ರಾಚವಿವಿಯಲ್ಲಿ ಮೃತ ಯೋಧರಿಗೆ ಶ್ರದ್ಧಾಂಜಲಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ಪಿಎಫ್ ಸೇನಾ ವಾಹನದ ಮೇಲೆ ಬಾಂಬ್ ದಾಳಿಯಲ್ಲಿ ಮೃತಪಟ್ಟ ಯೋಧರಿಗೆ ಬೆಳಗಾವಿಯ ರಾಣಿ ಚನ್ನಮ್ಮ ವಿವಿಯಲ್ಲಿ ಮೌನಾಚರಣೆ ಆಚರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವಿವಿ ಕುಲಸಚಿವ ಪ್ರೊ. ಸಿದ್ದು ಆಲಗೂರ ಮಾತನಾಡಿ, ಪುಲ್ವಾಮಾದಲ್ಲಿ ಯೋಧರ ಮೇಲೆ ಉಗ್ರರು ಅತ್ಯಂತ ಹೇಯ ಕೃತ್ಯ ಎಸಗಿದ್ದಾರೆ. ಘಟನೆಯಲ್ಲಿ ೪೨ ಯೋಧರು ಹುತಾತ್ಮರಾಗಿದ್ದಾರೆ. ಈ ಕೃತ್ಯ ದೇಶಕ್ಕೆ ಆಘಾತವನ್ನುಂಟು ಮಾಡಿದೆ. ರಾಷ್ಟ್ರಾದ್ಯಂತ ಉಗ್ರರ ಹೇಡಿತನದ ಕೃತ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ. ನಾವು ಇವತ್ತು ದೇಶದಲ್ಲಿ ನೆಮ್ಮದಿಯಿಂದ ಇದ್ದೇವೆ ಎಂದರೆ ಅದಕ್ಕೆ ಯೋಧರು ಕಾರಣ. ತಮ್ಮ ಕುಟುಂಬ, ಬಂಧು, ಬಳಗ ಮರೆತು ಹಗಲು ರಾತ್ರಿ ಎನ್ನದೆ ಯೋಧರು ದೇಶ ಕಾಯುತ್ತಿದ್ದಾರೆ. ಯೋಧರನ್ನು ಕಳೆದುಕೊಂಡ ಕುಟುಂಬಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದರು.
ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿರಿದ್ದರು.
ಆತ್ಮಾಹುತಿ ದಾಳಿ ; ಶಾಸಕ ಬಾಲಚಂದ್ರ ಜಾರಕಿಹೊಳಿ ಕಂಬನಿ
ಪ್ರಗತಿವಾಹಿನಿ ಸುದ್ದಿ, ಗೋಕಾಕ :
ಜಮ್ಮು-ಕಾಶ್ಮೀರದ ಶ್ರೀನಗರ ಹೆದ್ದಾರಿಯ ಅವಂತಿಪೋರದಲ್ಲಿ ಗುರುವಾರ ಸಂಜೆ ಪಾಕ್ ಪ್ರೇರಿತ ಭೀಕರ ಆತ್ಮಾಹುತಿ ದಾಳಿಯನ್ನು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತೀವ್ರವಾಗಿ ಖಂಡಿಸಿದ್ದಾರೆ.
ಇದು ಕಳೆದ ೨೦ ವರ್ಷಗಳಲ್ಲಿ ನಡೆದಿರುವ ಭೀಕರ ದಾಳಿಯಾಗಿದೆ. ಈ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ದಾಳಿಯಲ್ಲಿ ಮೃತರಾದ ಯೋಧರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ. ಹುತಾತ್ಮ ಸೈನಿಕರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಾರ್ಥಿಸಿದ್ದಾರೆ.