ನೈಟ್ ಕರ್ಫ್ಯೂ ಆದೇಶ ವಾಪಸ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ರೂಪಾಂತರ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿ ಅಪಹಾಸ್ಯಕ್ಕೀಡಾಗಿದ್ದ ರಾಜ್ಯ ಸರ್ಕಾರ, ಇದೀಗ ಜನರ ಆಕ್ರೋಶಕ್ಕೆ ಮಣಿದು ಕರ್ಫ್ಯೂ ಆದೇಶ ವಾಪಸ್ ಪಡೆದಿದೆ.
ಈ ಕುರಿತು ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರಕಟಣೆ ಹೊರಡಿಸಿದ್ದು, ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಆದೇಶ ಹಿಂಪಡೆದಿದೆ. ಕೊರೊನಾ ಹೊಸ ಪ್ರಭೇದದ ಆತಂಕ ಹಿನ್ನೆಲೆಯಲ್ಲಿ ತಜ್ಞರ ಸಲಹೆ ಮೇರೆಗೆ ನೈಟ್ ಕರ್ಫ್ಯೂಗೆ ನಿರ್ಧರಿಸಿದ್ದೆವು. ಸರ್ಕಾರದ ನಿರ್ಧಾರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆದು ನೈಟ್ ಕರ್ಫ್ಯೂ ಅಗತ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸಂಪುಟ ಸಹದ್ಯೋಗಿಗಳು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ವಿಪಕ್ಷ, ಸಂಘ ಸಂಸ್ಥೆಗಳು ಕೂಡ ವಿರೋಧ ವ್ಯಕ್ತಪಡಿಸಿವೆ. ಹೀಗಾಗಿ ನೈಟ್ ಕರ್ಫ್ಯೂ ಜಾರಿ ಇಲ್ಲ.
ಆದರೆ ಸಾರ್ವಜನಿಕರು ಸ್ವಯಂ ನಿರ್ಬಂಧ ವಿಧಿಸಿಕೊಳ್ಳಬೇಕು. ಅನಗತ್ಯವಾಗಿ ಹೊರಗಡೆ ಓಡಾಡಬಾರದು. ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು.
ನೈಟ್ ಕರ್ಫ್ಯೂ ಕುರಿತು ಪ್ರಗತಿವಾಹಿನಿ ಅಪಹಾಸ್ಯಕ್ಕೀಡಾದ ನೈಟ್ ಕರ್ಫ್ಯೂ ಎನ್ನುವ ತಲೇಬರಹದ ವರದಿ ಪ್ರಕಟಿಸಿತ್ತು.




