ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನ, ಗಣಕಯಂತ್ರ ಹಾಗೂ ಅಂತರ್ಜಾಲದ ಜ್ಞಾನ ಇದ್ದರೆ ತಮಗೆ ನೀಡಲಾದ ಕೆಲಸವನ್ನು ಸುಲಭವಾಗಿ ಹಾಗೂ ಅಚ್ಚುಕಟ್ಟಾಗಿ ಮಾಡಬಹುದು. ಆದ್ದರಿಂದ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗುವ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹೊಸ ಜ್ಞಾನ ಪಡೆದುಕೊಳ್ಳಬೇಕು ಎಂದು ಬೆಳಗಾವಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಬಿ. ಪುಂಡಲೀಕ ಹೇಳಿದರು.
ಎಸ್ಎಸ್ಎ ಮತ್ತು ಆರ್ಎಂಎಸ್ಎ ಘಟಕಗಳ ಜಿಲ್ಲಾ ಕೇಂದ್ರದ ಪಿಎಫ್ಎಂಎಸ್ ತಂತ್ರಾಶ ಅನುಷ್ಠಾನ ಕುರಿತು ನಗರದ ಶ್ರೀಮತಿ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾದ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಗಣಕಯಂತ್ರ ಹಾಗೂ ಅಂತರ್ಜಾಲದ ಜ್ಞಾನ ಪ್ರತಿಯೊಬ್ಬರಿಗೂ ಅತ್ಯವಶ್ಯ. ಸರಕಾರದ ಪ್ರತಿಯೊಂದು ಇಲಾಖೆಯಲ್ಲಿ ಹಣಕಾಸಿನ ವ್ಯವಹಾರಗಳಿಗೆ ಪಿಎಸ್ಎಂಎಸ್ ತಂತ್ರಾಂಶ ಅನುಷ್ಠಾನಗೊಳಿಸಿದ್ದು, ಈಗ ಶಿಕ್ಷಣ ಇಲಾಖೆಯಲ್ಲಿಯೂ ಈ ತಂತ್ರಾಂಶ ಅಳವಡಿಸಿಕೊಳ್ಳುವುದು ಅವಶ್ಯವಿರುವುದರಿಂದ ಎಲ್ಲರೂ ತರಬೇತಿಯ ಸದುಪಯೋಗ ಪಡೆಯಬೇಕೆಂದು ಹೇಳಿದರು.
ಫೆ.೧೪, ೧೫ ರಂದು ನಡೆದ ತರಬೇತಿಯಲ್ಲಿ ಬೆಳಗಾವಿ, ಚಿಕ್ಕೋಡಿ ಹಾಗೂ ಬಾಗಲಕೋಟ ಜಿಲ್ಲೆಗಳ ಶಿಕ್ಷಣ ಇಲಾಖೆಯ ಜಿಲ್ಲಾ ಹಾಗೂ ತಾಲೂಕಾ ಹಂತದ ಅಧಿಕಾರಿಗಳು, ಲೆಕ್ಕ ಸಹಾಯಕರು, ಕೆಜಿಬಿವಿ ಶಾಲೆಗಳ ಮುಖ್ಯ ಶಿಕ್ಷಕರು ಇತ್ಯಾದಿ ಸೇರಿ ಸುಮಾರು ೯೦ ಅಧಿಕಾರಿಗಳು ತರಬೇತಿ ಪಡೆದುಕೊಂಡರು.
ಕೇಂದ್ರ ಹಣಕಾಸು ಮಂತ್ರಾಲಯದ ಎಚ್.ಕೆ. ಗುರುರಾಜ ರಾವ್, ಆಶೀಷ, ಸುನೀಲ ಹಾಗೂ ಪಾವನಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಸಮಗ್ರ ಶಿಕ್ಷಣ ಅಭಿಯಾನ ಜಿಲ್ಲಾ ಯೋಜನಾ ಉಪಸಮನ್ವಯ ಅಧಿಕಾರಿ ಕೆ.ಎಸ್. ನಂದೇರ ಸ್ವಾಗತಿಸಿದರು. ಸಹಾಯಕ ಸಮನ್ವಯಾಧಿಕಾರಿ ಎಸ್.ಡಿ. ನದಾಫ ವಂದಿಸಿದರು. ಇಒ ಎಂ.ಜಿ.ಬೆಳ್ಳಣ್ಣವರ್, ಅಜಯ ಉಚಗಾಂವಕರ, ಎಂ.ಕೆ. ಮಾದಾರ ಉಪಸ್ಥಿತರಿದ್ದರು.