Kannada NewsKarnataka NewsLatest

ರಮೇಶ ಜಾರಕಿಹೊಳಿ ಅವರ ತ್ಯಾಗದಿಂದಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ

 ಪ್ರಗತಿವಾಹಿನಿ ಸುದ್ದಿ, ಗೋಕಾಕ : ಶಾಸಕ ಸ್ಥಾನ ತ್ಯಜಿಸಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲು ಮಹತ್ತರ ಪಾತ್ರ ವಹಿಸಿರುವ ರಮೇಶ ಜಾರಕಿಹೊಳಿ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುವ ನೈತಿಕ ಜವಾಬ್ದಾರಿ ಪಕ್ಷದ ಕಾರ್ಯಕರ್ತರದ್ದಾಗಿದೆ ಎಂದು ಮುದ್ದೇಬಿಹಾಳ ಶಾಸಕ ಹಾಗೂ ಗೋಕಾಕ ಮತಕ್ಷೇತ್ರದ ಉಪಚುನಾವಣೆಯ ಉಸ್ತುವಾರಿ ತಂಡದ ಎ.ಎಸ್. ಪಾಟೀಲ(ನಡಹಳ್ಳಿ) ಅವರು ಹೇಳಿದರು.

ಇಲ್ಲಿಯ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಗೋಕಾಕ ಮತ್ತು ಅರಭಾವಿ ಮಂಡಲದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಅವರ ತ್ಯಾಗ ಪರಿಶ್ರಮದ ಫಲವಾಗಿ ರಾಜ್ಯದಲ್ಲಿಂದು ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ಥಿತ್ವದಲ್ಲಿದೆ ಎಂದು ಹೇಳಿದರು.

ಬಿಜೆಪಿಯು ಶಿಸ್ತಿನ ಪಕ್ಷವಾಗಿದ್ದು, ಅಸಂಖ್ಯ ಕಾರ್ಯಕರ್ತರ ಪಡೆಯನ್ನು ಹೊಂದಿದೆ. ಕಾರ್ಯಕರ್ತರೇ ನಮ್ಮ ಪಕ್ಷದ ದೊಡ್ಡ ಆಸ್ತಿಯಾಗಿದ್ದಾರೆ. ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷಗಳ ೧೭ ಜನ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದರಿಂದ ಉಪಚುನಾವಣೆ ನಡೆಯುತ್ತಿದೆ.

ಈ ಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಬೇಕಾದ ಜವಾಬ್ದಾರಿ ನಮ್ಮದಾಗಿದೆ. ನಮ್ಮಲ್ಲಿನ ಕೆಲ ಮನಸ್ಥಾಪಗಳನ್ನು ರಮೇಶ ಜಾರಕಿಹೊಳಿ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರೆಂಬ ಬೇಧ-ಭಾವ ಮಾಡಿಕೊಳ್ಳದೇ ಎಲ್ಲರೂ ಒಂದಾಗಿ ದುಡಿಯಬೇಕು.

ಇದು ಕೇವಲ ರಮೇಶ ಜಾರಕಿಹೊಳಿ ಅವರ ಚುನಾವಣೆಯಲ್ಲ. ಇದು ಕಾರ್ಯಕರ್ತರ ಚುನಾವಣೆಯಾಗಿದೆ. ರಾಜ್ಯದಲ್ಲಿ ಸುಭದ್ರ ಹಾಗೂ ಸ್ಥಿರ ಆಡಳಿತ ಮುಂದುವರೆಯಲು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಡುವಂತೆ ಅವರು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.

ಸ್ವಾತಂತ್ರ್ಯ ನಂತರ ಗೋಕಾಕ ಕ್ಷೇತ್ರದಲ್ಲಿ ಎಂದಿಗೂ ಕಮಲ ಅರಳಿಲ್ಲ. ಡಿ.೫ ರಂದು ನಡೆಯಲಿರುವ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ಆರಿಸಿ ತರುವ ಮೂಲಕ ಕಮಲ ಅರಳಿಸಬೇಕು. ರಮೇಶ್ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಕೂಡಿಕೊಂಡು ಪಕ್ಷದ ಭಾವುಟ ಹಿಡಿದುಕೊಂಡು ಪ್ರತಿಯೊಬ್ಬ ಮತದಾರರ ಬಳಿ ತೆರಳಿ ಮತಯಾಚಿಸುವಂತೆ ಅವರು ಕೋರಿದರು.

