
ಪ್ರಗತಿವಾಹಿನಿ ಸುದ್ದಿ: ರೈಲ್ವೇ ಟ್ರ್ಯಾಕ್ ನಿರ್ಮಾಣಕ್ಕಾಗಿ ಅಗೆದ ಗುಂಡಿಯಲ್ಲಿ ಬಿದ್ದು ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಶಾಲೆಗೆ ರಜೆ ಹಿನ್ನೆಲೆ ಪೋಷಕರೊಂದಿಗೆ ಜಮೀನಿಗೆ ಹೋಗಿದ್ದ ಬಾಲಕ ಆಟವಾಡುತ್ತಾ ಗುಂಡಿಗೆ ಬಿದ್ದು ಮೃತಪಟ್ಟಿದ್ದಾನೆ.
8 ವರ್ಷದ ಯಶವಂತ್ ನೀರಿನಲ್ಲಿ ಮುಳುಗಿ ಮೃತಪಟ್ಟ ಬಾಲಕ. ಗಿಣಿಗೇರಾ ಮೆಹಬೂಬನಗರ ರೈಲ್ವೇ ಟ್ರ್ಯಾಕ್ ನಿರ್ಮಾಣಕ್ಕೆ ಕೆಂಪು ಮಣ್ಣಿಗಾಗಿ ಅಗೆದಿದ್ದ ಗುಂಡಿಯನ್ನ ಹಾಗೆಯೇ ಬಿಡಲಾಗಿತ್ತು. ಮಳೆ ನೀರು ತುಂಬಿ ಸುಮಾರು ಹತ್ತು ಅಡಿ ಆಳದ ಗುಂಡಿ ಕೆರೆಯಂತಾಗಿತ್ತು. ಆಟವಾಡುತ್ತಾ ಬಂದು ಬಾಲಕ ಗುಂಡಿಗೆ ಬಿದ್ದಿದ್ದಾನೆ. ಕೆಲಸದಲ್ಲಿ ಮಗ್ನರಾಗಿದ್ದ ಪೋಷಕರಿಗೆ ಮಗು ಗುಂಡಿಯಲ್ಲಿ ಬಿದ್ದಿದ್ದು ಅರುವಿಗೆ ಬಂದಿಲ್ಲ.
ಎಷ್ಟು ಹೊತ್ತಾದರೂ ಮಗ ಕಾಣದಿದ್ದಾಗ ಹುದುಕಾಟ ನಡೆಸಿದ್ದಾರೆ. ಈ ವೇಳೆ ಬಾಲಕನ ಶವ ಗುಂಡಿಯಲ್ಲಿ ಸಿಕ್ಕಿದೆ. ಮಗನನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ರೈಲ್ವೇ ಇಲಾಖೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ದ ಮೃತ ಬಾಲಕನ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಅಧಿಕಾರಿಗಳು, ಗುತ್ತಿಗೆದಾರನ ತಪ್ಪಿಗೆ ಬಾಲಕ ಬಲಿಯಾಗಿದ್ದಾನೆ. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



