ಸದ್ದಿಲ್ಲದೆ 8 ವಿಧೇಯಕಗಳಿಗೆ ವಿಧಾನಸಭೆ ಅಂಗೀಕಾರ!
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಶಿಕ್ಷಕರ ವರ್ಗಾವಣೆ ತಿದ್ದುಪಡಿ ವಿಧೇಯಕ ಸೇರಿದಂತೆ ಒಟ್ಟೂ 8 ವಿಧೇಯಕಗಳಿಗೆ ವಿಧಾನಸಭೆ ಬುಧವಾರ ಸದ್ದಿಲ್ಲದೆ ಅಂಗೀಕಾರ ನೀಡಿದೆ.
ಬಿಜೆಪಿ ಪ್ರತಿಭಟನೆ, ಕೋಲಾಹಲದ ಮಧ್ಯೆಯೇ ಈ ವಿಧೇಯಕಗಳನ್ನು ಸರಕಾರ ಅಂಗೀಕರಿಸಿದೆ.
ಶಿಕ್ಷಕರ ವರ್ಗಾವಣೆ 3ನೇ ವರ್ಷವೂ ಅಯೋಮಯ! ಅದಕ್ಕಿದೆ 3 ಕಾರಣ!!
ವರ್ಗಾವಣೆಗೆ ನಿರ್ಲಕ್ಷ್ಯ :ಸರಕಾರದ ವಿರುದ್ಧ ಶಿಕ್ಷಕರ ಕಿಡಿ
ಟಿಜಿಟಿ ಶಿಕ್ಷಕರಿಗೆ ಸಿಹಿ ಸುದ್ದಿ; ಶಿಕ್ಷಣ ಇಲಾಖೆಯ ಆದೇಶ
ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ:
ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ 2007ಕ್ಕೆ ಮತ್ತಷ್ಟು ತಿದ್ದುಪಡಿ ಮಾಡುವ ವಿಧೇಯಕಕ್ಕೆ ಬುಧವಾರ ಅಂಗೀಕಾರ ನೀಡಲಾಗಿದೆ.
ಶಿಕ್ಷಕ ಅಥವಾ ಆ ಶಿಕ್ಷಕರ ಪತಿ ಅಥವಾ ಪತ್ನಿ ಅಥವಾ ಮಕ್ಕಳು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಲ್ಲಿ ಮತ್ತು ಅದಕ್ಕೆ ವೈದ್ಯಕೀಯ ಚಿಕಿತ್ಸೆ ಎಲ್ಲೂ ದೊರೆಯದಿದ್ದಲ್ಲಿ ಅಂತವರಿಗೆ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡಲಾಗುತ್ತದೆ.
ಪತಿ ಮತ್ತು ಪತ್ನಿ ಪ್ರಕರಣದ ಸಂದರ್ಭದಲ್ಲಿ ಒಂದೇ ಸ್ಥಳದಲ್ಲಿ ಸ್ಥಳ ನಿಯುಕ್ತಿಗಾಗಿ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡಲಾಗುವುದು.
ಶಿಕ್ಷಕರಿಗೆ ಆ ಶಿಕ್ಷಕರ ಪತಿ ಅಥವಾ ಪತ್ನಿ ಸರಕಾರಿ ಅಥವಾ ಸಾರ್ವಜನಿಕ ವಲಯ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಸ್ಥಳಗಳಿಗೆ ವರ್ಗಾವಣೆ ಅವಕಾಶ ಕಲ್ಪಿಸಲಾಗಿದೆ.
ಕೋರಿಕೆ ವರ್ಗಾವಣೆ ಸೇವಾವಧಿ 3 ವರ್ಷಕ್ಕೆ ಇಳಿಕೆ:
ವಿವಿಧ ವೃಂದಗಳ ವಲಯದಲ್ಲಿನ ವರ್ಗಾವಣೆಗಾಗಿ ಸೇವಾವಧಿಯನ್ನು 5 ವರ್ಷಗಳಿಂದ 3 ವರ್ಷಗಳಿಗೆ ಕಡಿಮೆಗೊಳಿಸಲಾಗಿದೆ.
ಪದವಿ ಪೂರ್ವ ಶಿಕ್ಷಣ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ನಗರ ಪಾಲಿಕೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳನ್ನು ನಗರ ಪ್ರದೇಶ ವ್ಯಾಪ್ತಿಯೊಳಗೆ ಸೇರಿಸದಿರಲು ತೀರ್ಮಾನಿಸಲಾಗಿದೆ.
ಒಟ್ಟಾರೆ, ಕಳೆದ 3 ವರ್ಷದಿಂದ ಕಗ್ಗಂಟಾಗಿದ್ದ ಶಿಕ್ಷಕರ ವರ್ಗಾವಣೆ ವಿಷಯದಲ್ಲಿ ಸರಕಾರ ಬಲಾಢ್ಯರ ಲಾಬಿಗೆ ಮಣಿದಂತಾಗಿದೆ. ಹಲವಾರು ವರ್ಷಗಳಿಂದ ನಗರ ಪ್ರದೇಶಗಳಲ್ಲಿ ಬೀಡು ಬಿಟ್ಟಿದ್ದ ಶಿಕ್ಷಕರು ಅಲ್ಲಿಂದ ಎತ್ತಂಗಡಿಯಾಗದಂತೆ ಕಳೆದ 3 ವರ್ಷದಿಂದ ಲಾಬಿ ನಡೆಸಿದ್ದರು. ಇದರಿಂದಾಗಿಯೇ ವರ್ಗಾವಣೆ ಪ್ರಕ್ರಿಯೆ ನಡೆಸಲು ಸಾಧ್ಯವಾಗಿರಲಿಲ್ಲ.
ಈಗಿನ ಕೆಲವು ತಿದ್ದುಪಡಿ ಅಂತವರಿಗೆ ಸಹಾಯಮಾಡುವ ಉದ್ದೇಶ ಹೊಂದಿದಂತಿದೆ. ಅಂತೂ ಸರಕಾರ ಗ್ರಾಮೀಣ ಪ್ರದೇಶದಲ್ಲಿ, ಕುಗ್ರಾಮಗಳಲ್ಲಿ ಕೆಲಸ ಮಾಡುವ ಬಡ ಶಿಕ್ಷಕರಿಗಿಂದ ನಗರದಲ್ಲಿರುವ ಪ್ರಬಲರ ಪರವಾಗಿದೆ ಎನ್ನುವುದನ್ನು ಒಪ್ಪಿಕೊಂಡಂತಾಗಿದೆ.
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ ಶೇರ್ ಮಾಡಿ ಮತ್ತು ಉಚಿತವಾಗಿ ಸಬ್ ಸ್ಕ್ರೈಬ್ ಆಗಲು ತಿಳಿಸಿ)