Kannada NewsPragativahini Special

ಯುಗಾದಿ ಅಂದರೆ ಸಂಕಲ್ಪಶಕ್ತಿಯ ಮುಹೂರ್ತ !

ಯುಗಾದಿ ಹಬ್ಬದ ನಿಮಿತ್ತ ಸನಾತನ ಸಂಸ್ಥೆಯ ವಿಶೇಷ ಲೇಖನ
ಯುಗಾದಿ ಹಿಂದೂಗಳ ಮಹತ್ವದ ಹಬ್ಬವಾಗಿದೆ. ಹಿಂದೂಗಳ ಹೊಸ ವರ್ಷ ಈ ದಿನದಿಂದ ಪ್ರಾರಂಭವಾಗುತ್ತದೆ. ಈ ದಿನದಂದು ಪೃಥ್ವಿಯ ಮೇಲೆ ಬ್ರಹ್ಮನ ಮತ್ತು ವಿಷ್ಣುವಿನ ತತ್ತ್ವಗಳು ಅಗಾಧ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಇದೇ ದಿನದಂದು ವನವಾಸವನ್ನು ಮುಗಿಸಿ ಮರಳಿದ ಪ್ರಭು ಶ್ರೀರಾಮನನ್ನು ಮುಂಬಾಗಿಲಿನಲ್ಲಿ ಬ್ರಹ್ಮಧ್ವಜ ನಿಲ್ಲಿಸಿ ಪ್ರಜೆಗಳು ಸ್ವಾಗತಿಸಿದರು. ಅಂದಿನಿಂದ ಬ್ರಹ್ಮಧ್ವಜ ಸ್ಥಾಪನೆಯು ಪ್ರಾರಂಭವಾಗಿದೆ. ಈ ದಿನದಂದು ಪ್ರಜಾಪತಿಯ ಲಹರಿಗಳು ದೊಡ್ಡ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಈ ಲಹರಿಗಳ ಮಾಧ್ಯಮದಿಂದ ಪ್ರತ್ಯಕ್ಷ ಈಶ್ವರನ ತತ್ತ್ವವು ಕಾರ್ಯನಿರತವಾಗಿರುತ್ತದೆ. ಅಲ್ಲದೇ ಈ ದಿನದಂದು ರಾಮತತ್ತ್ವ ಶೇ. ೧೦೦ ರಷ್ಟು ಅಧಿಕ ಕಾರ್ಯನಿರತವಾಗಿರುತ್ತದೆ. ಬ್ರಹ್ಮಧ್ವಜದ ಮಾಧ್ಯಮದಿಂದ ಕಾರ್ಯನಿರತವಾಗಿರುವ ಈಶ್ವರನ ಶಕ್ತಿಯು ಜೀವಕ್ಕೆ ಲಾಭದಾಯಕವಾಗಿರುತ್ತದೆ.

ಯುಗಾದಿಯ ದಿನ ಮಾಡುವ ಪಂಚಾಂಗದ ಪೂಜೆ ಮತ್ತು ಶ್ರವಣ
ಯುಗಾದಿಯ ದಿನದಂದು ಪಂಚಾಂಗದ ಮೇಲಿರುವ ಗಣಪತಿಯನ್ನು ಪೂಜಿಸಬೇಕು ಮತ್ತು ಪಂಚಾಂಗದಲ್ಲಿ ತಿಳಿಸಿರುವ ವರ್ಷಫಲವನ್ನು ಓದಬೇಕು. ಹಿಂದಿನ ಕಾಲದಲ್ಲಿ ಜ್ಯೋತಿಷಿಗಳು ಪ್ರತಿ ಮನೆಗೆ ಹೋಗಿ ವರ್ಷಫಲವನ್ನು ಓದುತ್ತಿದ್ದರು. ಅದು ಯುಗಾದಿಯ ಒಂದು ವಿಧಿಯೇ ಆಗಿತ್ತು.

