಿಧಾನಸಭೆ ಚುನಾವಣೆಯ ಲೆಕ್ಕಾಚಾರ, ಮತಗಳಿಕೆಯೇ ಬೇರೆ, ಲೋಕಸಭೆಯ ಮತ ಲೆಕ್ಕಾಚಾರವೇ ಬೇರೆ. 2018ರ ವಿಧಾನಸಭೆ ಚುನಾವಣೆ ಮತ್ತು 2019ರ ಲೋಕಸಭಾ ಚುನಾವಣೆಯ ಮತಗಳನ್ನು ಪರಿಶೀಲಿಸಬಹುದು ಎಂದೂ ಸುಮಲತಾ ಹೇಳಿದ್ದಾರೆ.
ಜೆಡಿಎಸ್, ಕಾಂಗ್ರೆಸ್ ನಾಯಕರು ಯಾರೇ ಮನೆಗೆ ಬಂದರೂ ಸ್ವಾಗತಿಸುತ್ತೇನೆ. ಆದರೆ ನನ್ನ ನಿಲುವಿನಲ್ಲಿ ಬದಲಾವಣೆ ಸಾಧ್ಯವಿಲ್ಲ ಎನ್ನುವುದನ್ನು ಸೂಕ್ಷ್ಮವಾಗಿ ಅವರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ವಿಷಯ ಬಿಜೆಪಿ -ಜೆಡಿಎಸ್ ಮೈತ್ರಿಗೆ ಆತಂಕವಾಗಿದೆ.


