*ಗುಡ್ಡವೊಂದರಲ್ಲಿ ನಡೆದ ರಹಸ್ಯ ಕೊಲೆ ಪ್ರಕರಣ ಭೇದಿಸಿದ ಬೆಳಗಾವಿಯ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ತವಂದಿ ಗ್ರಾಮದ ಗುಡ್ಡದಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು ಭೇದಿಸಿರುವ ಬೆಳಗಾವಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿವಲ್ಲಿ ಯಶಸ್ವಿಯಾಗಿದ್ದಾರೆ.
ನಿಪ್ಪಾಣಿ ತಾಲೂಕಿನ ಹೊಳೆ ಹಿಟ್ಟಿ ನಿವಾಸಿ ಮೊಹಮ್ಮದ್ ಶಮಶೇರ ಖಲೀಫ್ ಅವರ ಕೊಲೆ ಆಗಿತ್ತು. ಆಗಸ್ಟ್ 25ರ ರಾತ್ರಿ ಮೊಹಮ್ಮದ್ ಶಮಶೇರ ಖಲೀಫ್ ಅವರನ್ನು ಬೈಕ್ ನಲ್ಲಿ ಕರೆದೊಯ್ದಿದ್ದ ಇಬ್ಬರು, ತವಂದಿ ಗುಡ್ಡದಲ್ಲಿ ಹತ್ಯೆಗೈದಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ನಿಪ್ಪಾಣಿ ಪೊಲೀಸರು ವಿಶೇಷ ತಂಡ ತನಿಖೆ ಕೈಗೆತ್ತಿಕೊಂಡಿತ್ತು.
ಪ್ರಕರಣವನ್ನು ತನಿಖೆ ತಡೆಸಿದ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು, ಯುವರಾಜ್ ಮುನ್ನೋಳಿ ಹಾಗೂ ಸ್ವಪ್ಟಿಲ್ ರಾಂಪೂರೆ (21 ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಯುವರಾಜ್ ಮುನ್ನೋಳಿ, ಮೃತನ ಹಿರಿಯ ಮಗಳನ್ನು ಪ್ರೀತಿಸುತ್ತಿದ್ದನು. ಈ ವಿಚಾರವಾಗಿ ಪಂಚಾಯಿತಿ ನಡೆದು ರಾಜಿಯಾಗಿದ್ದರೂ, ಇಬ್ಬರ ನಡುವೆ ದ್ವೇಷ ಹೊಗೆಯಾಡುತ್ತಿತ್ತು.
ಮೃತ ಖಲೀಫ್ ಊರಿನ ಹಿರಿಯ ರಾವ್ಸಾಬ್ ಪಾಟೀಲ್ ಜೊತೆ ನಿಕಟವಾಗಿದ್ದರು. ತನ್ನ ಮೇಲೆ ಹಲ್ಲೆ ನಡೆಸಲು ಖಲೀಫ್ ಸಂಚು ರೂಪಿಸಿದ್ದಾನೆ ಎಂಬ ಶಂಕೆಯಿಂದ ಯುವರಾಜ್ ಮತ್ತು ಆತನ ಸ್ನೇಹಿತ ಸ್ವಪ್ಟಿಲ್ ರಾಂಪೂರೆ (21) ಸೇರಿ ಖಲೀಫ್ ಅವರನ್ನು ಗುಡ್ಡಕ್ಕೆ ಕರೆದೊಯ್ದಿದ್ದಾರೆ.
ಈ ವೇಳೆ ಮಾತಿಗೆ ಮಾತು ಬೆಳೆದು, ಆರೋಪಿಗಳು ಮಾರಕಾಸ್ತ್ರದಿಂದ ಚುಚ್ಚಿ ಹಾಗೂ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕ್ರೂರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಪುಣೆಯಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ಸುದೀರ್ಘ ವಿಚಾರಣೆಗೊಳಪಡಿಸಿದಾಗ ಈ ಅಸಲಿ ರಹಸ್ಯ ಬಯಲಾಗಿದೆ.
ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೊಲೆಗಾರರನ್ನು ಕಂಬಿ ಹಿಂದೆ ತಳ್ಳಿದ ಪೊಲೀಸ್ ತಂಡದ ಕಾರ್ಯವೈಖರಿಗೆ ಹಿರಿಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.




