
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತೀವ್ರ ಹೃದಯಾಘಾತದಿಂದ ವಿಧಿವಶರಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು ಬೆಳಿಗ್ಗೆ ತಾವು ಗಾಜನೂರಿಗೆ ಹೋಗಿ ಬರುವುದಾಗಿ ತಮ್ಮ ಆಪ್ತರ ಬಳಿ ಹೇಳಿದ್ದರಂತೆ.
ಇಂದು ಬೆಳಿಗ್ಗೆ 10 ಗಂಟೆಗೆ ತಾವು ತಮ್ಮ ತಂಡೆಯ ಊರಾದ ಗಾಜನೂರಿಗೆ ಹೊರಡುತ್ತಿದ್ದೇನೆ. ಸೋಮವಾರ ಬೆಂಗಳೂರಿಗೆ ವಾಪಸ್ ಆಗುತ್ತೇನೆ ಎಂದು ಪುನೀತ್ ರಾಜ್ ಕುಮಾರ್ ತಮ್ಮ ಆಪ್ತರ ಬಳಿ ಹೇಳಿದ್ದರಂತೆ. ಊರಿಗೆ ಹೊರಡುವ ಸಿದ್ಧತೆ ನಡೆಸಿದ್ದ ಪುನೀತ್ ಗೆ ಎಂದಿನಂತೆ ಜಿಮ್ ವರ್ಕೌಟ್ ಮಾಡುವ ವೇಳೆ ತೀವ್ರ ಎದೆನೋವು ಕಾಣಿಸಿಕೊಂಡಿದೆ.
ತಕ್ಷಣ ರಮಣಶ್ರೀ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಗ್ಯ ಸ್ಥಿತಿ ತೀವ್ರ ಗಂಭೀರವಾಗುತ್ತಿದ್ದಂತೆ ವಿಕ್ರಂ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪುನೀತ್ ಕೊನೆಯುಸಿರೆಳೆದಿದ್ದಾರೆ.
ಇನ್ನು ಪುನೀತ್ ತಮ್ಮ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದು, ತಮ್ಮ ತಂದೆಯಂತೆಯೇ ನೇತ್ರದಾನ ಮಾಡಿದ್ದಾರೆ. ತಮ್ಮ ಎರಡೂ ಕಣ್ಣುಗಳನ್ನು ದಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಜೀವನದ ಪಯಣ ಮುಗಿಸಿದ ಪವರ್ ಸ್ಟಾರ್; ಮುಗಿಲುಮುಟ್ಟಿದ ಅಭಿಮಾನಿಗಳ ಆಕ್ರಂದನ