ಸಾಂಸ್ಕೃತಿಕ ನಗರಿಯಲ್ಲಿ ಓರ್ವನಿಂದ ನಾಲ್ವರಿಗೆ ಹರಡಿದ ಕೊರೊನಾ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚುತ್ತಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೆ ಐದು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 82ಕ್ಕೆ ಏರಿಕೆಯಾಗಿದೆ
ಮೈಸೂರಿನ ನಂಜನಗೂಡಿನ ಸೋಂಕಿತನ ಜೊತೆ ಸಂಪರ್ಕ ಹೊಂದಿದ್ದ ಐವರಲ್ಲಿ ಕೊರೊನಾ ಕಂಡು ಬಂದಿದೆ. ಮೊದಲಿಗೆ ಜುಬಿಲೆಟ್ಸ್ ಕಾರ್ಖಾನೆಯ ಉದ್ಯೋಗಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಒಂದೇ ಕಾರ್ಖಾನೆಯ ಐವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಮೊದಲ ಸೋಂಕಿತನಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕೊರೊನಾ ಮೂರನೇ ಸ್ಟೇಜ್ ತಲುಪಿದೆ ಎಂಬ ಆತಂಕ ಹೆಚ್ಚುತ್ತಿದೆ. ಕಾರ್ಖಾನೆಯ ಸಿಬ್ಬಂದಿಯ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ.
ಮೈಸೂರು ಜಿಲ್ಲೆಯಲ್ಲಿಯೇ 8 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮಧ್ಯರಾತ್ರಿಯಿಂದಲೇ ನಂಜನಗೂಡು ನಗರವನ್ನು ಸಂಪೂರ್ಣವಾಗಿ ಲಾಕ್ಡೌನ್ ಮಾಡಲಾಗಿದೆ. ನಂಜನಗೂಡಿಗೆ ಒಳ ಮತ್ತು ಹೊರ ಹೋಗುವ ಎಲ್ಲ ವಾಹನಗಳ ಮೇಲೆ ನಿರ್ಬಂಧ ಹಾಕಲಾಗುತ್ತಿದೆ. ನಂಜನಗೂಡಿಗೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.




