
ಪ್ರಗತಿವಾಹಿನಿ ಸುದ್ದಿ: ಪಾರ್ಕಿಂಗ್ ಲಾಟ್ ನಲ್ಲಿಯೇ ನಾಲ್ಕು ಖಾಸಗಿ ಬಸ್ ಗಳು ಇದ್ದಕ್ಕಿದ್ದಂತೆ ಬೆಂಕಿಗಾಹುತಿಯಾಗಿ ಸುಟ್ಟು ಭಸ್ಮವಾಗಿರುವ ಘಟನೆ ಬೆಂಗಳೂರು ಹೊರವಲಯದಲ್ಲಿ ನಡೆದಿದೆ.
ಆನೇಕಲ್ ತಾಲೂಕಿನ ಹಳೇ ಚಂದಾಪುರದ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ನಾಲ್ಕು ಬಸ್ ಗಳು ಸುಟ್ಟು ಹೋಗಿವೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ. ಸ್ಥಳೀಯರು ಹೇಳುವ ಪ್ರಕಾರ ಈ ಬಸ್ ಗಳನ್ನು ಮಾರಾಟಕ್ಕಾಗಿ ಈ ಜಾಗದಲ್ಲಿ ನಿಲ್ಲಿಸಲಾಗಿತ್ತು.
ಇದ್ದಕ್ಕಿದ್ದಂತೆ ಇಂದು ಒಂದು ಬಸ್ ನಲ್ಲಿ ಕಾಣಿಸಿಕೊಂಡ ಬೆಂಕಿ ಉಳಿದ ಮೂರು ಬಸ್ ಗಳಿಗೂ ವ್ಯಾಪಿಸಿದೆ. ನೋಡ ನೋಡುತ್ತಿದ್ದಂತೆ ನಾಲ್ಕು ಬಸ್ ಗಳು ಬೆಂಕಿಯಲ್ಲಿ ಹೊತ್ತಿ ಉರಿದಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಷ್ಟರಲ್ಲಿ ನಾಲ್ಕು ಬಸ್ ಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಸೂರ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


