*ಎರಡು ದಿನಗಳ ರಂಗಾಭಿನಯ ಕಾರ್ಯಾಗಾರ ಸಂಪನ್ನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ರಂಗಸಂಪದವು ಹಮ್ಮಿಕೊಂಡಿದ್ದ ರಂಗಾಭಿನಯ ಕಾರ್ಯಾಗಾರವು ಯಶಸ್ವಿಯಾಗಿ ಸಂಪನ್ನಗೊಂಡಿತು.
ಎರಡು ದಿನಗಳ ಕಾರ್ಯಾಗಾರದಲ್ಲಿ ಬೆಳಿಗ್ಗೆಯ 10.30 ರಿಂದ ಸಂಜೆ 6.30 ರ ವರೆಗೆ 25 ಪ್ರಶಿಕ್ಷಣಾರ್ಥಿಗಳು ರಂಗಭೂಮಿಯ ವಿವಿಧ ಆಯಾಮಗಳನ್ನು ಪ್ರಾತ್ಯಕ್ಷಿತವಾಗಿ ಮತ್ತು ವಾಚಿಕವಾಗಿ ರಂಗಭೂಮಿಯಲ್ಲಿ ಸತತ 40-50 ವರ್ಷದ ಅನುಭವದ ಡಾ.ಪ್ರಕಾಶ ಮತ್ತು ರಜನಿ ಗರುಡ ಅವರಿಂದ ಅತ್ಯುತ್ತಮವಾಗಿ ಶಿಕ್ಷಣ ಪಡೆದರು.
ಸಂಜೆ 5.30 ರಿಂದ ನಡೆದ ಸಮಾರೋಪ ಸಮಾರಂಭದಲ್ಲಿ ಧಾರವಾಡದ ರಂಗಾಯಣದ ನಿರ್ದೇಶಕರಾಗಿ ಸಾರಥ್ಯವಹಿಸುತ್ತಿರುವ ಖ್ಯಾತ ನಟ ನಿರ್ದೇಶಕ ಲೇಖಕ ಶ್ರೀ ಝಕೀರ ನದಾಫ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲ 25 ಅಭ್ಯರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿ ರಂಗಭೂಮಿಯ ಬಗ್ಗೆ ತಮ್ಮ ಅನುಭವಗಳನ್ನು ರೋಚಕವಾಗಿ ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಶ್ರೀ ಝಕೀರ ನದಾಫ ಅವರನ್ನು ಆದರದಿಂದ ಸತ್ಕರಿಸಲಾಯಿತು .ಆರು ಜನ ತರಬೇತಿ ಪಡೆದವರು ತಮ್ಮ ಅನುಭವ ಹಂಚಿಕೊಂಡು ರಂಗಸಂಪದಕ್ಕೆ ಧನ್ಯವಾದ ಅರ್ಪಿಸಿದರು.
ಸಂಪನ್ಮೂಲ ದಂಪತಿಗಳಾದ ರಜನಿ ಮತ್ತು ಡಾ.ಪ್ರಕಾಶ ಗರುಡ ಅವರು ಈ ರೀತಿಯ ಕಾರ್ಯಾಗಾರದ ಆಯೋಜನೆ ಮಾಡಬೇಕಾದ ಸರ್ಕಾರಿ ಸಂಸ್ಥೆಗಳು ಮಾಡದೇ ಇರುವುದರಿಂದ ರಂಗಸಂಪದ ಬೆಳಗಾವಿಯ ತಂಡದವರು ಮಾಡುತ್ತಿರುವದು ಮತ್ತು ಇದಕ್ಕೆ ಇಷ್ಟು 25 ಅಭ್ಯರ್ಥಿಗಳು ಹಾಜರಿರುವದು ಅಭಿನಂದನೀಯ ಎಂದರು.
ಎಲ್ ಎಸ್ ಶಾಸ್ತ್ರೀ ಅವರು ಹಳೆಯ ವೃತ್ತಿ ರಂಗಭೂಮಿಯ ಮತ್ತು ಇಂದಿನ ಹವ್ಯಾಸೀ ರಂಗಭೂಮಿಯ ಬಗ್ಗೆ ಹೇಳಿದರು ಪ್ರಸಾದ ಕಾರಜೋಳ ಸ್ವಾಗತಿಸಿದರು. ಚಿದಾನಂದ ವಾಳಕೆ ವಂದಿಸಿದರು. ಪದ್ಮಾ ಕುಲಕರ್ಣಿಯವರು ಅತಿಥಿಗಳ ಪರಿಚಯ ನೀಡಿದರು.
ಡಾ.ಅರವಿಂದ ಕುಲಕರ್ಣಿಯವರು ಕಾರ್ಯಾಗಾರದ ಸಾಫಲ್ಯತೆ ಮತ್ತು ಮುಂದಿನ ರಂಗಪಯಣದ ಬಗ್ಗೆ ಮನದಾಳದ ಮಾತು ಹೇಳಿದರು. ವೀಣಾ ಹೆಗಡೆ ನಿರೂಪಿಸಿದರು. ರಾಮಚಂದ್ರ ಕಟ್ಟಿ, ಬಸವರಾಜ ಹುಣಶೀಕಟ್ಟಿ, ಶಿವಾನಂದ ಮಾರೀಹಾಳ, ಚಂದ್ರಶೇಖರ ನವಲಗುಂದ, ಮುದೇನೂರ, ಆನಂದ ಪುರಾಣಿಕ, ನದಾಫ್ ಮುಂತಾದವರು ಉಪಸ್ಥಿತರಿದ್ದರು.


