
ಪ್ರಗತಿವಾಹಿನಿ ಸುದ್ದಿ: ರೈತನ ಜಮೀನಿನ ಪಿಟಿ ಶೀಟ್ ಮಾಡಿಕೊಡಲು 4,500 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಖಾನಾಪುರ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಕಚೇರಿ ಸರ್ವೇಯರ್ ವಿನೋದ ಸಂಬನ್ನಿ ಎಂಬಾತ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ತಾಲೂಕಿನ ಮಾನಸಾಪುರ ಗ್ರಾಮದ ರೈತ ಸದಾಶಿವ ಕಾಂಬಳೆ ಎಂಬುವವರು ಜಮೀನಿನ ಪಿಟಿ ಶೀಟ್ ಮಾಡಿಸಿಕೊಳ್ಳಲು ಖಾನಾಪುರ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸುವ ವೇಳೆ ಸರ್ವೇಯರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಜೂನ್. 2 ರಂದು ಬೆಳಗಾವಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದರ ಅನ್ವಯ ಲೋಕಾಯುಕ್ತ ಎಸ್ಪಿ ಹನುಮಂತರಾಯ ಅವರ ಮಾರ್ಗದರ್ಶನಲ್ಲಿ ಲೋಕಾಯುಕ್ತ ಡಿವೈಎಸ್ಪಿ ಬರತ್ ಎಸ್ ಆರ್, ಇನ್ಸ್ಪೆಕ್ಟರ್ ಆರ್.ಎಲ್ ಧರ್ಮಟ್ಟಿ, ಸಂಗಮನಾಥ ಹೊಸಮನಿ, ಸಿಬ್ಬಂದಿಗಳಾದ ರಾಜಶ್ರಿ ಬೊಸ್ಲೆ, ಗಿರೀಶ್ ಪಾಟೀಲ್, ಅಭಿಜಿತ್ ಜಮಖಂಡಿ ಸೇರಿದಂತೆ ವಿವಿಧ ಅಧಿಕಾರಿಗಳ ತಂಡ ಸರ್ವೇಯರ್ ಲಂಚ ಪಡೆಯುವ ವೇಳೆ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.