ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ವಿಭಜಿಸುವ ಉದ್ದೇಶದ ಹಿಂದೆ ದಕ್ಷಿಣ ಕರ್ನಾಟಕದ ಶಾಸಕರ ಮತ್ತು ಇಬ್ಬರು ಪ್ರಭಾವಿ ಸಚಿವರ ಹುನ್ನಾರ ಇದೆ ಎನ್ನುವ ಅಂಶ ಬಹಿರಂಗವಾಗಿದೆ. ಅಲ್ಲದೆ ಈ ಪ್ರಕ್ರಿಯೆ ಕಳೆದ ಡಿಸೆಂಬರ್ ನಲ್ಲಿ ಆರಂಭವಾಗಿತ್ತು ಎನ್ನುವುದೂ ಗೊತ್ತಾಗಿದೆ.
ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು 2018ರ ಡಿಸೆಂಬರ್ 13ರಂದೇ ಉನ್ನತ ಶಿಕ್ಷಣ ಇಲಾಖೆಯ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಮತ್ತು ವಿಟಿಯು ಕುಲಪತಿಗಳಿಗೆ ಪತ್ರ ಬರೆದು ವಿಟಿಯು ವಿಭಜನೆ ಸಂಬಂಧ ಅಭಿಪ್ರಾಯ ಕೇಳಿದ್ದಾರೆ.
ಈಗಲೂ ಪ್ರತಿಭಟಿಸದಿದ್ದರೆ ಬೆಳಗಾವಿಯನ್ನೇ ಎತ್ತಿಕೊಂಡು ಹೋದಾರು
ಪತ್ರದಲ್ಲಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ಯ ಸಚಿವರು, ಕಾನೂನು ಮತ್ತು ಸಂಸದೀಯ ಸಚಿವರು, ಕೃಷಿ ಸಚಿವರು, ಕೋಲಾರ, ಚಿಂತಾಮಣಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಮಾಲೂರು, ಬಂಗಾರಪೇಟೆ ಮುಳಬಾಗಿಲು ಕ್ಹಾಷೇತ್ಗೂರದ ಸಾಸಕರು ಹಾಗೂ ವಿಧಾನ ಪರಿಷತ್ ಸದಸ್ಯ ಚೌಡರೆಡ್ಡಿ ಅವರು 2018ರ ನವೆಂಬರ್ 26ರಂದು ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿ ರಾಜ್ಯದ ಭವಿಷ್ಯ ತಾಂತ್ರಿಕ ಶಿಕ್ಷಣದ ಗುಣಮಟ್ಟ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಪ್ರೊಯೋಶ್ ಪಾಲ್ ವರದಿಯ ಪ್ರಕಾರ ಹಾಗೂ ಬೆಂಗಳೂರು ವಿಶ್ವವಿದ್ಯಾಲಯವನ್ನು ವಿಭಜಿಸಿದ ಹಾಗೆ, ಅವಿಭಜಿತ ಆಂದ್ರಪ್ರದೇಶದಲ್ಲಿ ಜೆಎನ್ ಟಿಯು ವಿವಿ ವಿಭಜಿಸಿದ ಹಾಗೆ ವಿಶ್ವೇಶ್ವರಯ್ಯ ತಾಂತ್ರಿ ವಿವಿಯನ್ನು ವಿಭಜಿಸಿ ವಿಶ್ವೇಶ್ವರಯ್ಯನವರ ಹುಟ್ಟೂರಾದ ಮುದ್ದೇನಳ್ಳಿಯಲ್ಲಿ ಸ್ಥಾಪಸಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಹಾಗಾಗಿ ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಬರೆದಿದ್ದರು.
ಆದರೆ ನಂತರ ಡಿಸೆಂಬರ್ 27ರಂದು ಮರು ಪತ್ರ ಬರೆದು ಈ ವಿಷಯದಲ್ಲಿ ಸರಕಾರದ ನಿರ್ದೇಶನ ಬರುವವರೆಗೂ ಯಾವುದೇ ಪ್ರಕ್ರಿಯೆ ನಡೆಸಬಾರದು ಎಂದೂ ಸೂಚಿಸಲಾಗಿತ್ತು.