2 ಬೇಡಿಕೆ: ಮಾರ್ಚ್ 1ರಿಂದ ರಾಜ್ಯಾದ್ಯಂತ ಸರಕಾರಿ ನೌಕರರ ಅನಿರ್ಧಿಷ್ಟಾವದಿ ಮುಷ್ಕರ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – 7ನೇ ವೇತನ ಆಯೋಗದ ವರದಿ ಜಾರಿಯಾಗಬೇಕು ಮತ್ತು ಹಳೆಯ ಪಿಂಚಣಿ ಯೋಜನೆ ಜಾರಿಯಾಗಬೇಕು ಎನ್ನುವ 2 ಬೇಡಿಕೆಗಳನ್ನು ಮುಂದಿಟ್ಟು ರಾಜ್ಯಾದ್ಯಂತ ಮಾರ್ಚ್ 1ರಿಂದ ಗೈರು ಹಾಜರಿ ಮುಷ್ಕರ ನಡೆಸಲು ರಾಜ್ಯ ಸರಕಾರಿ ನೌಕರರ ಸಂಘ ನಿರ್ಧರಿಸಿದೆ.

ಬೆಂಗಳೂರಿನಲ್ಲಿ ಈಗ ನಡೆಯುತ್ತಿರುವ ನೌಕರರ ಸಂಘದ ಸಭೆಯಲ್ಲಿ ರಾಜ್ಯಾಧ್ಯಕ್ಷ ಷಢಕ್ಷರಿ ಈ ವಿಷಯ ಪ್ರಕಟಸಿದ್ದಾರೆ. ರಾಜ್ಯಾದ್ಯಂತ ಶಾಲೆ, ಕಾಲೇಜುಗಳಿಗೆ ಗೈರಾಗಬೇಕು. ತಾಲೂಕು, ಜಿಲ್ಲಾ ಮಟ್ಟದಲ್ಲಿ ತಂಡ ರಚನೆ  ಮಾಡಿ ಯಾರಾದರೂ ಕಚೇರಿಗಳಿಗೆ ಹಾಜರಾಗಲು ಮುಂದಾದರೆ ಅವರನ್ನು ತಡೆಯಬೇಕು ಎಂದು ಕರೆ ನೀಡಿದ್ದಾರೆ.

ಆರೋಗ್ಯ ಇಲಾಖೆಯ ತುರ್ತು ಸೇವೆ ಹೊರತುಪಡಿಸಿ ಯಾವುದೇ ಇಲಾಖೆಗಳು ಕೆಲಸ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು.

ಇದು ಅಸಹಕಾರ ಚಳವಳಿ. ಎಲ್ಲರೂ ಮನೆಯಲ್ಲೇ ಇರಬೇಕು. ಪ್ರತಿಭಟನೆ, ಧರಣಿ ಇರುವುದಿಲ್ಲ. ಯಾವುದೇ ಟೀಕೆ ಮಾಡುವಂತಿಲ್ಲ. ಸರಕಾರಿ ಆದೇಶಕ್ಕೆ ಮಾತ್ರ ನನ್ನ ಒಪ್ಪಿಗೆ ಇದೆ, ಯಾವುದೇ ಮಾತುಕತೆಗೆ ಹೋಗಲ್ಲ ಎಂದು ಘೋಷಿಸಿದರು. ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ನಾನು ಯಾವತ್ತೂ ನೌಕರರ ಜೊತೆ ಇರುತ್ತೇನೆ. ಯಾವುದೇ ಆಮಿಷಕ್ಕೆ ಬಲಿಯಾಗುವುದಿಲ್ಲ. ಶಾಸಕನನ್ನಾಗಿ ಮಾಡುತ್ತೇನೆಂದರೂ ಹೋಗುವುದಿಲ್ಲ ಎಂದು ಷಡಾಕ್ಷರಿ ಹೇಳಿದರು.

Home add -Advt

ಬೆದರಿಕೆ ಹಾಕಬಹುದು. ಪ್ರಕರಣ ದಾಖಲಿಸುವ, ಡಿಸ್ ಮಿಸ್ ಹಾಕುವ ಬೆದರಿಕೆ ಹಾಕಬಹುದು. ಯಾವುದಕ್ಕೂ ಹೆದರಬೇಡಿ. ಎದೆಗುಂದಬೇಡಿ. ಎಸ್ಮಾ ಬೆದರಿಕೆ ಹಾಕಬಹುದು. ಆದರೆ ಯೋಚಿಸಬೇಡಿ. ಪರೀಕ್ಷೆಗಳನ್ನು ಯಾರು ಮಾಡುತ್ತಾರೆ? ಚುನಾವಣೆ ಯಾರು ಮಾಡುತ್ತಾರೆ? ನೋಡೋಣ. ಆಸ್ಪತ್ರೆಗಳಲ್ಲಿ ತುರ್ತು ಸೇವಾ ವಿಭಾಗದಲ್ಲಿ ಮಾತ್ರ ಕಪ್ಪು ಪಟ್ಟಿ ಧರಿಸಿ ಹಾಜರಾಗಬೇಕು ಎಂದು ತಿಳಿಸಿದರು.

ಎಲ್ಲ ನಗರ ಸಭೆಗಳಲ್ಲಿ ನೀರು ಬಿಡುವುದಿಲ್ಲ, ಕಸ ಎತ್ತುವುದಿಲ್ಲ, ಯಾವ ಇಲಾಖೆಯವರೂ ಕೆಲಸ ಮಾಡುವಂತಿಲ್ಲ. ಫೆ.22ರಂದು ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸುವುದು.

ಪ್ರಾಥಮಿಕ ಶಾಲೆ ಶಿಕ್ಷಕರು ಸಹ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು. ದಾರಿ ತಪ್ಪಿಸುವವರಿರುತ್ತಾರೆ. ಯಾರಾದರೂ ಕೆಲಸ ಮಾಡುತ್ತಿದ್ದರೆ ಅವರನ್ನು ಹೊರಗೆ ಕಳಿಸಿ. ಯಾವ ಕೇಸ್ ಹಾಕಿದರೂ ಹೆದರುವುದಿಲ್ಲ. ಎಲ್ಲರೂ ಮನೆಯಲ್ಲೇ ಇರಬೇಕು. ಟೂರ್ ಹೋಗಬೇಡಿ ಎಂದು ತಿಳಿಸಿದರು.

ವಿವಿಧ ಇಲಾಖೆಯ ಪ್ರತಿನಿಧಿಗಳು ಪಾಲ್ಗೊಂಡು ಮುಷ್ಕರಕ್ಕೆ ಬೆಂಬಲ ಸೂಚಿಸಿದರು.

 

ಕೆಲವೇ ಹೊತ್ತಿನಲ್ಲಿ ಸರಕಾರಿ ನೌಕರರ ಸಂಘದ ಮಹತ್ವದ ಸಭೆ: ಸರಕಾರದ ವಿರುದ್ಧ ಸಿಡಿದೇಳ್ತಾರಾ ನೌಕರರು?

https://pragati.taskdun.com/an-important-meeting-of-the-government-employees-union-will-be-held-today-will-it-erupt-against-the-government/

Related Articles

Back to top button