*ಕ್ರೀಡೆ ಬದುಕಿನ ಅವಿಭಾಜ್ಯ ಭಾಗ: ಪೊಲೀಸ್ ಆಯುಕ್ತ ಬೊರಸೆ ಭೂಷಣ್ ಗುಲಾಬರಾವ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕ್ರೀಡೆ ನಮ್ಮ ಬದುಕಿನ ಅವಿಭಾಜ್ಯ ಭಾಗವಾಗಿದೆ. ಒಳ್ಳೆಯ ಆರೋಗ್ಯ ನಮ್ಮ ಬದುಕಿನಲ್ಲಿ ಭರವಸೆಯನ್ನು ಹೊತ್ತು ತರುತ್ತದೆ. ಒಳ್ಳೆಯ ಆರೋಗ್ಯ ಹೊಂದಲು ಕ್ರೀಡೆ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಮಾನ್ಯ ಪೊಲೀಸ್ ಆಯುಕ್ತ ಬೊರಸೆ ಭೂಷಣ್ ಗುಲಾಬರಾವ್ ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿ ಒಕ್ಕೂಟ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನ ಪ್ರತಿಯೊಬ್ಬರ ಬದುಕಿನ ಮಹತ್ತರ ಘಟ್ಟ. ವಿಧ್ಯಾರ್ಥಿಗಳು ತಮ್ಮ ಸಮಯದ ಸದುಪಯೋಗ ಪಡೆಯಬೇಕು ಮತ್ತು ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾನ್ಯ ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ ಇವರು ಮಾತನಾಡಿ, ಕ್ರೀಡೆ ಮನಸ್ಸಿಗೆ ಹೊಸ ಚೇತನ ತರುತ್ತದೆ. ಸಮತೋಲನದ ಬದುಕನ್ನು ಹೊಂದಲು ಕ್ರೀಡೆ ಮತ್ತು ವ್ಯಾಯಾಮ ಅತ್ಯಗತ್ಯ, ಹೀಗಾಗಿ ಪ್ರತಿಯೊಬ್ಬರು ತಮ್ಮ ವೈಯಕ್ತಿಕ ಜೀವನದಲ್ಲಿ ಕ್ರೀಡೆ ಮತ್ತು ವ್ಯಾಯಾಮಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು.
ಕಾರ್ಯಕದಲ್ಲಿ ಕುಲಸಚಿವ ಸಂತೋಷ ಕಾಮಗೌಡ,ವಿದ್ಯಾರ್ಥಿ ಒಕ್ಕೂಟದ ನಿರ್ದೇಶಕಿ ಡಾ. ಸುಷ್ಮಾ ಆರ್, ಕ್ರೀಡಾ ಸಂಯೋಜಕ ಡಾ.ಚಂದ್ರಶೇಖರ ಬನಸೋಡೆ, ಪ್ರಧಾನ ಕಾರ್ಯದರ್ಶಿ ಸಮರ್ಥ ಹಿರೇಕೊಡಿ, ಕ್ರೀಡಾ ಕಾರ್ಯದರ್ಶಿಗಳಾದ ಭಾರತಿ ನಾಯಕ, ಯಲ್ಲಪ್ಪ ಭಜಂತ್ರಿ ಸೇರಿದಂತೆ ಪ್ರಾಧ್ಯಾಪಕರು, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
