*ಪವಿತ್ರಾ ಗೌಡಗೆ ಮನೆಯೂಟ ಆದೇಶ ಮಾರ್ಪಡಿಸಿದ ಕೋರ್ಟ್*

ಪ್ರಗತಿವಾಹಿನಿ ಸುದ್ದಿ: ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡಗೆ ಜೈಲಿನಲ್ಲಿ ಮನೆಯೂಟ ವ್ಯವಸ್ಥೆ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್ ಆದೇಶದಲ್ಲಿ ಮಾರ್ಪಡಿಸಲಾಗಿದೆ.
ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಪವಿತ್ರಾ ಗೌಡ ತನಗೆ ಜೈಲೂಟದಿಂದ ಸಮಸ್ಯೆಯಾಗುತ್ತಿದೆ. ಪ್ರತಿ ದಿನ ಮನೆಯೂಟ ನೀಡಲು ಅವಕಾಶ ನೀಡುವಂತೆ ಕೋರ್ಟ್ ಮೊರೆ ಹೋಗಿದ್ದರು. ಇದಕ್ಕೆ ಕೋರ್ಟ್ ಕೂಡ ಪ್ರತಿದಿನ ಮನೆಯೂಟ ತಂದು ಕೊಡಲು ಅವಕಾಶ ನೀಡಿತ್ತು. ಆದರೆ ಜೈಲಾಧಿಕಾರಿಗಳು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಕೊಲೆ ಆರೋಪಿ ಪವಿತ್ರಾ ಗೌಡಳಿಗೆ ಜೈಲಿನಲ್ಲಿ ಮನೆಯೂಟ ತಂದುಕೊಡಲು ಅವಕಾಶ ನೀಡಿದರೆ ಜೈಲಿನ ಇತರ ಕೈದಿಗಳು ಈ ಬಗ್ಗೆ ಮನವಿ ಮಾಡುತ್ತಾರೆ. ಹಾಗಾಗಿ ಪವಿತ್ರಾ ಗೌಡಗೆ ಮನೆಯೂಟಕ್ಕೆ ಅವಕಾಶ ಕೊಡಬಾರದು ಎಂದು ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ಪವಿತ್ರಾಗೌಡಗೆ ಮನೆಯೂಟ ಆದೇಶದಲ್ಲಿ ಮಾರ್ಪಡಿಸಿದೆ. ಪ್ರತಿದಿನ ಮನೆಯೂಟ ತಂದು ಕೊಡಲು ಅವಕಾಶವಿಲ್ಲ. ಆದರೆ ವಾರದಲ್ಲಿ ಒಂದು ದಿನ ಮಾತ್ರ ಮನೆಯೂಟ ನೀಡಲು ಅವಕಾಶವಿದೆ ಎಂದು ಆದೆಶದಲ್ಲಿ ಮಾರ್ಪಡಿಸಿದೆ.




