
ಪ್ರಗತಿವಾಹಿನಿ ಸುದ್ದಿ, ಹಾರೂಗೇರಿ
ಇಂದು ಮಹಿಳೆ ಆಟೋರಿಕ್ಷಾದಿಂದ ಅಂತರಿಕ್ಷದವರೆಗೆ ಎಲ್ಲ ರಂಗಗಳಲ್ಲಿ ಸಾಧನೆಯನ್ನು ಮಾಡುತ್ತಿದ್ದಾಳೆ. ಆದರೆ ಅದು ಕೇವಲ ನಗರಗಳಿಗೆ ಮಾತ್ರ ಸೀಮಿತವಾಗಿದೆ. ಹಳ್ಳಿಗಳಲ್ಲಿ ಮಹಿಳಾ ಜಾಗೃತಿಯ ಅವಶ್ಯಕತೆ ಇದೆ ಎಂದು ಬೆಳಗಾವಿಯ ಮಹಾಂತೇಶನಗರ ಬಿಎಡ್ ಕಾಲೇಜಿನ ಪ್ರಾಚಾರ್ಯೆ ಡಾ ನಿರ್ಮಲಾ ಬಟ್ಟಲ ಹೇಳಿದ್ದಾರೆ.
ಮಹಿಳಾ ಜಾಗೃತಿ ಮತ್ತು ರಕ್ಷಣಾ ಸಂಘ ಹಾರುಗೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡುತ್ತಿದ್ದರು.
ಮಹಿಳಾ ಜಾಗೃತಿ, ಮಹಿಳಾ ಸಬಲೀಕರಣ ಮನೆಯಿಂದಲೇ ಪ್ರಾರಂಭವಾಗಬೇಕು. ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟಿ ಹೆಣ್ಣು ಮಗುವಿನ ಜನನವನ್ನು ಸಂಭ್ರಮಿಸುವಂತಾಗಬೇಕು. ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನೀಡಿ ಆರ್ಥಿಕವಾಗಿ ಸಬಲವಾಗುವುದಕ್ಕೆ ಅವಕಾಶಗಳನ್ನು ಮಾಡಿಕೊಡಬೇಕು. ಹಳ್ಳಿ ಹಳ್ಳಿಯ ಪ್ರತಿ ಹೆಣ್ಣು ಮಗು ಅಭಿಮಾನದ ಸಂಕೇತವಾಗಿ ಬೆಳೆಯಲು ಅವಕಾಶವನ್ನು ಮಾಡಿಕೊಡಬೇಕು ಎಂದು ಅವರು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಕುಡಚಿ ಶಾಸಕ ಪಿ ರಾಜೀವ್ ಮಾತನಾಡಿ, ಮಹಿಳೆಯರು ಎಲ್ಲ ರಂಗದಲ್ಲಿ ಅವಕಾಶಗಳನ್ನು ಬಳಸಿಕೊಂಡು ಪುರುಷರಿಗೆ ಸರಿಸಮಾನವಾಗಿ ನಿಲ್ಲಬೇಕು. ಮಹಿಳೆಯರು ಕಾನೂನಿನ ಅರಿವು ಮಾಡಿಕೊಂಡು ಅದನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಹಂದಿಗುಂದದ ಶ್ರೀ ಶಿವಾನಂದ ಮಹಾಸ್ವಾಮಿಗಳು ವಹಿಸಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
(ಪ್ರಗತಿವಾಹಿನಿ ಸುದ್ದಿಗಳನ್ನು ಇತರರಿಗೆ ಶೇರ್ ಮಾಡಿ)