*ಮೊಬೈಲ್ ಶೌಚಾಲಯದಲ್ಲಿ ಮಹನಿಯರ ಫೋಟೋ: ಕಾರ್ಯಕ್ರಮ ಆಯೋಜಕರ ಎಡವಟ್ಟು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾರ್ಯಕ್ರಮಕ್ಕಾಗಿ ನಿರ್ಮಿಸಿದ ಮೊಬೈಲ್ ಶೌಚಾಲಯಕ್ಕೆ ಡಾ.ಬಿ.ಆರ್.ಅಂಬೇಡ್ಕರ್, ಸಂಗೋಳ್ಳಿ ರಾಯಣ್ಣ ಭಾವಚಿತ್ರ ಪರದೆ ಅಳವಡಿಸಿ ಅಪಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಬೆಳಗಾವಿ ತಾಲೂಕಿನ ಆನಗೋಳದ ಅಂಬೇಡ್ಕರ್ ಗಲ್ಲಿಯಲ್ಲಿ ಸಂತ ಪಾರಾಯಣ ಕಾರ್ಯಕ್ರಮದ ಆಯೋಜನೆಯ ವೇಳೆ ದೊಡ್ಡ ಎಡವಟ್ಟುವೊಂದನ್ನು ಮಾಡಲಾಗಿದೆ.
ಕಾರ್ಯಕ್ರಮಕ್ಕೆ ಬರೋ ಜನರಿಗೆ ಅಂಬೇಡ್ಕರ್ ಗಲ್ಲಿಯ ಸ್ಮಶಾನದಲ್ಲಿ ತಾತ್ಕಾಲಿಕ ಶೌಚಾಲಯ ನಿರ್ಮಾಣ ಮಾಡಲಾಗಿದ್ದು, ಈ ಮೊಬೈಲ್ ಶೌಚಾಲಯಕ್ಕೆ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್, ಕ್ರಾಂತೀವೀರ ಸಂಗೋಳ್ಳಿ ರಾಯಣ್ಣ ಸೇರಿದಂತೆ ಎಐಸಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆಶಿವಕುಮಾರ, ಸಚಿವ ಸತೀಶ ಜಾರಕಿಹೊಳಿ ಭಾವಚಿತ್ರಗಳ ಪರದೆಯನ್ನು ಹಾಕಲಾಗಿದೆ.
ಮೊಬೈಲ್ ಶೌಚಾಲಯದ ಪರದೆಯಾಗಿ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವದ ಬ್ಯಾನರ್ ಗಳನ್ನೇ ಬಳಸಲಾಗಿದೆ. ಸದ್ಯ ಈ ಬಗ್ಗೆ ದಲಿತ ಸಮುದಾಯದ ಯುವಕರು ಕಿಡಿಕಾರಿದ್ದಾರೆ.
ಅಷ್ಟೇ ಅಲ್ಲದೆ ತಡರಾತ್ರಿ ಟಿಳಕವಾಡಿ ಪೊಲೀಸ್ ಠಾಣೆಗೆ ಆಗಮಿಸಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಆದರೆ ಆರೋಪಿಗಳ ವಿರುದ್ಧ ದೂರು ಪಡೆದುಕೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗುತ್ತಿದ್ದಂತೆ ತಡರಾತ್ರಿಯೇ ಟಿಳಕವಾಡಿ ಪೊಲೀಸರು ಶೌಚಾಲಯ ತೆರವುಗೊಳಿಸಿದ್ದು ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್,ಟಿಳಕವಾಡಿ ಪೊಲೀಸರು ಭೇಟಿ ನೀಡಿ , ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಮುಂಜಾಗ್ರತಾ ಕ್ರಮವಾಗಿ ಬಿಗಿಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.