
ಪ್ರಗತಿವಾಹಿನಿ ಸುದ್ದಿ: ರಾಜ್ಯಾದ್ಯಂತ ಖಾಸಗಿ ಬಸ್ಗಳ ಪ್ರಯಾಣ ದರ ಏರಿಕೆಯ ಬಿಸಿ ಇಂದಿನಿಂದ ಪ್ರಯಾಣಿಕರಿಗೆ ತಟ್ಟಲಿದೆ.
ಇಂದಿನಿಂದ ರಾಜ್ಯಾದ್ಯಂತ ಸಂಚರಿಸುವ ಖಾಸಗಿ ಮಜಲು ವಾಹನ (ಸ್ಟೇಜ್ ಕ್ಯಾರಿಯೇಜ್) ಬಸ್ಗಳ ಟಿಕೆಟ್ ದರವನ್ನು ಶೇ. 5 ರಿಂದ ಶೇ. 8 ರಷ್ಟು ಹೆಚ್ಚಳ ಮಾಡಲಾಗಿದ್ದು, ಪರಿಷ್ಕೃತ ಹೊಸ ದರವು ಇಂದಿನಿಂದಲೇ ಅಧಿಕೃತವಾಗಿ ಜಾರಿಗೆ ಬಂದಿದೆ.
ಈ ಬಗ್ಗೆ ಮಾತನಾಡಿದ ರಾಜ್ಯ ಖಾಸಗಿ ಮಜಲು ವಾಹನ ಬಸ್ ಮಾಲಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರು ಕಳೆದ ಕೆಲವು ವರ್ಷಗಳಿಂದ ಡೀಸೆಲ್ ದರದಲ್ಲಿ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ಇದರ ಜೊತೆಗೆ ಟೈರ್, ಗಾಡಿಯ ಬಿಡಿಭಾಗಗಳು, ಇನ್ನೂರೆನ್ಸ್, ನಿತ್ಯದ ರಿಪೇರಿ ಮತ್ತು ವಾಹನ ನಿರ್ವಹಣಾ ವೆಚ್ಚವೂ ಗಗನಕ್ಕೇರಿದೆ. ಜೊತೆಗೆ ಬಸ್ ಸಿಬ್ಬಂದಿಯ ವೇತನದ ಒತ್ತಡವೂ ಹೆಚ್ಚಾಗಿರುವುದರಿಂದ ಬಸ್ ಉದ್ಯಮವು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದಿದ್ದಾರೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಬಸ್ ಉದ್ಯಮವನ್ನು ಜೀವಂತವಾಗಿ ಉಳಿಸಿಕೊಳ್ಳಲು ಮತ್ತು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಪ್ರಯಾಣ ದರ ಪರಿಷ್ಕರಣೆ ಮಾಡುವುದು ಅನಿವಾರ್ಯವಾಗಿತ್ತು.
ಈ ದರ ಹೆಚ್ಚಳವು ಕಾನೂನುಬಾಹಿರವಾಗಿಲ್ಲ, ಬದಲಿಗೆ ರಾಜ್ಯ ಸರ್ಕಾರದ 2020ರ ಅಧಿಕೃತ ಅಧಿಸೂಚನೆ ಅನ್ವಯವೇ ದರ ಹೆಚ್ಚಳ ಮಾಡಲು ಅನುಮೋದನೆ ದೊರೆತಿದೆ. ಅದರಂತೆಲೆ ಇಂದಿನಿಂದ ಇಡೀ ರಾಜ್ಯದಲ್ಲಿ ಹೊಸ ದರ ಜಾರಿಯಾಗಿದೆ ಎಂದು ಸುರೇಶ್ ತಿಳಿಸಿದ್ದಾರೆ.
ಶಾಲಾ ವಿದ್ಯಾರ್ಥಿಗಳಿಗೆ ಖಾಸಗಿ ಬಸ್ಗಳಲ್ಲಿ ನೀಡಲಾಗುತ್ತಿರುವ ಹಳೆಯ ಪ್ರಯಾಣ ದರ ರಿಯಾಯಿತಿ ಎಂದಿನಂತೆ ಮುಂದುವರಿಯಲಿದೆ. ಹೊಸ ದರ ಏರಿಕೆಯಿಂದ ವಿದ್ಯಾರ್ಥಿಗಳ ಮೇಲೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆ ಬೀಳುವುದಿಲ್ಲ ಎಂದು ಬಸ್ ಮಾಲಕರ ಒಕ್ಕೂಟ ಸ್ಪಷ್ಟಪಡಿಸಿದೆ.



