
ಪ್ರಗತಿವಾಹಿನಿ ಸುದ್ದಿ: ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ತಾಯಿ ಸ್ಥಿತಿ ಗಂಭೀರವಾಗಿದೆ.
ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಜವರೇಗೌಡನ ಕೊಪ್ಪದಲ್ಲಿ ಈ ಘಟನೆ ನಡೆದಿದೆ. ಮೂರು ವರ್ಷದ ಧ್ರುತಿ ಹಾಗೂ ಒಂದೂವರೆ ವರ್ಷದ ದಿಶಾ ಮೃತ ಕಂದಮ್ಮಗಳು. ತಾಯಿ ಪ್ರಿಯಾಂಕಾ ಇಬ್ಬರು ಮಕ್ಕಳನ್ನು ಹಗ್ಗದಿಂದ ಕತ್ತು ಬಿಗಿದು ಸಾಯಿಸಿದ್ದಾಳೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ವಿಷಯ ತಿಳಿದ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಧಾವಿಸಿ ಪ್ರಿಯಾಂಕಾಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರು ವರ್ಷದ ಹಿಂದೆ ಪ್ರಿಯಾಂಕಾ ಹಾಗೂ ಅನಿಲ್ ಕುಮಾರ್ ವಿವಾಹವಾಗಿದ್ದರು, ಇದೀಗ ಪ್ರಿಯಾಂಕಾ ಇದ್ದಕ್ಕಿದ್ದಂತೆ ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸಾಲಿಗ್ರಾಮ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.




