*ಕಾರಿನ ಹಿಂಬದಿಗೆ ಗುದ್ದಿದ ಲಾರಿ: ನಾಲ್ವರು ಸಾವು*

ಪ್ರಗತಿವಾಹಿನಿ ಸುದ್ದಿ: ಝಾನ್ಸಿ-ಕಾನ್ಪುರ ಹೆದ್ದಾರಿಯಲ್ಲಿ ಲಾರಿ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ಸ್ವಲ್ಪ ಸಮಯದಲ್ಲೇ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡು, ಕಾರಿನಲ್ಲಿದ್ದ ನವವಿವಾಹಿತ ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಅಪಘಾತದಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ. ಇಬ್ಬರಿಗೂ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ನವವಿವಾಹಿತ, ನವವಿವಾಹಿತನ ಸಹೋದರ, ಸೋದರಳಿಯ ಹಾಗೂ ಕಾರು ಚಾಲಕ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಝಾನ್ಸಿ ಜಿಲ್ಲೆಯ ಎರಿಚ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿಲ್ಟಿ ಗ್ರಾಮದಲ್ಲಿ ವಾಸಿಸುತ್ತಿದ್ದ ಆಕಾಶ್ ಎಂಬುವರು ನಿನ್ನೆ ಅಷ್ಟೆ ವಿವಾಹವಾಗಿದ್ದು, ಬಡಾ ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಛಾಪರ್ ಗ್ರಾಮಕ್ಕೆ ಹೋಗುತ್ತಿದ್ದರು. ಆಕಾಶ್, ಆತನ ಸಹೋದರ ಆಶಿಶ್, ಸೋದರಳಿಯ ಐಶು ಮತ್ತು ಇಬ್ಬರು ಸಂಬಂಧಿಕರು ಕಾರಿನಲ್ಲಿದ್ದರು. ಚಾಲಕ ಭಗತ್ ಕಾರು ಚಲಾಯಿಸುತ್ತಿದ್ದ. ಬಡಾ ಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾನ್ಪುರ ಹೆದ್ದಾರಿಯಲ್ಲಿ ಪರಿಚಾ ಮೇಲ್ಸೇತುವೆ ಬಳಿ ಹಿಂದಿನಿಂದ ಬಂದ ಲಾರಿ, ಕಾರಿಗೆ ಡಿಕ್ಕಿ ಹೊಡೆದಿದೆ.