ಮನೆ ಮಗನಂತೆ ಭಾವಿಸಿ

ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿ, ಅನೇಕ ವರ್ಷಗಳಿಂದ ರಮೇಶ ಜಾರಕಿಹೊಳಿ ಅವರ ವಿರುದ್ಧ ಹೋರಾಟ ಮಾಡಿಕೊಂಡು ಬಂದಿರುವ ಬಿಜೆಪಿ ಕಾರ್ಯಕರ್ತರಿಗೆ ಈಗ ಅವರ ಪರವಾಗಿ ಮತಯಾಚಿಸಬೇಕಾಗಿದೆ.

ರಮೇಶ ಜಾರಕಿಹೊಳಿ ಅವರನ್ನು ಮನೆ ಮಗನಂತೆ ಭಾವಿಸಿಕೊಂಡು ಚುನಾವಣೆಯಲ್ಲಿ ಪ್ರತಿಯೊಬ್ಬರೂ ದುಡಿಯಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ವಿವರಿಸಬೇಕು. ಬಾಕಿ ಉಳಿದಿರುವ ಮೂರು ವರ್ಷ ಸರ್ಕಾರ ನಡೆಸಲು ಇವರ ಗೆಲುವು ಅತ್ಯಂತ ಮಹತ್ವದ್ದಾಗಿದೆ.

ಸುಮಾರು ೫೦ ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ರಮೇಶ ಜಾರಕಿಹೊಳಿ ಅವರು ಆಯ್ಕೆಯಾಗಲಿಕ್ಕೆ ಕಾರ್ಯಕರ್ತರು ದುಡಿಯಬೇಕೆಂದು ಮನವಿ ಮಾಡಿಕೊಂಡರು.

ಕಾಂಗ್ರೇಸ್‌ನಲ್ಲಿ ಸ್ವಾಭಿಮಾನಕ್ಕೆ ಧಕ್ಕೆ

ಬೆಳಗಾವಿ ವಿಭಾಗದ ಪ್ರಭಾರಿ ಈರಪ್ಪ ಕಡಾಡಿ ಮಾತನಾಡಿ, ಕಟ್ಟಾ ಕಾಂಗ್ರೇಸ್ಸಿಗರಾಗಿದ್ದ ರಮೇಶ ಜಾರಕಿಹೊಳಿ ಅವರು ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದರಿಂದ ಕಾಂಗ್ರೇಸ್‌ನಿಂದ ಹೊರಬಂದು ಬಿಜೆಪಿಗೆ ಆಸರೆಯಾಗಿದ್ದಾರೆ. ಬರಲಿರುವ ದಿನಗಳಲ್ಲಿ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಿಗೆ ಅಚ್ಛೆ ದಿನ್ ಬರಲಿವೆ.

ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಂಡು ಬರುತ್ತಿದ್ದ ಹಿಂದಿನ ಚುನಾವಣೆಗಳಲ್ಲಿ ಕಾರ್ಯಕರ್ತರಿಗೆ ಸ್ವಲ್ಪ ನೋವಾಗಬಹುದು. ಅಂತಹ ನೋವುಗಳನ್ನು ನಾವು ಸಹಿಸಿಕೊಂಡು ಪಕ್ಷದ ಅಭ್ಯರ್ಥಿಪರ ಮತಯಾಚಿಸಬೇಕಾಗಿದೆ. ರಮೇಶ ಜಾರಕಿಹೊಳಿ ಅವರನ್ನು ಗೆಲ್ಲಿಸಿಕೊಡುವ ಮೂಲಕ ಅವರಿಗೆ ಕಾರ್ಯಕರ್ತರು ದೊಡ್ಡ ಉಡುಗೊರೆಯನ್ನು ನೀಡಬೇಕಾಗಿದೆ.

