Karnataka NewsLatestPolitics

*ಯುಪಿಐ ಪಾವತಿಗೆ ಶುಲ್ಕ: ಕೇಂದ್ರ ಸರ್ಕಾರದಿಂದ ಜನಸಾಮಾನ್ಯರ ಹೊಸ ಪಿಕ್ ಪಾಕೆಟ್‌: ಸಿಎಂ ಡಿ.ಕೆ.ಶಿವಕುಮಾರ್ ಕಿಡಿ*

ಕೇಂದ್ರದಿಂದ ದೊಡ್ಡ ಉದ್ಯಮಿಗಳ ಸಾಲಮನ್ನಾ

ಪ್ರಗತಿವಾಹಿನಿ ಸುದ್ದಿ: “ಯುಪಿಐ ಪಾವತಿಗೆ ವರ್ತಕರ ಮೇಲೆ ಶುಲ್ಕ ವಿಧಿಸಿರುವ ಕೇಂದ್ರ ಸರ್ಕಾರ ಪಿಕ್ ಪಾಕೆಟ್ ಮಾಡುತ್ತಿದೆ. ಶಿಕ್ಷಕರಿಗೆ Tr. ಎಂಜಿನಿಯರ್ ಗಳಿಗೆ Er. ಪದನಾಮ ನೀಡಿರುವಂತೆ ಕೇಂದ್ರ ಸರ್ಕಾರದ ಎಲ್ಲಾ ಸಚಿವರಿಗೂ ಪಿಕ್ ಪಾಕೆಟ್ ನಲ್ಲಿ ಪಿಎಚ್ ಡಿ ನೀಡಬೇಕಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ವ್ಯಂಗ್ಯವಾಡಿದರು.

Home add -Advt

ಐವಾನ್ ಇ ಶಾಹಿ ಅತಿಥಿಗೃಹದಲ್ಲಿ ಶಿವಕುಮಾರ್ ಅವರು ಗುರುವಾರ ನಡೆದ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದರು.

“ನಮ್ಮೆಲ್ಲ ವರ್ತಕರು ಈಗ ಕೇಂದ್ರ ವಿಧಿಸಲು ಹೊರಟಿರುವ ಯುಪಿಐ ಶುಲ್ಕದ ಭಾರವನ್ನ ಗ್ರಾಹಕರ ಮೇಲೆ ಹಾಕುತ್ತಾರೆ. ಇದು ಕೇಂದ್ರ ಸರ್ಕಾರದಿಂದ ಜನಸಾಮಾನ್ಯರ ಹೊಸ ಪಿಕ್ ಪಾಕೆಟ್‌. ನಾನು ಇದನ್ನು ಖಂಡಿಸುತ್ತೇನೆ‌. ಯಪಿಐ ಶುಲ್ಕ ಜಾರಿಯ ವಿರುದ್ದ ವಿರುದ್ಧ ಪ್ರತಿಭಟನೆ ಮಾಡಲೇ ಬೇಕಾಗುತ್ತದೆ. ಹೊರಗಿನ ದೇಶದ ವರ್ತಕರಿಗೆ ಅನುಕೂಲ ಮಾಡಿಕೊಡಲು ಇಂಥ ಘೋರ ತೀರ್ಮಾನ ಮಾಡಲಾಗಿದೆ. ಇದನ್ನು ವಾಪಸ್ಸು ಪಡೆದು ಮೊದಲಿನ ಸ್ಥಿತಿಯನ್ನೇ ತರಲು ಒತ್ತಾಯ ಮಾಡುತ್ತೇವೆ” ಎಂದರು.

