
ಎಂ.ಆರ್.ಎನ್ (ನಿರಾಣಿ) ಸೂಪರ್ ಮಾರ್ಕೆಟ್ & ಅಗ್ರಿಮಾರ್ಟ್ ಶುಭಾರಂಭ

ಪ್ರಗತಿವಾಹಿನಿ ಸುದ್ದಿ, ಮುಧೋಳ – ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ಬೀಳಗಿ ಶಾಸಕರಾದ ಮುರುಗೇಶ ನಿರಾಣಿಯವರ ಹುಟ್ಟುಹಬ್ಬದಂದು ನಿರಾಣಿ ಉದ್ಯಮ ಸಮೂಹದಿಂದ ಹೊಸ ಹೆಜ್ಜೆ ಇರಿಸಿದ್ದು, ಹಾಗೂ ೧ ಲಕ್ಷ ರೈತ ಕುಟುಂಬಗಳಿಗೆ ನಿರಾಣಿ ಫೌಂಡೇಶನ್ ವತಿಯಿಂದ ಆರೋಗ್ಯ ಬಂಧು ಹೆಲ್ತ್ಕಾರ್ಡ್ ವಿತರಣೆ ಹಾಗೂ ಎಂ.ಆರ್.ಎನ್ (ನಿರಾಣಿ) ಸೂಪರ್ ಮಾರ್ಕೆಟ್ ಮತ್ತು ಅಗ್ರಿಮಾರ್ಟ್ ಪ್ರಾರಂಭಿಸಲಾಗುವುದು ಎಂದು ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ಆರ್. ನಿರಾಣಿ ತಿಳಿಸಿದ್ದಾರೆ.

ಮುಧೋಳ ನಗರದ ನಿರಾಣಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸುಸಜ್ಜಿತವಾದ ಸೂಪರ್ ಮಾರ್ಕೆಟ್ ಹಾಗೂ ಅಗ್ರಿಮಾರ್ಟ್ ಸಿದ್ಧವಾಗಿದ್ದು, ಆಗಸ್ಟ್ ೧೧ ರಿಂದ ಶುಭಾರಂಭ ಮಾಡಲಿದೆ. ದಿನಬಳಕೆ ವಸ್ತುಗಳು, ಎಲೆಕ್ಟ್ರಾನಿಕ್ಸ್, ಜವಳಿ, ಚಿನ್ನಾಭರಣ ಸೇರಿದಂತೆ ಉತ್ಕೃಷ್ಟ ಗುಣಮಟ್ಟದ ವಸ್ತುಗಳು ಆಕರ್ಷಕ ಬೆಲೆಯಲ್ಲಿ ಲಭ್ಯವಾಗಲಿವೆ. ಅದರೊಡನೆ ರೈತರಿಗಾಗಿ ಪೈಪ್, ಹಗ್ಗ, ಪಂಪ್, ಮೋಟಾರ್, ಬೀಜ, ರಸಗೊಬ್ಬರ, ಕೀಟನಾಶಕಗಳು ಸೇರಿದಂತೆ ಎಲ್ಲ ಕೃಷಿ ಉಪಕರಣಗಳು ಒಂದೇ ಸೂರಿನಡಿ ನೀಡುವ ಪರಿಕಲ್ಪನೆಯಿಂದ ಅಗ್ರಿಮಾರ್ಟ್ ಪ್ರಾರಂಭಿಸಲಾಗಿದೆ ಎಂದರು.
ರೈತರ ಕುಟುಂಬಗಳ ಆರೋಗ್ಯ ದೃಷ್ಟಿಯಿಂದ ಬೆಳಗಾವಿ, ಬಾಗಲಕೋಟ ಮತ್ತು ವಿಜಯಪುರ ಜಿಲ್ಲೆಗಳ ೧ ಲಕ್ಷ ರೈತ ಕುಟುಂಬಗಳಿಗೆ ಆರೋಗ್ಯ ಬಂಧು ಆರೋಗ್ಯ ವಿಮೆ ಯೋಜನೆಯನ್ನು ಎಂ.ಆರ್.ಎನ್ ನಿರಾಣಿ ಫೌಂಡೇಶನ್ ವತಿಯಿಂದ ನೀಡಲಾಗುತ್ತಿದ್ದು, ೨೫,೦೦೦/- ೫೦,೦೦೦/- ೧ ಲಕ್ಷ ಮತ್ತು ೫ ಲಕ್ಷ ಮೌಲ್ಯದ ವಿವಿಧ ಆರೋಗ್ಯ ವಿಮಾ ಸೌಲಭ್ಯದೊಂದಿಗೆ ೩ ಲಕ್ಷ ಅಪಘಾತ ವಿಮೆ ಸೌಲಭ್ಯ ನೀಡಲಾಗುತ್ತಿದೆ. ೧೦೦ಕ್ಕೂ ಅಧಿಕ ಆಸ್ಪತ್ರೆಗಳೊಡನೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಯೋಜನೆ ಜಾರಿಯಾದ ಮೊದಲ ದಿನದಂದಲೇ ಯೋಜನೆಯ ಲಾಭ ಪಡೆಯಬಹುದು. ಈ ಮೊದಲೆ ಇರುವ ರೋಗಗಳಿಗೂ ಚಿಕಿತ್ಸೆ ಪಡೆಯಬಹುದು. ರೈತ ಆತನ ಪತ್ನಿ ಹಾಗೂ ಅವಲಂಬಿತ ೨ ಮಕ್ಕಳಿಗೆ ಈ ಯೋಜನೆ ಅನ್ವಯವಾಗುತ್ತದೆ. ಎಂದರು.
ಎಲ್ಲ ರೈತ ಕುಟುಂಬಗಳು ಸಮೃದ್ಧವಾಗಿರಬೇಕು, ಆರೋಗ್ಯವಂತರಾಗಿರಬೇಕು ಎಂಬುದು ಮುರುಗೇಶ ನಿರಾಣಿಯವರ ಹಂಬಲ. ಆದ್ದರಿಂದ ಅವರ ೫೪ನೇ ಹುಟ್ಟುಹಬ್ಬ ಶುಭ ಸಂದರ್ಭದಲ್ಲಿ ಶುಭಾರಂಭ ಮಾಡಲಾಗುತ್ತಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಗಮೇಶ ನಿರಾಣಿ ತಿಳಿಸಿದ್ದಾರೆ.
ಮುಚ್ಚಿದ ಕೈಗಾರಿಕೆಗಳ ಬಾಗಿಲು ತೆರೆಯುವ ಮಾಂತ್ರಿಕ