*40 ವಿಶೇಷ ಚೇತನ ಮಕ್ಕಳಿಗೆ ಸಾಧನ ವಿತರಿಸಿದ ಶಾಸಕ ಆಸೀಫ್ ಸೇಠ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸಿಫ್ (ರಾಜು) ಸೇಠ್ ಅವರು ಬೆಳಗಾವಿ ನಗರದ ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 40 ವಿಶೇಷ ಚೇತನ ಮಕ್ಕಳಿಗೆ ವಿಶೇಷ ಸಹಾಯಕ ಸಾಧನಗಳನ್ನು ವಿತರಿಸಿದರು.
ಮಕ್ಕಳ ದೈನಂದಿನ ಚಟುವಟಿಕೆಗಳು, ಚಲನವಲನ, ಶಿಕ್ಷಣ ಹಾಗೂ ಸ್ವಾವಲಂಬನೆಗೆ ನೆರವಾಗುವ ಉದ್ದೇಶದಿಂದ ಈ ಸಾಧನಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಆಸಿಫ್ (ರಾಜು) ಸೇಠ್, ಪ್ರತಿಯೊಬ್ಬ ಮಗುವಿಗೂ ಕಲಿಯಲು, ಬೆಳೆಯಲು ಮತ್ತು ಆತ್ಮವಿಶ್ವಾಸದಿಂದ ಬದುಕಲು ಸಮಾನ ಅವಕಾಶ ದೊರೆಯಬೇಕು ಎಂದು ಹೇಳಿದರು.
“ಈ ಮಕ್ಕಳು ತಮ್ಮದೇ ಆದ ರೀತಿಯಲ್ಲಿ ವಿಶೇಷರು. ಅವರ ಧೈರ್ಯ, ದೃಢಸಂಕಲ್ಪ ಮತ್ತು ಸಾಧಿಸುವ ಛಲ ನಮಗೆ ಇನ್ನಷ್ಟು ಕೆಲಸ ಮಾಡಲು ಪ್ರೇರಣೆ ನೀಡುತ್ತದೆ. ವಿಶೇಷ ಚೇತನ ಮಕ್ಕಳು ಹಾಗೂ ಅವರ ಕುಟುಂಬಗಳಿಗೆ ಬೆಂಬಲ ನೀಡುವುದು ನಮ್ಮ ನಿರಂತರ ಆದ್ಯತೆಯಾಗಿದ್ದು, ಮುಂದೆಯೂ ಇದೇ ಬದ್ಧತೆ ಮತ್ತು ಕಾಳಜಿಯೊಂದಿಗೆ ಅವರೊಂದಿಗೆ ನಿಲ್ಲುತ್ತೇವೆ,”ಎಂದು ಅವರು ಹೇಳಿದರು.
ಮಕ್ಕಳಿಗೆ ಅಗತ್ಯವಾದ ನೆರವು ಹಾಗೂ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ತಮ್ಮ ಪ್ರಯತ್ನಗಳು ಮುಂದುವರಿಯಲಿವೆ ಎಂದು ಶಾಸಕ ಸೇಠ್ ಭರವಸೆ ನೀಡಿದರು. ಇದೇ ವೇಳೆ ಮಕ್ಕಳ ಪೋಷಕರಿಗೆ ಅವರ ವಿಶ್ವಾಸ, ಬೆಂಬಲ ಮತ್ತು ಆಶೀರ್ವಾದಗಳಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಯುವ ನಾಯಕ ಅಮಾನ್ ಸೇಠ್, ಬಿಇಒ ರವಿ ಭಜಂತ್ರಿ, ಬಿಆರ್ಸಿ ಇರಯ್ಯ ಹಿರೇಮಠ್, ಸೂಪರಿಂಟೆಂಡೆಂಟ್ ಸತೀಶ್ ಧುರ್ಡುಂಡಿಮಠ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.