“ಯಾವ ಕಾರಣಕ್ಕೆ ಕ್ಯಾಸ್ ಲೆಸ್ ಇಂಡಿಯಾ ಎಂದು ಅವರು ಕರೆದರು. ನೋಟು ಬ್ಯಾನ್ ಮಾಡಿದ್ದು ಯಾವ ಕಾರಣಕ್ಕೆ ಈಗ ಮತ್ತೆ ಹಳೆಯ ಪದ್ದತಿ ಕಡೆಗೆ ಹೋಗುವಂತೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರಕ್ಕೆ ಎನ್ ಪಿಸಿಐ (NPCI) ತೆರಿಗೆ ರಹಿತ ಲಾಭವೇ 6,119 ಕೋಟಿ” ಎಂದು ಹೇಳಿದರು.

ಕುಮಾರಸ್ವಾಮಿ ಅವರ ಬಳಿ ಮಾತನಾಡುವೆ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವ ಬಗ್ಗೆ ಕೇಳಿದಾಗ ಬಗ್ಗೆ “ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರ ಬಳಿ ಮಾತನಾಡುತ್ತೇನೆ. ಅವರಿಗೆ ಎಲ್ಲಿ ಬೇಕೋ ಅಲ್ಲಿ ಜಾಗ ಕೊಡೋಣ” ಎಂದರು.

ಬಿಜೆಪಿಯವರಿಗೆ ರಾಜಕೀಯವೇ ಮುಖ್ಯ

“ಬಿಜೆಪಿಯವರಿಗೆ ರಾಜಕೀಯವೇ ಮುಖ್ಯ. ರೈತರು ಹಾಗೂ ಬಡವರ ಬಗ್ಗೆ ಅವರಿಗೆ ಕಾಳಜಿ ಇಲ್ಲ. ವಿಧಾನಮಂಡಲದ ಅಧಿವೇಶನವನ್ನು ನಡೆಸಲು ಕೂಡ ಬಿಡಲಿಲ್ಲ. ಆ ಪಕ್ಷದ ಶಾಸಕರೇ ನಮ್ಮ ಬಳಿ ಬಂದು ಗೋಳು ತೋಡಿಕೊಂಡಿದ್ದಾರೆ. ಅವರು ಏನು ಬೇಕಾದರೂ ಮಾಡಲಿ ಎಂದು ತೀರ್ಮಾನಿಸಿ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ಕಸ್ತೂರಿ ರಂಗನ್ ವರದಿ, ಬರಗಾಲ ಹಾಗೂ ರೈತರ ಸಮಸ್ಯೆ ಬಗ್ಗೆ ಚರ್ಚಿಸಲಾಗುವುದು. ಇದನ್ನು ಬಿಟ್ಟರೆ ಬೇರೆ ಯಾವ ಚರ್ಚೆಯೂ ನಡೆಯುವುದಿಲ್ಲ” ಎಂದರು.

ವಿರೋಧ ಪಕ್ಷದವರು ಚರ್ಚೆಗೆ ಅವಕಾಶ ನೀಡುತ್ತಾರೆಯೇ ಎಂದು ಕೇಳಿದಾಗ, “ಅವರು ಏನೂ ಮಾಡಿದರೂ ನಾವಂತೂ ಚರ್ಚೆಗೆ ಸಿದ್ದ. ಅವರಿಗೆ ಆಸಕ್ತಿ ಇದೆಯೋ ಇಲ್ಲವೋ ಗೊತ್ತಿಲ್ಲ‌. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಚರ್ಚೆಗೆ ಅವಕಾಶ ಕಲ್ಪಿಸಿಕೊಳ್ಳಲು ನಮಗೂ ಅಲ್ಪ ಸ್ವಲ್ಪ ಅರಿವಿದೆ” ಎಂದರು.