ಇಂದಿಗೂ ಅನೇಕ ಸ್ಥಳಗಳಲ್ಲಿ ಯುಗಾದಿಯ ದಿನದಂದು ಬೆಳಗ್ಗೆ ಪಂಚಾಂಗವನ್ನು ಮನೆಗೆ ತಂದು ಅದನ್ನು ಪೂಜಿಸಿ, ಶ್ರದ್ಧೆಯಿಂದ ಸಂವತ್ಸರಫಲವನ್ನು ಓದಲಾಗುತ್ತದೆ. ಯುಗಾದಿಯ ದಿನದಂದು ಮನೆಯಲ್ಲಿ ಸಿಹಿ ಅಡುಗೆ ಮಾಡಿ, ಆನಂದದಿಂದ ಆಚರಿಸುವ ಪದ್ಧತಿಯಿದೆ. ಈ ದಿನವನ್ನು ಸಂತೋಷದಿಂದ ಆಚರಿಸಿದರೆ ವರ್ಷವೆಲ್ಲ ಆನಂದಮಯವಾಗಿರುತ್ತದೆ ಎನ್ನುವುದು ಅದರ ಹಿಂದಿನ ಭಾವನೆಯಾಗಿದೆ. ಈ ದಿನದಂದು ಕೇವಲ ಆನಂದದಿಂದಷ್ಟೇ ಅಲ್ಲ, ಗೌರವದ ಪ್ರತೀಕವೆಂದೂ ಆಚರಿಸಬೇಕು. ನಮ್ಮಲ್ಲಿ ಮೂರೂವರೆ ಮುಹೂರ್ತಗಳಿಗೆ ವಿಶೇಷ ಮಹತ್ವವಿದೆ. ಅದರಲ್ಲಿ ಯುಗಾದಿಯು ಒಂದು ಶುಭ ಮುಹೂರ್ತವೆಂದು ತಿಳಿಯಲಾಗುತ್ತದೆ.  ಮದುವೆಯ ನಿಶ್ಚಿತಾರ್ಥ, ಮದುವೆ, ಉಪನಯನ, ಗೃಹಪ್ರವೇಶ ಹೀಗೆ ಎಲ್ಲ ಮಂಗಲಕಾರ್ಯಗಳಿಗೆ ಈ ದಿನವನ್ನು ಪ್ರಶಸ್ತವೆಂದು ತಿಳಿಯಲಾಗುತ್ತದೆ.

ಚೈತ್ರ ಶುಕ್ಲ ಪಕ್ಷ ಪಾಡ್ಯದಂದು ವರ್ಷಾರಂಭ ಮಾಡುವುದರ ಹಿಂದಿನ ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳು
ಜ್ಯೋತಿಷ್ಯಶಾಸ್ತ್ರಾನುಸಾರ ಪಾಡ್ಯದ ಸಮಯದಲ್ಲಿ ಸೂರ್ಯನು ವಸಂತ-ಸಂಪಾತದ ಮೇಲೆ ಬರುತ್ತಾನೆ (ಸಂಪಾತ ಬಿಂದು ಎಂದರೆ (ಮಕರ ಕ್ರಾಂತಿವೃತ್ತ ಮತ್ತು ವಿಷುವವೃತ್ತ (ಕರ್ಕಾಟಕ) ಈ ಎರಡು ವೃತ್ತಗಳು ಯಾವ ಬಿಂದುವಿನಲ್ಲಿ ಪರಸ್ಪರ ಭೇದಿಸುತ್ತವೆಯೋ ಆ ಬಿಂದು) ಮತ್ತು ವಸಂತಋತುವು ಪ್ರಾರಂಭವಾಗುತ್ತದೆ. ಎಲ್ಲ ಋತುಗಳಲ್ಲಿ ‘ಕುಸುಮಾಕರಿ ವಸಂತ ಋತುವು ನನ್ನ ವಿಭೂತಿಯಾಗಿದೆ’ ಎಂದು ಭಗವಂತನು ಶ್ರೀಮದ್ಭಗವದ್ಗೀತೆಯಲ್ಲಿ (ಅಧ್ಯಾಯ ೧೦, ಶ್ಲೋಕ ೩೫) ಹೇಳಿದ್ದಾನೆ. ಈ ಸಮಯದಲ್ಲಿ ಸಮಶೀತೋಷ್ಣ, ಉತ್ಸಾಹವರ್ಧಕ ಮತ್ತು ಆಹ್ಲಾದದಾಯಕ ವಾತಾವರಣವಿರುತ್ತದೆ. ಶಿಶಿರ ಋತುವಿನಲ್ಲಿ ಗಿಡಮರಗಳ ಎಲೆಗಳು ಉದುರಿ ಹೋಗಿರುತ್ತವೆ ಮತ್ತು ಪಾಡ್ಯದ ಸಮಯದಲ್ಲಿ ಅವುಗಳಿಗೆ ಹೊಸ ಚಿಗುರು ಬರುತ್ತಿರುತ್ತವೆ. ಗಿಡಮರಗಳು ಚೆನ್ನಾಗಿ ಕಾಣುತ್ತವೆ.

