ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮಾದಕವಸ್ತು ನಿಯಂತ್ರಣ, ಸಂಪೂರ್ಣ ಸಾಕ್ಷರತೆ, ಭಿಕ್ಷಾಟನೆ ನಿರ್ಮೂಲನೆ ತಮ್ಮ ಮೊದಲ ಆದ್ಯತೆ ಎಂದು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಮಾದಕ ವಸ್ತು ಮಾರಾಟ ಜೋರಾಗಿ ನಡೆಯುತ್ತಿದೆ. ಅವುಗಳ ನಿಯಂತ್ರಣಕ್ಕೆ ಪೊಲೀಸರ ಜೊತೆ ಕೈ ಜೋಡಿಸುತ್ತೇನೆ. ನಗರದಲ್ಲಿ ಯಾವುದೇ ಮಗು ಶಿಕ್ಷಣವಿಲ್ಲದೆ ಇರಬಾರದು. ಹಾಗೆಯೆ ಭಿಕ್ಷಾಟನೆ ಸಂಪೂರ್ಣ ನಿಲ್ಲಬೇಕು. ಈ ದಿಸೆಯಲ್ಲಿ ಆದ್ಯತೆಯ ಮೇಲೆ ಕೆಲಸ ಮಾಡಲಾಗುವುದು ಎಂದರು.
ನಗರದ ಕೋಟೆಕೆರೆಯನ್ನು ಸುಂದರ ಪಿಕ್ ನಿಕ್ ಸ್ಪಾಟ್ ಮಾಡಲು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 5 ಕೋಟಿ ರೂ ವೆಚ್ಚ ಮಾಡಲಾಗುವುದು. ಪ್ರವೇಶ ಶುಲ್ಕ ನಿಗದಿ ಮಾಡಿ ನಿರ್ವಹಣೆ ಮಾಡಲಾಗುವುದು ಎಂದು ಬೆನಕೆ ತಿಳಿಸಿದರು.
ಹೆಚ್ಚಿನ ಅನುದಾನ ದೊರೆಯದಿದ್ದರೂ ಹಲವು ಅಭಿವೃದ್ಧಿ ಕೆಲಸ ಮಾಡಲಾಗಿದೆ. ಕೋಮುಗಲಭೆ ಸಂಪೂರ್ಣ ನಿಯಂತ್ರಿಸಲಾಗಿದೆ ಎಂದು ಶಾಸಕರು ತಿಳಿಸಿದರು.