ಸಾಲಮನ್ನಾ ಬಗ್ಗೆ ಅಧಿವೇಶನದಲ್ಲಿ ವಿಪಕ್ಷಗಳು ಸಲಹೆ ನೀಡಲಿ

ಬರಪೀಡಿತ ತಾಲ್ಲೂಕುಗಳ ರೈತರ ಸಾಲ ಪಾವತಿ, ವಸೂಲಾತಿಯನ್ನು ಬ್ಯಾಂಕ್ ಗಳು ಒಂದು ವರ್ಷ ಮುಂದೂಡಿರುವ ಬಗ್ಗೆ ಕೇಳಿದಾಗ, “ಮೂರು ದಿನ ತಡೆಯಿರಿ. ಬ್ಯಾಂಕುಗಳ ಜೊತೆಗೆ ಮಾತನಾಡಬೇಕು. ಸಾಲ ಮನ್ನಾ ಮಾಡಿ ಎಂದು ಕೆಲಸವರು ಹೇಳಿದ್ದಾರೆ. ಆರ್.ಅಶೋಕ್, ವಿಜಯೇಂದ್ರ ಅವರನ್ನೆಲ್ಲಾ ಕರೆದುಕೊಂಡು ನವದೆಹಲಿಗೆ ಪ್ರಧಾನಿಗಳನ್ನು ಭೇಟಿ ಮಾಡಲು ಹೋಗಬೇಕಲ್ಲಾ. ಕೇಂದ್ರ ಸರ್ಕಾರ ದೊಡ್ಡ ದೊಡ್ಡವರ ಸಾಲ ಮನ್ನಾವನ್ನು ಒಂದೇ ಏಟಿಗೆ ಮಾಡುತ್ತಿದ್ದಾರೆ. ಅದೇ ರೀತಿ ನಮ್ಮ ರೈತರನ್ನೂ ಬದುಕಿಸಿ ಎಂದು ಅವರೆಲ್ಲಾ ಹೇಳಲು ಬರಬೇಕಲ್ಲ. ವಿಧಾನಮಂಡಲದಲ್ಲಿ ಅವರು ಈ ಬಗ್ಗೆ ಸಲಹೆಗಳನ್ನು ನೀಡಲಿ” ಎಂದು ಹೇಳಿದರು.

ಬರ ಘೋಷಣೆಯಾಗದಿರುವ ತಾಲ್ಲೂಕುಗಳ ರೈತರ ಬಗ್ಗೆ ಅಧಿವೇಶನದಲ್ಲಿ ಘೋಷಣೆ

ಬರ ಘೋಷಣೆಯಾಗದಿರುವ ತಾಲ್ಲೂಕುಗಳ ರೈತರ ಪರವಾಗಿ ಸರ್ಕಾರ ನಿಲ್ಲಲಿದೆಯೇ ಎಂಬ ಪ್ರಶ್ನೆಗೆ “ಈಗ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ವರದಿಯೂ ಈಗಷ್ಟೇ ಬಂದಿದೆ ಶೀಘ್ರದಲ್ಲೇ ಘೋಷಿಸಲಾಗುವುದು” ಎಂದರು.

ಘೋಷಣೆಗಳಿಗೆ ಅನುಗುಣವಾಗಿ ಅನುದಾನ ಹಂಚಿಕೆ

ಕಲ್ಬುರ್ಗಿ ಜಿಲ್ಲೆಯ ಕಲ್ಯಾಣಕ್ಕಾಗಿ ಮಾಡಿರುವ ಘೋಷಣೆಗಳಿಗೆ ಅನುದಾನದ ಪೂರೈಕೆ ಬಗ್ಗೆ ಕೇಳಿದಾಗ, “ಕೆಕೆಆರ್ ಡಿ ಬಿಯ ಅನುದಾನವೂ ಸರ್ಕಾರದ ಅನುದಾನವೇ ಆಗಿರುತ್ತದೆ. ನಾನು ಆಡಳಿತ ಪಕ್ಷದ ಮುಖ್ಯಮಂತ್ರಿಯಾಗಿ ಹೇಳುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದ ಜನರು ನಮ್ಮ ಸರ್ಕಾರದ ಮೇಲೆ ಅಪಾರ ವಿಶ್ವಾಸವನ್ನಿಟ್ಟಿದ್ದಾರೆ. ಸರ್ಕಾರ ಹಾಗೂ ಸರ್ಕಾರದ ಭಾಗವೇ ಆಗಿರುವ ಕೆಕೆಆರ್ ಡಿ ಬಿ ಯೂ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಘೋಷಣೆ ಮಾಡಿರುವ ಕಾರ್ಯಕ್ರಮಗಳಿಗೆ ಅನುಗುಣವಾಗಿ ಸೂಕ್ತ ಅನುದದಾನವನ್ನು ಪೂರೈಸಲಾಗುವುದು” ಎಂದರು.

