Kannada NewsKarnataka NewsLatest

*ಪೊಲಿಸ್ ಸಿಬ್ಬಂದಿಗಳಿಗೆ ಗುಡ್ ನ್ಯೂಸ್*

ಏನಿದು ಪ್ರಾಜೆಕ್ಟ್ ಖುಷಿ ಕಾರ್ಯಕ್ರಮ? ಇಲ್ಲಿದೆ ಮಾಹಿತಿ

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿಯ ಆರೋಗ್ಯ ಮತ್ತು ಯೋಗಕ್ಷೇಮ ಸುಧಾರಿಸುವ ಉದ್ದೇಶದಿಂದ ರೂಪಿಸಿರುವ ವೈಜ್ಞಾನಿಕ ಹಾಗೂ ರಚನಾತ್ಮಕ ‘ಪ್ರಾಜೆಕ್ಟ್ ಖುಷಿ’ ಆರೋಗ್ಯ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು.

Home add -Advt


ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ನೂರಾರು ಪೊಲೀಸ್ ಸಿಬ್ಬಂದಿಗೆ ಅನುಕೂಲವಾಗಲಿರುವ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಹ್ಯಾಪಿಯೆಸ್ಟ್ ಹೆಲ್ತ್, ಟೈಟಾನ್ ಕಂಪನಿ ಲಿಮಿಟೆಡ್ ಮತ್ತು ಬೆಂಗಳೂರು ಇಂದಿರಾನಗರ ರೋಟರಿ ಟ್ರಸ್ಟ್ ಸಹಯೋಗದಲ್ಲಿ ಈ ಯೋಜನೆ ಜಾರಿಯಾಗುತ್ತಿದೆ. ರೋಗಗಳು ಬರುವ ಮುನ್ನವೇ ತಡೆಗಟ್ಟುವ ಆರೋಗ್ಯ ಸೇವೆಗಳಿಗೆ ಬೆಂಬಲ ನೀಡುವುದು ಹಾಗೂ ಪೊಲೀಸ್ ಸಿಬ್ಬಂದಿ ದೀರ್ಘಾವಧಿಯ ಆರೋಗ್ಯಕ್ಕಾಗಿ ಸುಸ್ಥಿರ ಜೀವನಶೈಲಿ ಅಳವಡಿಸಿಕೊಳ್ಳಲು ನೆರವಾಗುವುದು ಯೋಜನೆಯ ಉದ್ದೇಶವಾಗಿದೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾತನಾಡಿ,“ ಪ್ರಾಜೆಕ್ಟ್‌ ಖುಷಿ” ಯ ಮೂರು ತಿಂಗಳ ಕಾರ್ಯಕ್ರಮದಿಂದ ನಮ್ಮ ಸಿಬ್ಬಂದಿಯು ಈಗಾಗಲೇ ಪ್ರಯೋಜನ ಪಡೆದಿರುವುದನ್ನು ನಾವು ಕಂಡಿದ್ದೇವೆ. ಇನ್ನಷ್ಟು ಇದರ ಪ್ರಯೋಜನವನ್ನು ಪ್ರತಿಯೊಬ್ಬ ಸಿಬ್ಬಂದಿ ಪಡೆಯಬೇಕು ಎಂಬ ಕಾರಣದಿಂದ ಈ ಕಾರ್ಯಕ್ರಮವನ್ನು ಮುಂದುವರೆಸಲಾಗುತ್ತಿದೆ. ಆರೋಗ್ಯಕರ ಜೀವನಕ್ಕಾಗಿ ಅವರು ದೀರ್ಘಕಾಲೀನ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎನ್ನುವುದೇ ನಮ್ಮ ಮುಖ್ಯ ಉದ್ದೇಶ, ಎಂದು ಹೇಳಿದರು.

ಪ್ರಾಜೆಕ್ಟ್ ಖುಷಿಯ ಪ್ರಾಯೋಗಿಕ ಕಾರ್ಯಕ್ರಮವನ್ನು ಸೆಪ್ಟೆಂಬರ್ 2025ರಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು. ಅದರಲ್ಲಿ ಭಾಗವಹಿಸಿದ ಸಿಬ್ಬಂದಿಯ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿತ್ತು. ಕಾರ್ಯಕ್ರಮದ ಮೊದಲು ಮತ್ತು ನಂತರ ನಡೆಸಿದ ಆರೋಗ್ಯ ತಪಾಸಣೆಗಳ ಪ್ರಕಾರ, ಶೇ.61ರಷ್ಟು ಭಾಗವಹಿಸುವವರಲ್ಲಿ ರಕ್ತದ ಸಕ್ಕರೆ ಮಟ್ಟ ಕಡಿಮೆಯಾಗಿದೆ. ಶೇ.70ರಷ್ಟು ಮಂದಿ ವಿಟಮಿನ್ ಬಿ12 ಕೊರತೆಯನ್ನು ಸರಿಪಡಿಸಿಕೊಂಡಿದ್ದರೆ, ಶೇ.59ರಷ್ಟು ಮಂದಿ 0.5 ಕೆಜಿಯಿಂದ 6.1 ಕೆಜಿವರೆಗೆ ತೂಕ ಇಳಿಸಿಕೊಂಡಿದ್ದಾರೆ. ಜೊತೆಗೆ ಒತ್ತಡ ನಿರ್ವಹಣೆ, ಉತ್ತಮ ನಿದ್ರೆ, ಜೀರ್ಣಕ್ರಿಯೆ ಹಾಗೂ ಒಟ್ಟಾರೆ ಶಕ್ತಿಯ ಮಟ್ಟದಲ್ಲೂ ಸುಧಾರಣೆ ಕಂಡಿರುವುದಾಗಿ ಭಾಗವಹಿಸಿದವರು ತಿಳಿಸಿದ್ದಾರೆ ಎಂದರು.

