ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಜನಪರ ಆಡಳಿತವನ್ನು ಜಾರಿಗೆ ತರಲು ಕರ್ನಾಟಕ ರಾಷ್ಟ್ರ ಸಮಿತಿಯು ಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ ಎಂದು ಕೇಂದ್ರ ಸಮೀತಿ ಸದಸ್ಯ ವಿಕಾಸ ಸೊಪ್ಪಿನ ಹೇಳಿದರು.
ಶನಿವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯು ಉದ್ದೇಶ ಆಧಾರಿತವಾಗಿ ನಡೆಯದೆ ವ್ಯಕ್ತಿ ಆಧಾರಿತವಾಗಿ ನಡೆಯುತ್ತಿದೆ. ಕೇವಲ ಇಬ್ಬರ ನಡುವಿನ ಗುದ್ಧಾಟ ಎನ್ನುವಂತೆ ಬಿಂಬಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಮಿನಾಥನ್ ವರದಿ ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಅದು ವಿಫಲವಾಗಿದೆ ಎಂದರು.
ಈಗಾಗಲೆ ದಕ್ಷಿಣ ಕರ್ನಾಟಕದಲ್ಲಿ 9 ಕ್ಷೇತ್ರಗಳಿಗೆ ಮತ್ತು ಉತ್ತರದಲ್ಲಿ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆಮಾಡಲಾಗಿದೆ. ಇನ್ನೆರೆಡು ದಿನದಲ್ಲಿ ಎಲ್ಲ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಷ್ಟ್ರ ಸಮೀತಿಯ ಜಿಲ್ಲಾಧ್ಯಕ್ಷೆ ಸಪ್ನಾ ಪಾಟೀಲ, ಸಂಜಯಕುಮಾರ ಪಾಟೀಲ, ಗುರು ಅಂಗಡಿ, ಪ್ರಧಾನ ಕಾರ್ಯದರ್ಶಿ ನಂದಾ ದ್ರಾಕ್ಷೆ, ಮಂಜುನಾಥ ಜಕ್ಕನ್ನವರ್ ಇದ್ದರು.