ಅವಕಾಶವಿರುವ ಕಡೆ ಮೋಡ ಬಿತ್ತನೆ

ಮೋಡ ಬಿತ್ತನೆ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಕೇಳಿದಾಗ, “ಕಳೆದೊಂದು ವಾರದಿಂದ, ಅವಕಾಶವಿರುವ ಕಡೆಗಳಲ್ಲಿ ಮೋಡಬಿತ್ತನೆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ”ಎಂದರು.

ಮಹಾರಾಷ್ಟ್ರದಿಂದ ಭೀಮಾನದಿ ನೀರು ಅತಿ ಬಳಕೆ- ಮಹಾರಾಷ್ಟ್ರ ಸಿಎಂ ಜೊತೆ ಚರ್ಚೆ

ಮಹಾರಾಷ್ಟ್ರದ ಹಂತದಲ್ಲಿಯೇ ಭೀಮಾ ನದಿ ನೀರಿನ ಅತಿಯಾದ ಬಳಕೆ ಬಗ್ಗೆ ಕೇಳಿದಾಗ, “ಮಹಾರಾಷ್ಟ್ರದಲ್ಲಿಯೇ ಭೀಮಾನದಿ ನೀರಿನ ಅತಿಯಾದ ಬಳಕೆಯಾಗುತ್ತಿರುವ ಸ್ಥಳೀಯ ಶಾಸಕರು ಮಾಹಿತಿ ನೀಡಿದ್ದಾರೆ. ಇದರಿಂದ ಗಡಿ ಜಿಲ್ಲೆಗಳಿಗೆ ಕುಡಿಯುವ ನೀರಿಗೆ ತೊಂದರೆಯುಂಟಾಗಿದೆ. ಈ ಬಗ್ಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಿದ್ದೇನೆ” ಎಂದರು.

ಕರಾವಳಿ ಪ್ರವಾಸೋದ್ಯಮ ಸಚಿವ ಸಂಪುಟದಲ್ಲಿ ತೀರ್ಮಾನ

ಹಿಂದುಳಿದ ಜಿಲ್ಲೆಗಳಲ್ಲೂ ಸಚಿವ ಸಂಪುಟಸಭೆ ನಡೆಸುವ ಬಗ್ಗೆ ಕೇಳಿದಾಗ, “ಮಂಗಳೂರು ಜಿಲ್ಲೆಯಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ನಡೆಯಲಿದೆ. ಆ ಭಾಗದ ಶಾಸಕರು, ಜನಪ್ರತಿನಿಧಿಗಳು ಹಾಗೂ ಮುಖಂಡರು ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಅನೇಕ ವಿಚಾರಗಳನ್ನು ತಿಳಿಸಿದ್ದಾರೆ. ಕರಾವಳಿ ಮತ್ತು ಮಲೆನಾಡು ಭಾಗದ ಅಭಿವೃದ್ಧಿಗೆ ಪ್ರವಾಸೋದ್ಯಮ ನೀತಿ ಬಗ್ಗೆ ಚರ್ಚಿಸಿದ್ದು, ನಾಳೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

“ಪ್ರದೇಶವಾರು ನಡೆದ ಸಚಿವ ಸಂಪುಟ ಸಭೆಗಳಲ್ಲಿ ಘೋಷಿಸಲಾದ ಕಾರ್ಯಕ್ರಮಗಳು ಹಾಗೂ ಅದಕ್ಕೆ ಬಿಡುಗಡೆಯಾದ ಅನುದಾನಗಳ ವಿವರಗಳನ್ನು ಸಧ್ಯದಲ್ಲಿಯೇ ನೀಡಲಾಗುವುದು” ಎಂದರು.