ಈ ದಿನದಂದು ರಾಮನು ವಾಲಿಯನ್ನು ವಧಿಸಿದನು. ಶಕರು ಹೂಣರನ್ನು ಸೋಲಿಸಿ ವಿಜಯವನ್ನು ಪಡೆದರು. ಈ ದಿನದಿಂದಲೇ ‘ಶಾಲಿವಾಹನ ಶಕೆ’ ಪ್ರಾರಂಭವಾಯಿತು; ಏಕೆಂದರೆ ಈ ದಿನ ಶಾಲಿವಾಹನನು ಶತ್ರುಗಳ ಮೇಲೆ ವಿಜಯವನ್ನು ಪಡೆದಿದ್ದನು. ಈ ದಿನವೇ ಬ್ರಹ್ಮದೇವನು ಸೃಷ್ಟಿಯನ್ನು ನಿರ್ಮಿಸಿದನು, ಅರ್ಥಾತ್ ಈ ದಿನ ಸತ್ಯಯುಗವು ಪ್ರಾರಂಭವಾಯಿತು. ಆದುದರಿಂದಲೇ ಈ ದಿನದಂದು ವರ್ಷಾರಂಭವನ್ನು ಮಾಡುತ್ತಾರೆ.

ಯುಗಾದಿಯಂದು ಶ್ರೀ ಸರಸ್ವತಿ ದೇವಿಯ ಪೂಜೆ ಮಾಡುವ ಮಹತ್ವ
ಈ ದಿನ ಶ್ರೀ ಸರಸ್ವತಿತತ್ತ್ವವು ಪೃಥ್ವಿಯ ಮೇಲೆ ಇತರ ದಿನಗಳ ತುಲನೆಯಲ್ಲಿ ಶೇ. ೩೦ ರಷ್ಟು ಹೆಚ್ಚು ಬರುತ್ತದೆ. ಈ ದಿನ ಅನೇಕರು ವಿದ್ಯೆ ಸಂಪಾದನೆಯ ಶುಭಕಾರ್ಯವನ್ನು ಪ್ರಾರಂಭಿಸುತ್ತಾರೆ. ಇದರಿಂದ ಈ ದಿನ ದೇವಿ ಮತ್ತು ಯಂತ್ರದ ಪೂಜೆ ಹಾಗೂ ಉಪಾಸನೆ ಮಾಡುತ್ತಾರೆ.

ಹಿಂದೂಗಳೇ, ಯುಗಾದಿಯ ಶುಭಮುಹೂರ್ತದಲ್ಲಿ ಕೇವಲ ಭಾರತ ಮಾತ್ರವಲ್ಲ  ಪೃಥ್ವಿಯಲ್ಲಿ ಎಲ್ಲೆಡೆ ಹಿಂದೂ ಧರ್ಮವನ್ನು ಪ್ರಸ್ಥಾಪಿತಗೊಳಿಸಿ ರಾಮರಾಜ್ಯದ ನಾಗರಿಕರಂತೆ ಅಖಿಲ ಮನುಕುಲಕ್ಕೆ ಸುಸಂಸ್ಕೃತ ಮತ್ತು ಸುಖಸಮೃದ್ಧಿಯುಕ್ತ ಜೀವನ ನೀಡಲು ನಿಶ್ಚಯಿಸೋಣ.

(ಹೆಚ್ಚಿನ ಮಾಹಿತಿಗಾಗಿ ಓದಿ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು’)

(ಸಂಗ್ರಹ : ವಿನೋದ್ ಕಾಮತ್, ವಕ್ತಾರರು, ಸನಾತನ ಸಂಸ್ಥೆ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button