Kannada NewsKarnataka NewsLatestPolitics

*ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ಅನರ್ಹವಾದಷ್ಟೇ ಬೇಗ ಆದೇಶ ತೆರವಾಗಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅನ್ಯಾಯ ಆದಾಗ ನ್ಯಾಯ ಕೊಡಿಸಲು ನ್ಯಾಯಾಂಗದ ಶಕ್ತಿ ಪೀಠ ಇದೆ ಎಂಬುದಕ್ಕೆ ಸುಪ್ರೀಂ ಕೋರ್ಟಿನ ಇಂದಿನ ತೀರ್ಪೇ ಸಾಕ್ಷಿ. ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ಎಷ್ಟು ಬೇಗ ಅನರ್ಹವಾಗಿತ್ತೋ ಅಷ್ಟೇ ಬೇಗ ಆ ಆದೇಶ ತೆರವಾಗಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

Home add -Advt

ಮೋದಿ ಉಪನಾಮ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರಿಗೆ ಅಧೀನ ನ್ಯಾಯಾಲಯ ನೀಡಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದ ಬಗ್ಗೆ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಯಾವುದೇ ಕಾರಣಕ್ಕೂ ರಾಹುಲ್ ಗಾಂಧಿ ಅವರ ಧ್ವನಿ ಹತ್ತಿಕ್ಕಲು ಸಾಧ್ಯವಿಲ್ಲ. ದೇಶ ಹಾಗೂ ಜನರ ಹಿತಕ್ಕಾಗಿ ರಾಹುಲ್ ಗಾಂಧಿ ಅವರು ಎತ್ತುತ್ತಿರುವ ಧ್ವನಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ತೀರ್ಪು ಮಹತ್ವದ್ದಾಗಿದೆ. ನ್ಯಾಯಾಲಯದ ಆದೇಶ ಬಂದ 24 ತಾಸುಗಳಲ್ಲಿ ಅವರ ಸದಸ್ಯತ್ವವನ್ನು ಹೇಗೆ ವಜಾಗೊಳಿಸಲಾಗಿತ್ತೋ, ಈಗ ಅದೇ ರೀತಿ ಅವರ ಸದಸ್ಯತ್ವವನ್ನು ಮರುಸ್ಥಾಪಿಸಬೇಕು. ಇಲ್ಲದಿದ್ದರೆ ಸ್ಪೀಕರ್ ಅವರೂ ಸಮಸ್ಯೆಗೆ ಸಿಲುಕುತ್ತಾರೆ ಎಂದು ತಿಳಿಸಿದರು.

ನ್ಯಾಯ ನೀಡುವ ಪೀಠದಿಂದ ಅನ್ಯಾಯ ಆಗುವುದಿಲ್ಲ ಎಂಬ ಮಾತನ್ನು ನಾನು ಹಿಂದೆಯೇ ಹೇಳಿದ್ದೆ. ಈ ದೇಶದ ಅತ್ಯುನ್ನತ ನ್ಯಾಯಾಲಯದ ತೀರ್ಮಾನ ಪ್ರಜಾಪ್ರಭುತ್ವದಲ್ಲಿ ದ್ವೇಷದ ರಾಜಕಾರಣಕ್ಕೆ ಜಾಗವಿಲ್ಲ ಎಂಬ ಸಂದೇಶ ಸಾರಿದೆ ಎಂದು ತಿಳಿಸಿದರು.

ಈ ವಿಚಾರವನ್ನು ಲೋಕಸಭೆ ಚುನಾವಣೆ ವಿಷಯವಾಗಿ ಬಳಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ, ‘ಈಗಾಗಲೇ ಜನ ಇದನ್ನು ಅರ್ಥ ಮಾಡಿಕೊಂಡಿದ್ದಾರೆ. ಚುನಾವಣೆಯಲ್ಲಿ 7 ಲಕ್ಷ ಮತಗಳ ಅಂತರದಲ್ಲಿ ಗೆದ್ದಂತಹವರ ಸದಸ್ಯತ್ವವನ್ನು ಯಾವ ರೀತಿ ಕುತಂತ್ರದ ಮೂಲಕ ಅನರ್ಹ ಮಾಡಿಸಿದ್ದಾರೆ ಎಂದು ಜನ ಹಾಗೂ ಇಡೀ ವಿಶ್ವ ಗಮನಿಸಿದೆ’ ಎಂದು ತಿಳಿಸಿದರು.

Related Articles

Back to top button