ತುಂಗಭಧ್ರಾ ನೀರು ಉಳಿಸಲು ಒಮ್ಮತದ ಐತಿಹಾಸಿಕ ತೀರ್ಮಾನ

“ತುಂಗಭದ್ರಾದಲ್ಲಿ 33 ಟಿಎಂಸಿ ನೀರು ವ್ಯರ್ಥವಾಗುತ್ತಿದ್ದು, ಆಂಧ್ರಪ್ರದೇಶಕ್ಕೆ ಹರಿದುಹೋಗುತ್ತಿದೆ. ತುಂಗಭದ್ರಾ ನೀರು ಪೋಲಾಗುವುದನ್ನು ತಪ್ಪಿಸುವ ಬಗ್ಗೆ ನಾನು, ಆಂಧ್ರಪ್ರದೇಶ ಹಾಗೂ ತೆಲಂಗಾಣ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ಒಮ್ಮತಕ್ಕೆ ಬಂದಿದ್ದೇವೆ. ಗೋದಾವರಿ, ಕೃಷ್ಣೆ, ಕಾವೇರಿ ಜೋಡಣೆ ಬಗ್ಗೆಯೂ ಕೇಂದ್ರಕ್ಕೆ ಮೂರು ರಾಜ್ಯಗಳ ಒಮ್ಮತವನ್ನು ತಿಳಿಸಲಾಗಿದೆ. ಈ ನಿರ್ಣಯ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಒತ್ತು ನೀಡಲಿದೆ. ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಈ ರೀತಿ ಒಮ್ಮತಕ್ಕೆ ಬಂದಿರುವುದು ಇದೇ ಮೊದಲ ಬಾರಿ. ಮೂರು ರಾಜ್ಯಗಳ ನಡುವೆ ಯಾವುದೇ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ, ನಾನು ಅಧಿಕಾರ ವಹಿಸಿಕೊಂಡ ಒಂದು ತಿಂಗಳಲ್ಲಿ ಈ ಐತಿಹಾಸಿಕ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ” ಎಂದರು.

ನವಲೆ ಜಲಾಶಯ: ಮೂರು ರಾಜ್ಯಗಳಿಗೆ ಲಾಭ

“ನವಲೆ ಸಮತೋಲಿತ ಜಲಾಶಯದ ಕರ್ನಾಟಕದಲ್ಲಿಯೇ ನಿರ್ಮಾಣವಾಗಲಿದ್ದು, ಇದರಿಂದ ಮೂರು ರಾಜ್ಯಗಳಿಗೆ ಲಾಭವಾಗಲಿದೆ” ಎಂದರು.

ಅಪೌಷ್ಠಿಕತೆ ನಿವಾರಣೆಗೆ ಕ್ರಮ

ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಅಪೌಷ್ಠಿಕತೆ ನಿವಾರಣೆಗೆ ಸರ್ಕಾರದ ಕ್ರಮಗಳ ಬಗ್ಗೆ ಕೇಳಿದಾಗ “ಪೌಷ್ಠಿಕತೆ ಹೆಚ್ಚಿಸಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಕರ್ನಾಟಕ ಪ್ರೋಟೀನ್ ಮಿಷನ್ ಜಾರಿ ಮಾಡಲಿದೆ. ವಿಪ್ರೋ ಸಂಸ್ಥೆಯ ಅಜೀಂ ಪ್ರೇಮ್ ಜಿ ಅವರ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ಮೊಟ್ಟೆ ಹಾಗೂ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ನೆರವು ಒದಗಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕದ ಆರ್ಥಿಕ ಮಿಷನ್ ಗೋವಿಂದರಾವ್ ಸಮಿತಿ ವರದಿ ಮೇಲೆಯೇ ರೂಪಿತವಾಗಿದೆ” ಎಂದು ಉತ್ತರಿಸಿದರು.

Related Articles

Back to top button