ಪ್ರಗತಿವಾಹಿನಿ ಸುದ್ದಿ ಬೆಂಗಳೂರು
ತಮಗೆ 50 ಕೋಟಿ ರೂ. ಲಂಚ ನೀಡಲಾಗಿದೆ ಎನ್ನುವ ಧ್ವನಿ ಹೊಂದಿರುವ ಆಡಿಯೋ ವಿಷಯವನ್ನು ಸೋಮವಾರ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಸ್ಪೀಕರ್ ರಮೇಶ ಕುಮಾರ, ಈ ಸ್ಥಾನದಲ್ಲಿ ಮುಂದುವರಿಯಲು ಮನಸ್ಸು ಒಪ್ಪುವುದಿಲ್ಲ ಎಂದರು.
ಈ ವಿಷಯದ ಕುರಿತು ತೀವ್ರ ನೊಂದು ಮಾತನಾಡಿದ ಅವರು, ಈ ಬೆಳವಣಿಗೆಯಿಂದ ತೀರಾ ನೋವಾಗಿದೆ. ನೋವನ್ನು ನುಂಗಿಕೊಳ್ಳಲು ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನಾನು ಇಲ್ಲಿ ಸರಕಾರ ಬಂಗಲೆಯಲ್ಲಿಲ್ಲ. ಬಾಡಿಗೆ ಮನೆಯಲ್ಲಿದ್ದೇನೆ. ಅಷ್ಟೊಂದು ಹಣ ಪಡದರೆ ಇಟ್ಟುಕೊಳ್ಳುವುದೆಲ್ಲಿ? ಒಂದೋ ಆರೋಪ ಮಾಡಿದವರು ರಾಜಕೀಯದಿಂದ ಹೊರನಡೆಯಬೇಕು, ಇಲ್ಲವಾದರೆ ನಾನು ಹೊರಗೆ ಹೋಗಬೇಕು. ನಾನು ಅವಕಾಶವಾದಿಯಲ್ಲ. ನನಗೆ ಏಕೆ ಈ ಅನ್ಯಾಯ? ನಾವg ಎಲ್ಲಿಗೆ ಬಂದು ತಲುಪಿದ್ದೇವೆ? ಎಂದು ರಮೇಶ್ ಕುಮಾರ್ ಕಣ್ಣೀರು ಹಾಕಿದರು.
ವಾಜಪೇಯಿ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ, ಅವರನ್ನು ಅವಕಾಶವಾದಿ ಎಂದು ಆರೋಪಿಸಿದ್ದ ಘಟನೆಯನ್ನು ಸ್ಮರಿಸಿಕೊಂಡ ರಮೇಶಕುಮಾರ, ನಾನು ಸಾವಿಗೆ ಭಯಪಡುವುದಿಲ್ಲ, ಆದರೆ ನನ್ನ ಚಾರಿತ್ರ್ಯವಧೆ ಮಾಡುವುದು ಸಾವಿಗಿಂತಲು ಕೆಟ್ಟದ್ದು ಎಂದು ವಾಜಪೇಯಿ ಹೇಳಿದ್ದರು. 40 ವರ್ಷದಿಂದ ನನ್ನನ್ನು ನೋಡಿದ್ದೀರಿ, ನನ್ನನ್ನು ಅವಕಾಶವಾದಿ ಎಂದು ಕರೆದಿದ್ದೀರಲ್ಲ. ವಾಜಪೇಯಿ ಅವರ ಕಾಲಿನ ದೂಳಿಗೂ ನಾನು ಸಮನಲ್ಲ. ಆದರೆ, ಅವರು ನಮಗೆ ಆದರ್ಶಪ್ರಾಯ. ಅವರ ಮಾತುಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ ಎಂದು ಗದ್ಗದಿತರಾದರು.
ಇಂತಹ ಆರೋಪವನ್ನು ಹೊತ್ತುಕೊಂಡು ಹೇಗೆ ಇರಲು ಸಾಧ್ಯ? ಹೊರಗಿನವರು ಈ ಆರೋಪ ಮಾಡಿದ್ದರೆ ನಾನು ಯೋಚಿಸುತ್ತಿರಲಿಲ್ಲ. ಈ ಸದನಕ್ಕೆ ಸಂಬಂಧಿಸಿದ್ದವರೇ ಮಾತನಾಡಿದ್ದಾರೆ. ನಾನು ಹೆಂಡತಿ, ಮಕ್ಕಳಿಗೆ ಮುಖ ತೋರಿಸಲು ಸಾಧ್ಯವಿಲ್ಲ. ಬದುಕಿರುವ ಒಬ್ಬ ಅಣ್ಣ ನನ್ನ ಮೇಲೆ ಜೀವ ಇಟ್ಟುಕೊಂಡಿದ್ದಾನೆ. ಆತನನ್ನು ಎದುರಿಸಲಾರೆ. ಇದರಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎಂದು ರಮೇಶ್ ಕುಮಾರ್ ಹೇಳಿದರು.
ಈ ಸಂಬಂಧ ಸದನದಲ್ಲಿ ಚರ್ಚೆ ನಡೆಯುವ ವೇಳೆ ಶಾಸಕ ಶಿವನಗೌಡ ನಾಯಕ ಸದನದಿಂದ ಎದ್ದು ಹೊರ ನಡೆದರು.