Latest

ಉತ್ತರ ಕನ್ನಡ: ಅಪಾಯ ಮಟ್ಟ ಮೀರಿ ಹರಿಯುತ್ತಿರುವ ನದಿಗಳು; 11 ಜನರ ಏರ್ ಲಿಫ್ಟ್

  ಪ್ರಗತಿವಾಹಿನಿ ಸುದ್ದಿ, ಶಿರಸಿ  ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಗಂಗಾವಳಿ, ಕಾಳಿ, ಅಘನಾಶಿನಿ ಹಾಗೂ ಎಲ್ಲ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ.

ಶಿರಸಿಯ ಬಾಶಿ ಪಂಚಾಯತದ ಮುಗಳ್ಳಿ ಪ್ರದೇಶ ಮುಳುಗಡೆಯಾಗಿ ಅತ್ಯಂತ ಹೆಚ್ಚು ಹಾನಿಯಾಗಿದೆ. ಕಾರವಾರ ತಾಲೂಕಿನಲ್ಲಿ ಕದ್ರಾ ಮತ್ತು ಕೊಡಸಳ್ಳಿ ಡ್ಯಾಮನಿಂದ 2.5 ಲಕ್ಷ ಕ್ಕೂ ಹೆಚ್ಚು ಕ್ಯುಸೇಕ್ಸ್ ನೀರು ಹೊರಬಿಟ್ಟಿರುವ ಕಾರಣಕ್ಕೆ, ಕಾರವಾರ ತಾಲ್ಲೂಕಿನ ಐದಕ್ಕೂ ಹೆಚ್ಚು ಹಳ್ಳಿಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸಚಿವ ಶಿವಾರಾಂ ಹೆಬ್ಬಾರ್ ಹೇಳಿದ್ದಾರೆ.

ಅಂಕೋಲಾ ತಾಲೂಕಿನಲ್ಲಿ ಗಂಗಾವಳಿ ನದಿ ನೀರು ಏರಿದ್ದರಿಂದ 11 ಜನ ಮಹಡಿ ಹತ್ತಿ ಕುಳಿತಿದ್ದರು. ಅವರನ್ನು ಏರ್ ಲಿಫ್ಟ್ ಮಾಡಲು ಸಚಿವ ಶಿವರಾಮ ಹೆಬ್ಬಾರ್ ಸೂಚಿಸಿದ್ದಾರೆ.

Home add -Advt

ಗಂಗಾವಳಿ ನದಿಯಲ್ಲಿ ನೀರು ಉಕ್ಕೇರಿದ ಪರಿಣಾಮ ಅಂಕೋಲಾ ತಾಲೂಕಿನ ಶೇವಕಾರ, ಕೈಗಡಿ, ಹೆಗ್ಗಾರ್, ಕಲ್ಲೇಶ್ವರ, ಮುಂತಾದ ಪ್ರದೇಶಗಳಿಗೆ ನೀರು ನುಗ್ಗಿ ಅನೇಕ ಅನಾಹುತಗಳು ಸಂಭವಿಸಿವೆ. ಆದರೆ ಯಾವುದೇ ಜೀವಹಾನಿ ಆಗಿಲ್ಲ. ಯಲ್ಲಾಪುರ ತಾಲೂಕಿನ ಗುಳ್ಳಾಪುರ ಗ್ರಾಮ ಸಂಪೂರ್ಣ ಜಲಾವೃತವಾಗಿದೆ. ಅಲ್ಲಿಯ 20 ಜನರಿಗೆ ಅಲ್ಲಿಯ ಪ್ರೌಢಶಾಲೆಯಲ್ಲಿ ಆಶ್ರಯ ನೀಡಲಾಗಿದೆ. ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಗುಡ್ಡ ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿದ್ದು ಕೂಡಲೇ ಅದನ್ನು ತೆರವುಗೊಳಿಸುವ ಕಾರ್ಯ ಮಾಡಲಾಗುತ್ತಿದೆ.ಪ್ರವಾಹದ ಸ್ಥಿತಿಯಿಂದ ಸಾರ್ವಜನಿಕರಿಗಾದ ಸಮಸ್ಯೆಗಳನ್ನು ನಿವಾರಿಸಲು ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಪೊಲೀಸ್ ಅಧಿಕ್ಷಕರು, ಸಿಇಓ, ಕುಮಟಾ, ಭಟ್ಕಳ, ಶಿರಸಿ, ಕಾರವಾರ ಸಹಾಯಕ ಆಯುಕ್ತರ ತಂಡ ಜಿಲ್ಲೆಯ ಸುರಕ್ಷತೆ ದೃಷ್ಟಿಯಿಂದ ಎಲ್ಲ ಕ್ರಮಗಳನ್ನು ತೆಗೆದುಕೊಂಡು ಸ್ಥಿತಿಯನ್ನು ನಿಭಾಯಿಸಲು ಎನ್.ಡಿ.ಆರ್.ಎಫ್ ತಂಡದ ಜೊತೆಗೆ ಕೂಡಿ‌ ಕೆಲಸ ಮಾಡುತ್ತಿದೆ ಜನರ ಸುರಕ್ಷತೆಗೆ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ.
ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ನದಿಯ ಹತ್ತಿರ ಜನರು ಬರಬಾರದು ಎಂದು ವಿನಂತಿಸಿಕೊಂಡಿದ್ದಾರೆ.

ಪ್ರವಾಸಕ್ಕೆಂದು ಬಂದು ಶಿರ್ಲೆ ಜಲಪಾತದ ಬಳಿ ನಾಪತ್ತೆಯಾಗಿದ್ದ 6 ಜನ ಪ್ರವಾಸಿಗರು ಸುರಕ್ಷಿತವಾಗಿ ಪತ್ತೆ

Related Articles

Back to top button