ಹಿರಿಯ ಹಾಗೂ ಸಂಘಪರಿವಾರದ ಕಾರ್ಯಕರ್ತರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡಿ ಅವರನ್ನು ಗೌರವಿಸುವ ಕೆಲಸವನ್ನು ಮಾಡಲಾಗುವುದು. ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬೇಡಿ. ಹಾಲು-ಜೇನಿನಂತೆ ಕೂಡಿಕೊಂಡು ರಮೇಶ ಜಾರಕಿಹೊಳಿ ಅವರ ಪರ ದುಡಿಯುವಂತೆ ಕಾರ್ಯಕರ್ತರಲ್ಲಿ ಕೋರಿದರು.

ಅಧ್ಯಕ್ಷತೆಯನ್ನು ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ವಹಿಸಿದ್ದರು. ಗೋಕಾಕ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರ ಪರವಾಗಿ ದುಡಿಯಲು ಈಗಾಗಲೇ ಎಲ್ಲ ಹಂತದ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಘೂಳಪ್ಪ ಹೊಸಮನಿ, ಗುರುಪಾದ ಕಳ್ಳಿ, ಧನಂಜಯ ಜಾಧವ, ಬೆಳಗಾವಿ ವಿಭಾಗದ ಸಹ ಪ್ರಭಾರಿ ರವಿ ಹಿರೇಮಠ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಪ್ರೇಮಾ ಭಂಡಾರಿ, ಗೋಕಾಕ ನಗರ ಘಟಕದ ಅಧ್ಯಕ್ಷ ಎಸ್.ವ್ಹಿ. ದೇಮಶೆಟ್ಟಿ, ಗ್ರಾಮೀಣ ಘಟಕದ ಅಧ್ಯಕ್ಷ ವಿರುಪಾಕ್ಷಿ ಯಲಿಗಾರ, ವಾಸುದೇವ ಸವತಿಕಾಯಿ, ಸುರೇಶ ಪಾಟೀಲ, ಬಸವಂತ ಕಮತಿ, ಜಿ.ಎಸ್. ರಜಪೂತ, ಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಬಸವರಾಜ ಹಿರೇಮಠ, ನಾಗಲಿಂಗ ಪೋತದಾರ, ಶಕೀಲ ದಾರವಾಡಕರ, ಚಿದಾನಂದ ದೇಮಶೆಟ್ಟಿ, ಸಂತೋಷ ಹುಂಡೇಕರ, ಮುತ್ತೆಪ್ಪ ಕುಳ್ಳೂರ, ರವಿ ಪರುಶೆಟ್ಟಿ, ಹಾಗೂ ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಹಕಾರಿಗಳು ಉಪಸ್ಥಿತರಿದ್ದರು.

ಸೋಮವಾರ ನಾಮಪತ್ರ ಸಲ್ಲಿಕೆ

ಗೋಕಾಕ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು ಸೋಮವಾರದಂದು ಅಪಾರ ಸಂಖ್ಯೆಯ ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಸಲಿದ್ದಾರೆ. ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಸಹಿತ ಹಲವು ಬಿಜೆಪಿ ನಾಯಕರು ಉಪಸ್ಥಿತರಿರುವರು.

ಗೋಕಾಕ ಹಾಗೂ ಅರಭಾವಿ ಮತಕ್ಷೇತ್ರಗಳ ಎಲ್ಲ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಮೇಶ ಜಾರಕಿಹೊಳಿ ಅವರಿಗೆ ನೈತಿಕ ಬಲ ನೀಡುವಂತೆ ಇದೇ ಸಂದರ್ಭದಲ್ಲಿ ಮುಖಂಡರುಗಳು ಸಭೆಯಲ್ಲಿ ಮನವಿ ಮಾಡಿಕೊಂಡರು.

ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ ಸ್ವಾಗತಿಸಿದರು. ಬಸವರಾಜ ಮಾಳೇದವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button