Latest

ನಿರಂತರ ಅಭ್ಯಾಸದಿಂದ ಸಂಗೀತ ಕಲೆ ಒಲಿಸಿಕೊಳ್ಳಲು ಸಾಧ್ಯ: ಬೊಮ್ಮನಹಳ್ಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಸಂಗೀತದಲ್ಲಿ ಅದ್ಭುತ ಶಕ್ತಿ ಇರುವುದನ್ನು ಮನಗಂಡು ಪುರಾತನ ಕಾಲದಿಂದಲೂ ಸಂಗೀತ ಕಲಾವಿದರಿಗೆ ರಾಜಾಶ್ರಯ ನೀಡಲಾಗುತ್ತಿತ್ತು. ಈ ಕಲೆಯನ್ನು ಒಲಿಸಿಕೊಳ್ಳಲು ನಿರಂತರ ಅಭ್ಯಾಸ ಅವಶ್ಯಕ ಎಂದು ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಹೇಳಿದರು. 
ನಗರದ ಕೆಎಲ್‌ಇ ಸಂಗೀತ ವಿದ್ಯಾಲಯದ ವತಿಯಿಂದ ಕೆಎಲ್‌ಇ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದ್ದ ದಿವಂಗತ ಪಂಡಿತ ಹಯವದನ ಜೋಶಿ ಅವರ ೧೧ನೇ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತರ ಕರ್ನಾಟಕದ ಸಂಗೀತ ದಿಗ್ಗಜರಾದ ಪಂ. ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್, ಪಂ. ಬಸವರಾಜ ರಾಜಗುರು, ಪಂ. ಮಲ್ಲಿಕಾರ್ಜುನ ಮನ್ಸೂರ ಅವರಿಗೆಲ್ಲಾ ಭಾರತ ರತ್ನ, ಪದ್ಮಶ್ರೀ, ಪದ್ಮವಿಭೂಷಣ ಈ ಪದಕಗಳು ದೊರೆತದ್ದು ಕರ್ನಾಟಕಕ್ಕೆ ಹೆಮ್ಮೆಯ ವಿಚಾರ. ವೈದ್ಯಕೀಯ ಶಕ್ತಿಯನ್ನೂ ಹೊಂದಿರುವ ಸಂಗೀತದ ಬಗ್ಗೆ ಅಕ್ಕರೆ ಹೊಂದಿರುವ ಪ್ರಭಾಕರ ಕೋರೆ, ತಮ್ಮ ಕೆಎಲ್‌ಇ ವಿಶ್ವವಿದ್ಯಾಲಯದಲ್ಲಿ ಸಂಗೀತ ವಿಭಾಗವೊಂದನ್ನು ಆರಂಭಿಸುವ ಮೂಲಕ ಗಡಿಭಾಗದಲ್ಲಿ ಸಂಗೀತಾಸಕ್ತರಿಗೆ ಅವಕಾಶ ಒದಗಿಸಿ ಉತ್ತಮ ಕೆಲಸ ಮಾಡಿದ್ದಾರೆಂದು ಜಿಲ್ಲಾಧಿಕಾರಿಗಳು ಅಭಿನಂದಿಸಿದರು. 
ಕೆಎಲ್‌ಇ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ವಿವೇಕ ಸಾವಜಿ ಮಾತನಾಡಿ, ಸಂಗೀತ ಶಾಲೆಯ ಸಂಸ್ಥಾಪಕರಾದ ಹಯವದನ ಜೋಶಿ ಅವರನ್ನು ಇಂಥ ವಿಶೇಷ ಕಾರ್ಯಕ್ರಮದ ಮೂಲಕ ಸಂಸ್ಮರಿಸಿ ಭಾವ ಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿರುವುದು ಉತ್ತಮ ಸಂಪ್ರದಾಯ ಎಂದರು.
ಮುಖ್ಯ ಅತಿಥಿ ಜೈಪುರ ಅತ್ರೋಲಿ ಘರಾಣೆಯ ಕಲಾವಿದೆ ವಿದೂಷಿ ಡಾ. ಭಾರತಿ ವೈಶಂಪಾಯನಂ ಶಾಸ್ತ್ರೀಯ, ಉಪಶಾಸ್ತ್ರೀಯ ಹಾಡುಗಾರಿಕೆ ಮೂಲಕ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿದರು. ಕೇದಾರ ವೈಶಂಪಾಯನಂ, ಸಾರಂಗ ಕುಲಕರ್ಣಿ ಸಾಥ್ ನೀಡಿದರು. 
ವಿಭಾಗದ ಮುಖ್ಯಸ್ಥೆ ಡಾ. ಸ್ನೇಹಾ ರಾಜೂರಿಕರ್ ಸ್ವಾಗತಿಸಿದರು. ಡಾ. ರಾಜೇಂದ್ರ ಬಾಂಡನಕರ್ ಸಂಗೀತ ವಿಭಾಗದ ಬಗ್ಗೆ ವಿವರಿಸಿದರು. ಸುನೀತಾ ಪಾಟೀಲ, ಡಾ. ದುರ್ಗಾ ಕಾಮತ್ ನಾಡಕರ್ಣಿ ನಿರೂಪಿಸಿದರು. ಸೀಮಾ ಕುಲಕರ್ಣಿ ಅವರು ವಂದಿಸಿದರು. 
ತಬಲಾ ಮತ್ತು ಹಾರ್ಮೋನಿಯಂನಲ್ಲಿ ಜಿತೇಂದ್ರ ಸಾಬಣ್ಣವರ ಮತ್ತು ಯಾದವೇಂದ್ರ ಪೂಜಾರಿ ಸಹಕರಿಸಿದರು. ಕೆಎಲ್‌ಇ ವೈದ್ಯಕೀಯ ನಿರ್ದೇಶಕ ಡಾ. ಎನ್.ವಿ. ಜಾಲಿ, ಡಾ. ರಾಜೇಶೇಖರ ಉಪಸ್ಥಿತರಿದ್ದರು. 
ಸಭಾ ಕಾರ್ಯಕ್ರಮಕ್ಕೂ ಮುನ್ನ ಕೆಎಲ್‌ಇ ಸಂಗೀತ ಶಾಲೆಯ ವಿದ್ಯಾರ್ಥಿ ಕನ್ನಡ ಕಲರ್‍ಸ್ ವಾಹಿನಿಯ ಕನ್ನಡ ಕೋಗಿಲೆ ರಿಯಾಲಿಟಿ ಶೋ ವಿಜೇತ ಮಾಸ್ಟರ್ ಅನಿಮೇಶ ಹೆಗಡೆ ಅವರಿಂದ ಸಂಗೀತ ಸುಧೆ ಹಾಗೂ ಇತ್ತೀಚೆಗೆ ಗೋಲ್ಡ್‌ನ್ ವಾಯ್ಸ್ ಆಫ್ ಬೆಳಗಾವಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗೆದ್ದ ಕೆಎಲ್‌ಇ ಸಂಗೀತ ವಿಭಾಗದ ವಿದ್ಯಾರ್ಥಿಗಳಾದ ಶ್ರೀವತ್ಸ, ಕಾಲಜ್ ಮತ್ತು ರಾಜಶ್ರೀ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

Related Articles

Back to top button