ರಾಜ್ಯ ವಿಧಾನ ಪರಿಷತ್ ಸಭಾಪತಿಯಾಗಿ ಕೆ. ಪ್ರತಾಪಚಂದ್ರ ಶೆಟ್ಟಿ ಅವಿರೋಧ ಆಯ್ಕೆ
ಎಲ್ಲವೂ ಉಡುಪಿ ಮಯ !
ಪ್ರಗತಿವಾಹಿನಿ ಸುದ್ದಿ, ಸುವರ್ಣವಿಧಾನಸೌಧ, ಬೆಳಗಾವಿ
ರಾಜ್ಯ ವಿಧಾನ ಪರಿಷತ್ತಿನ ಸಭಾಪತಿಯಾಗಿ ಕೆ. ಪ್ರತಾಪಚಂದ್ರಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸ್ಥಾನಕ್ಕೆ ಅವರೊಬ್ಬರೆ ನಾಮಪತ್ರ ಸಲ್ಲಿಸಿದ್ದರು. ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಇಂದು ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿದರು..
ಕಲಾಪ ಪ್ರಾರಂಭವಾಗುತ್ತಿದಂತೆ ಸಭಾಪತಿಯವರ ಚುನಾವಣಾ ಪ್ರಸ್ತಾವನೆಯನ್ನು ಹಿರಿಯ ಸದಸ್ಯ ಎಸ್ ಆರ್ ಪಾಟೀಲ್ ಅವರು ಸೂಚಿಸಿದರು. ಸರ್ಕಾರದ ಮುಖ್ಯ ಸಚೇತಕ ಐವಾನ್ ಡಿ’ಸೋಜಾ ಅವರು ಪ್ರಸ್ತಾವವನ್ನು ಅನುಮೋದಿಸಿದರು. ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರತಾಪಚಂದ್ರ ಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾದರು ಎಂದು ಪ್ರಕಟಿಸಿದರು.
ನಂತರ ಉಪ ಮುಖ್ಯಮಂತ್ರಿ ಡಾ ಜಿ. ಪರಮೇಶ್ವರ್, ಸಭಾನಾಯಕಿ ಡಾ ಜಯಮಾಲಾ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಹಾಗೂ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು ನೂತನ ಸಭಾಪತಿಗಳನ್ನು ಪೀಠಕ್ಕೆ ಕರೆತಂದರು. ಕೆ. ಪ್ರತಾಪಚಂದ್ರ ಶೆಟ್ಟಿ ಅವರು ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ನೂತನ ಸಭಾಪತಿಯವರನ್ನು ಆಡಳಿತ ಹಾಗೂ ಪ್ರತಿಪಕ್ಷದ ೨೫ ಕ್ಕೂ ಹೆಚ್ಚು ಸದಸ್ಯರು ಅಭಿನಂದಿಸಿದರು.
ಎಲ್ಲವೂ ಉಡುಪಿ ಮಯ !
ರಾಜ್ಯ ವಿಧಾನ ಪರಿಷತ್ನ ನೂತನ ಸಭಾಪತಿ ಪ್ರತಾಪಚಂದ್ರಶೆಟ್ಟಿ, ಸಭಾನಾಯಕಿ ಡಾ ಜಯಮಾಲಾ ಹಾಗೂ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರೆಲ್ಲರೂ ಉಡುಪಿ ಜಿಲ್ಲೆಯವರೇ ಆಗಿರುವುದು ಪರಿಷತ್ನ ಇತಿಹಾಸದಲ್ಲಿ ಒಂದು ದಾಖಲೆಯಾಗಿದೆ.




