
ಪ್ರಗತಿವಾಹಿನಿ ಸುದ್ದಿ: “ನನಗೆ ಜೀವನ ಸಾಕಾಗಿದೆ” ಎಂದು ತನ್ನ ಆಪ್ತ ಗೆಳೆಯನಿಗೆ ವಾಟ್ಸಾಪ್ನಲ್ಲಿ ಕೊನೆಯ ಸಂದೇಶ ರವಾನಿಸಿದ 20 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಸ್ಯಾಂಕಿ ಕೆರೆಯಲ್ಲಿ ತಡರಾತ್ರಿ ಬಿದ್ದು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಚಿಕ್ಕಬಾಣವರ ಮೂಲದ ತೇಜು (20) ಆತ್ಮಹತ್ಯೆಗೆ ಶರಣಾದ ದುರ್ದೈವಿ ಎಂದು ಗುರುತಿಸಲಾಗಿದೆ.
ಸದಾಶಿವನಗರದ ಸ್ಯಾಂಕಿ ಕೆರೆ ಬಳಿ ಬಂದಿದ್ದ ತೇಜು ತೀವ್ರ ಮನನೊಂದಿದ್ದಳು ಎನ್ನಲಾಗಿದೆ. ಕೆರೆಗೆ ಧುಮುಕುವ ಮುನ್ನ ತನ್ನ ಗೆಳೆಯನಿಗೆ ಕೊನೆಯ ಮೆಸೇಜ್ ಕಳುಹಿಸಿದ್ದ ಆಕೆ, ತಕ್ಷಣವೇ ತನ್ನ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾಳೆ. ಗೆಳೆಯ ಗಾಬರಿಯಾಗಿ ಸಂಪರ್ಕಿಸಲು ಯತ್ನಿಸಿದರೂ ಫೋನ್ ಸಿಗದ ಕಾರಣ ಆತಂಕ ಸೃಷ್ಟಿಯಾಗಿತ್ತು. ಅಷ್ಟರಲ್ಲೇ ತೇಜು ಕೆರೆಯ ನೀರಿಗೆ ಜಿಗಿದು ತನ್ನ ಜೀವನ ಮುಗಿಸಿಕೊಂಡಿದ್ದಾಳೆ.
ಇಂದಯ ಮುಂಜಾನೆ ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸದಾಶಿವನಗರ ಠಾಣಾ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಅಗ್ನಿಶಾಮಕ ಸಿಬ್ಬಂದಿಯ ನೆರವಿನೊಂದಿಗೆ ಮೃತದೇಹವನ್ನು ಹೊರತೆಗೆದಿದ್ದಾರೆ.
ಈ ಆತ್ಮಹತ್ಯೆಯ ಹಿಂದೆ ಪ್ರೇಮ ವೈಫಲ್ಯ ಅಥವಾ ಪ್ರೀತಿಯ ವಿಚಾರದಲ್ಲಿ ಉಂಟಾದ ತೀವ್ರ ಮನಸ್ತಾಪವಿರಬಹುದು ಎಂದು ಶಂಕಿಸಲಾಗಿದೆ. ಸದ್ಯಕ್ಕೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಯುವತಿಯ ಮೊಬೈಲ್ ಕಾಲ್ ರೆಕಾರ್ಡ್ಸ್ ಹಾಗೂ ಸಂದೇಶಗಳನ್ನು ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ.


