Kannada NewsKarnataka NewsLatest
ಮದುವೆ ನಿಶ್ಚಿತಾರ್ಥವಾಗಿದ್ದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ

ಪ್ರಗತಿವಾಹಿನಿ ಸುದ್ದಿ, ಯಾದಗಿರಿ: ವಿವಾಹ ನಿಶ್ಚಿತಾರ್ಥವಾಗಿ ಕೆಲವೇ ದಿನಗಳಲ್ಲಿ ಸಪ್ತಪದಿ ತುಳಿಯಲು ಅಣಿಯಾಗಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿ, ಚೂರಿಯಿಂದ ಇರಿದು ಕೊಲೆಗೈಯ್ಯಲಾಗಿದೆ.
ಕೊಲೆಯಾದ 35 ವರ್ಷದ ಸಂತ್ರಸ್ತೆ ಮುದ್ನಾಳ್ ತಾಂಡಾ ನಿವಾಸಿಯಾಗಿದ್ದರು. ಅವರಿಗೆ ಇತ್ತೀಚೆಗಷ್ಟೇ ನಿಶ್ಚಿತಾರ್ಥವಾಗಿದ್ದು ಮದುವೆಯ ಸಿದ್ಧತೆಗಳೂ ನಡೆದಿದ್ದವು. ಅನಾಥೆಯಾಗಿದ್ದ ಸಂತ್ರಸ್ತೆ ವಿಕಲಚೇತನ ಸಹೋದರನೊಂದಿಗೆ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸೆ. 9 ರಂದು ಅವರು ಕಂಚಗಾರಹಳ್ಳಿ ಕ್ರಾಸ್ನಲ್ಲಿರುವ ತಮ್ಮ ಜಮೀನಿಗೆ ಹೋಗಿದ್ದ ವೇಳೆ ಅವರ ಮೇಲೆ ಅತ್ಯಾಚಾರಗೈದು ಎದೆ ಹಾಗೂ ಕಿವಿಗೆ ಚೂರಿಯಿಂದ ಇರಿದು ಹತ್ಯೆ ಮಾಡಲಾಗಿದೆ. ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ಅವರನ್ನು ಕಂಡ ಸ್ಥಳೀಯರು ತಕ್ಷಣ ಕಲಬುರಗಿ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಅಸುನೀಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಚಿನ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.



