Kannada NewsKarnataka NewsLatestPolitics

*’ವಿಐಎಸ್‌ಪಿʼ ಮುಚ್ಚುವ ನಿರ್ಧಾರ ಮರುಪರಿಶೀಲಿಸಲು ಸಚಿವ ಎಂ.ಬಿ. ಪಾಟೀಲ ಒತ್ತಾಯ*

ಪ್ರಗತಿವಾಹಿನಿ ಸುದ್ದಿ: ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಸ್ಥಾವರ (ವಿಐಎಸ್‌ಪಿ) ಪುನಶ್ಚೇತನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು ಕೇಂದ್ರ ಉಕ್ಕು ಸಚಿವ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರಿಗೆ ಒತ್ತಾಯಿಸಿದ್ದಾರೆ.


ಈ ಸಂಬಂಧ ಸಿಂಧಿಯಾ ಅವರಿಗೆ ಪತ್ರ ಬರೆದಿರುವ ಸಚಿವ ಪಾಟೀಲ ಅವರು, ʼವಿಐಎಸ್‌ಪಿʼ ಮುಚ್ಚುವ ನಿರ್ಧಾರವನ್ನು ಮರುಪರಿಶೀಲಿಸಿ ಅದರ ಪುನಶ್ಚೇತನಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.


ʼವಿಐಎಸ್‌ಪಿʼ ಖಾಸಗೀಕರಣಗೊಳಿಸಲು ಷೇರುವಿಕ್ರಯಕ್ಕೆ ಮುಂದಾಗಿದ್ದ ಭಾರತೀಯ ಉಕ್ಕು ಪ್ರಾಧಿಕಾರದ (ಎಸ್‌ಎಐಎಲ್‌) ಪ್ರಯತ್ನವು ವಿಫಲವಾಗಿರುವನ್ನು ಪತ್ರದಲ್ಲಿ ಸಿಂಧಿಯಾ ಅವರ ಗಮನಕ್ಕೆ ತರಲಾಗಿದೆ.

1989ರವರೆಗೆ ಕರ್ನಾಟಕದ ಸರ್ಕಾರಿ ವಲಯದ ಉದ್ಯಮವಾಗಿದ್ದ ʼವಿಐಎಸ್‌ಪಿʼ, ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರ ಅಥವಾ ಉಕ್ಕು ಪ್ರಾಧಿಕಾರದ (ಎಸ್‌ಎಐಎಲ್‌) ಅಸಮರ್ಪಕ ಬಂಡವಾಳ ಹೂಡಿಕೆ ನೀತಿಯಿಂದಾಗಿ ಕಾರ್ಯಾಚರಣೆಯ ಸವಾಲುಗಳನ್ನು ಎದುರಿಸುತ್ತಿದೆ.
ಕಳೆದ ಮೂರು ದಶಕಗಳಲ್ಲಿ ಉಕ್ಕು ಪ್ರಾಧಿಕಾರದ ಇತರ ಘಟಕಗಳಲ್ಲಿನ ಗಮನಾರ್ಹ ಹೂಡಿಕೆಗೆ ಹೋಲಿಸಿದರೆ, ʼವಿಐಎಸ್‌ಪಿʼಯಲ್ಲಿ ದುರಸ್ತಿ ಮತ್ತು ನವೀಕರಣ ಉದ್ದೇಶಗಳಿಗೆ ಕೇವಲ ₹ 157 ಕೋಟಿ ವೆಚ್ಚ ಮಾಡಲಾಗಿದೆ. ರಾಮನದುರ್ಗದಲ್ಲಿನ 497 ಎಕರೆ ಪ್ರದೇಶದಲ್ಲಿನ ಸಮೃದ್ಧ ಕಬ್ಬಿಣದ ಅದಿರು ಗಣಿಗಳು ಮತ್ತು ಬಳ್ಳಾರಿ ಜಿಲ್ಲೆಯಲ್ಲಿನ ಗಣಿಗಳು ದಶಕಗಳ ಕಾಲ ʼವಿಐಎಸ್‌ಪಿʼಗೆ ಅದಿರು ಪೂರೈಸುವ ಸಾಮರ್ಥ್ಯ ಹೊಂದಿವೆ.


2022ರಲ್ಲಿ ನಡೆದಿದ್ದ ʼವಿಐಎಸ್‌ಪಿʼಯ ಷೇರುವಿಕ್ರಯಕ್ಕೆ ಬಿಡ್‌ದಾರರ ನಿರಾಸಕ್ತಿ ಫಲವಾಗಿ ಹಿನ್ನಡೆ ಉಂಟಾಗಿದೆ. ಈ ಕಾರಣಕ್ಕೆ ಈ ಘಟಕ ಮುಚ್ಚುವ ಸಾಧ್ಯತೆ ಬಗ್ಗೆ ಕಾರ್ಮಿಕರ ಸಂಘಟನೆಯು ತೀವ್ರ ಕಳವಳ ವ್ಯಕ್ತಪಡಿಸಿರುವುದನ್ನು ಸಚಿವರು ಸಿಂಧಿಯಾ ಅವರ ಗಮನಕ್ಕೆ ತಂದಿದ್ದಾರೆ.
ʼವಿಐಎಸ್‌ಪಿʼಯ ತಯಾರಿಕಾ ಸಾಮರ್ಥ್ಯ, ಸ್ಥಳೀಯವಾಗಿ ಕಬ್ಬಿಣ ಅದಿರಿನ ಸಮೃದ್ಧ ಲಭ್ಯತೆ ಮತ್ತು ಕಾರ್ಮಿಕರ ಹಿತಾಸಕ್ತಿ ದೃಷ್ಟಿಯಿಂದ ಸಿಂಧಿಯಾ ಅವರು ಮಧ್ಯಪ್ರವೇಶಿಸಬೇಕು. ಮೈಸೂರು ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1918ರಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ಪ್ರಾರಂಭಿಸಿದ್ದ ರಾಜ್ಯದ ಹೆಮ್ಮೆಯ ಈ ಉಕ್ಕು ಸ್ಥಾವರನ್ನು ಮುಚ್ಚುವ ನಿರ್ಧಾರ ಕೈಬಿಡುವಂತೆ ಉಕ್ಕು ಪ್ರಾಧಿಕಾರಕ್ಕೆ ನಿರ್ದೇಶನ ನೀಡಬೇಕು. ಸ್ಥಾವರದ ಪುನಶ್ಚೇತನಕ್ಕೆ ಅಗತ್ಯವಾಗಿರುವ ಬಂಡವಾಳ ಹೂಡಿಕೆ ಮಾಡಬೇಕು ಎಂದು ಸಚಿವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

Related Articles

Back to top button