“ಪ್ರಾಯೋಗಿಕ ಯೋಜನೆಯು ಉತ್ತಮ ಜೀವನಶೈಲಿ ಅಭ್ಯಾಸಗಳನ್ನು ಅಳವಡಿಸಿಕೊಂಡರೆ ಆರೋಗ್ಯಕರವಾಗಿ ಇರಬಹುದು ಎನ್ನುವುದಕ್ಕೆ ನಿದರ್ಶನವಾಗಿದೆ. ದೀರ್ಘಾಯುಷ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದರೂ, ನಮ್ಮ ಮುಖ್ಯ ಗಮನ ಉತ್ತಮ ಆರೋಗ್ಯದ ಅವಧಿಯನ್ನು ಹೆಚ್ಚಿಸುವುದರ ಮೇಲಿದೆ,” ಎಂದು ಹ್ಯಾಪಿಯೆಸ್ಟ್ ಹೆಲ್ತ್ ನಾಲೆಡ್ಜ್ ವಿಭಾಗದ ಸಿಇಒ ಮತ್ತು ಮುಖ್ಯ ಸಂಪಾದಕ ರಘು ಕೃಷ್ಣನ್ ಹೇಳಿದರು.
ಟೈಟಾನ್ ಕಂಪನಿ ಲಿಮಿಟೆಡ್‌ನ ಉಪಾಧ್ಯಕ್ಷ ಮತ್ತು ಮುಖ್ಯ ಸುಸ್ಥಿರತಾ ಅಧಿಕಾರಿ ಎನ್.ಇ. ಶ್ರೀಧರ್, ರೋಟರಿ ಬೆಂಗಳೂರು ಇಂದಿರಾನಗರ ಮತ್ತು ಬಿಐಆರ್‌ಟಿ ಅಧ್ಯಕ್ಷ ಗೋಪಿನಾಥ್ ನಾರಾಯಣನ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ವಿವರ:
ಹಿಂದಿನ ಆವೃತ್ತಿಯ ಕಲಿಕೆಗಳ ಆಧಾರದ ಮೇಲೆ, ಪ್ರಾಜೆಕ್ಟ್ ಖುಷಿಯ ಮುಂದಿನ ಹಂತವು ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ಎಂ. ನಾರಾಯಣ್, ಐಪಿಎಸ್ ಅವರ ನೇತೃತ್ವದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವು ಮೂರು ವರ್ಷಗಳಲ್ಲಿ 600 ಸಿಬ್ಬಂದಿಯನ್ನು ತಲುಪುವ ಗುರಿ ಹೊಂದಿದೆ. ಮೊದಲ ಬ್ಯಾಚ್ ಸೆ.8ರಿಂದ ಡಿ.6, 2026ರವರೆಗೆ ಮೂರು ತಿಂಗಳ ದೈಹಿಕ ಮತ್ತು ಡಿಜಿಟಲ್ ಆರೋಗ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ.

ತಜ್ಞರ ನೇತೃತ್ವದ ವೆಲ್‌ನೆಸ್ ತರಗತಿಗಳು, ಆರೋಗ್ಯ ಶಿಕ್ಷಣ, ಲೈವ್ ತರಗತಿಗಳು ಮತ್ತು ಡಿಜಿಟಲ್ ಮಾರ್ಗದರ್ಶನದ ಮೂಲಕ ಸುಸ್ಥಿರ ಜೀವನಶೈಲಿ ಬದಲಾವಣೆಗಳನ್ನು ಉತ್ತೇಜಿಸಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಭಾಗವಹಿಸುವವರಿಗೆ ಹೃದಯದ ಆರೋಗ್ಯ, ತೂಕ ನಿರ್ವಹಣೆ, ಮಧುಮೇಹ, ಮೆಟಬಾಲಿಕ್ ಆರೋಗ್ಯ, ನಿದ್ರೆ, ಯೋಗ, ಪೋಷಣೆ ಮತ್ತು ಮೈಂಡ್‌ಫುಲ್‌ನೆಸ್ ವಿಷಯಗಳ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ.


ರಕ್ತ ಪರೀಕ್ಷೆಗಳು, ಬಿಎಂಐ, ಹಿಪ್-ವೇಸ್ಟ್ ಅನುಪಾತ, ತೂಕ ನಿರ್ವಹಣೆ ಮೌಲ್ಯಮಾಪನಗಳು ಮತ್ತು ಸಮೀಕ್ಷೆಗಳ ಮೂಲಕ ಸಿಬ್ಬಂದಿಯ ಪ್ರಗತಿಯನ್ನು ಟ್ರ್ಯಾಕ್ ಮಾಡಲಾಗುತ್ತದೆ. 90 ದಿನಗಳ ವೆಲ್‌ನೆಸ್ ಪ್ರಯಾಣದ ಸಮಗ್ರ ಮೌಲ್ಯಮಾಪನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದ್ದು, ಮೊದಲ ದಿನದಿಂದ 90ನೇ ದಿನದವರೆಗಿನ ಪ್ರಗತಿಯನ್ನು ವರದಿಯಲ್ಲಿ ದಾಖಲಿಸಲಾಗುತ್ತದೆ.

Related Articles

Back to top button