ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
ಜಾತ್ಯಾತೀತ ತಳಹದಿಯ ಕಾಂಗ್ರೆಸ್ ಪಕ್ಷಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಎಲ್ಲ ವರ್ಗದ ಜನತೆಯ ಅಭಿವೃದ್ಧಿ ಕಾಂಗ್ರೆಸ್ನಿಂದ ಮಾತ್ರ ಸಾಧ್ಯ. ಆದ್ದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಮಾಜಿ ಸಚಿವ ಬಿ.ಆರ್. ಯಾವಗಲ್ ಹೇಳಿದರು.
ಪಟ್ಟಣದ ಈರಣ್ಣ ದೇವಸ್ಥಾನದ ಕೆ.ಎಚ್. ಸೋನವಾಲ್ಕರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜರುಗಿದ ಲೋಕಸಭಾ ಚುನಾವಣೆಯ ಪೂರ್ವ ತಯಾರಿ, ಅರಭಾವಿ ಮತಕ್ಷೇತ್ರ ಅಧ್ಯಕ್ಷರ, ಏಜೆಂಟರು ಹಾಗೂ ಸಂಯೋಜಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶ ಇಂದು ಸುಸ್ಥಿತಿಯಲ್ಲಿರಲು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳ ಬುನಾದಿಗಳೇ ಕಾರಣವಾಗಿವೆ. ಬಡವರ ಖಾತೆಗೆ ೧೫ ಲಕ್ಷ ರೂ. ಹಾಕುವುದಾಗಿ ಹೇಳಿ ಅಚ್ಛೆ ದಿನ ಬರುತ್ತದೆ ಎಂದು ಹೇಳಿದ ಪ್ರಧಾನಿ ಮೋದಿ ಬಡವರಿಗೆ ಅನ್ಯಾಯ ಮಾಡಿದ್ದಾರೆ. ಸಾಮಾನ್ಯ ಜನತೆ ಏನಾದರೂ ಆಗಲಿ ಉದ್ಯಮಿಗಳು ಬದುಕಲಿ ಎಂಬ ತತ್ವ ಮೋದಿಯದಾಗಿದೆ. ಕಾಂಗ್ರೆಸ್ ದೇಶದ ಜನತೆಗೆ ಏನೂ ಮಾಡಿಲ್ಲ ಎಂದು ಕೀಳು ಮಟ್ಟದ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದರು.
ವಾಯವ್ಯ ಕರ್ನಾಟಕ ಸಾರಿಗೆ ನಿಗಮದ ಮಾಜಿ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿ, ಅರಭಾವಿ ಕ್ಷೇತ್ರದಲ್ಲಿ ೨೦೦೪ ರಿಂದ ಕಾಂಗ್ರೆಸ್ ಪಕ್ಷ ಹಿನಾಯ ಸ್ಥಿತಿಯಲ್ಲಿದ್ದು, ಅರವಿಂದ ದಳವಾಯಿ ಅವರ ಆಗಮನದಿಂದ ಪಕ್ಷಕ್ಕೆ ಪುನಃ ಚೇತನ ಬಂದಿದೆ ಎಂದರು.
ಅರಭಾವಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ಮಾತನಾಡಿ, ಕ್ಷೇತ್ರದಲ್ಲಿ ಒಳ್ಳೆಯ ಲಕ್ಷಣಗಳು ಕಂಡುಬರುತ್ತಿದ್ದು, ದೇಶದಲ್ಲಿ ಶ್ರಮಿಕರು, ಬಡವರು ಸಮೃದ್ಧಿಯಿಂದ ಬದುಕಬೇಕಾದರೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಹೇಳಿದರು. ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ ಮಾತನಾಡಿದರು.
ಮುಖಂಡರಾದ ಎಸ್.ಆರ್. ಸೋನವಾಲ್ಕರ, ಕೆ.ಟಿ. ಗಾಣಿಗೇರ, ವಿ.ಪಿ. ನಾಯಕ, ಗುರಪ್ಪ ಹಿಟಣಗಿ ಮತ್ತು ಪಕ್ಷದ ಪದಾಧಿಕಾರಿಗಳು ಉಪಸ್ಥತರಿದ್ದರು. ಭೀಮಶಿ ಕಾರದಗಿ ಸ್ವಾಗತಿಸಿದರು. ನಿಶಾಂತ ದಳವಾಯಿ ನಿರೂಪಿಸಿದರು. ವೀರು ಮೋಡಿ ವಂದಿಸಿದರು.