ಶೇಖರ ಕಲ್ಲೂರ, ಚನ್ನಮ್ಮನ ಕಿತ್ತೂರು :
ಐತಿಹಾಸಿಕ ಚನ್ನಮ್ಮನ ನಾಡಾದ ಕಿತ್ತೂರಿನಲ್ಲಿ ನೂತನ ಕಸಾಪ ತಾಲೂಕಾ ಘಟಕ ನಿರ್ಮಾಣಗೊಂಡು ತಿಂಗಳಷ್ಟರಲ್ಲಿ ತಾಲೂಕಾ ಕಸಾಪ ಸಮ್ಮೇಳನ ಜರುಗುವುದು ನಾಡಿನ ಜನರಿಗೆ ಸಂತಸ ತಂದಿದೆ.
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಸಮ್ಮೇಳನವು ಖ್ಯಾತ ಸಾಹಿತಿ, ಕವಿ, ಡಾ. ಜಚನಿ ಅವರು ಜನಿಸಿದ ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ಸೋಮವಾರ ಜರುಗುತ್ತಿದೆ.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಮೀಪ ಗಿರಿಯಾಲ ಗ್ರಾಮದ ಸಾಹಿತಿ ಸುನಂದಾ ಎಮ್ಮಿ ಆಯ್ಕೆಯಾಗಿದ್ದಾರೆ.
ಬೆಳಿಗ್ಗೆ 7.30 ಕ್ಕೆ ಸಮ್ಮೇಳದ ಪರಿಷತ್ತಿನ ಧ್ವಜಾರೋಹಣ ನಡೆಯಲಿದ್ದು, ಕಸಾಪ ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್ಡ ಅವರು ನೆರವೇರಿಸುವರು. ನಂತರ ಗ್ರಾಮದ ಸ್ವಾತಂತ್ರ್ಯ ಯೋಧರಾದ ಪಾರ್ವತೆವ್ವಾ ಕೇರಿಮಠ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸುವರು. ನಾಡಧ್ವಜಾರೋಹಣವನ್ನು ತಾಲೂಕಾ ಕಸಾಪ ಅಧ್ಯಕ್ಷ ಚಂದ್ರಶೇಖರ ಹಲಸಗಿ ಅವರು ನಡೆಸಿಕೊಡಲಿದ್ದಾರೆ.
ಬೆಳಿಗ್ಗೆ 8.30 ಗಂಟೆಗೆ ಡಾ. ಜಚನಿ ಅವರು ಜನಿಸಿದ ಮನೆ ಮುಂಭಾಗದಿಂದ ಭುವನೇಶ್ವರಿದೇವಿಗೆ ಪೂಜೆ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಗ್ರಾಮದ ಪ್ರಮುಖ ಓಣಿಯಲ್ಲಿ ಮಖಾಂತರ ಕಲ್ಯಾಣ ಮಂಟಪಕ್ಕೆ ತೆರಳುತ್ತದೆ.
ಮೆರವಣಿಗೆಗೆ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಚಾಲನೆ ನೀಡಿಲಿದ್ದಾರೆ. ಗ್ರಾ ಪಂ ಅಧ್ಯಕ್ಷೆ ಕೌಸರಬಾನು ಮುಲ್ಲಾ, ರಾಣಿ ಶುಗರ್ಸನ ನಿರ್ದೇಶಕ ಶಿವನಗೌಡ ಪಾಟೀಲ ಹಾಗೂ ಪಿಕೆಪಿಎಸ್ನ ನಿರ್ದೇಶಕರಾದ ಅದೃಶಗೌಡ ಪಾಟೀಲ ಉಪಸ್ಥಿತಿವಹಿಸಲಿದ್ದಾರೆ.
ನಂತರ 10.30 ಗಂಟೆಗೆ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ರಾಜಗುರು ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳ ಸಾನಿಧ್ಯ ವಹಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರಾಜ್ಯ ಸಭಾ ಸದಸ್ಯರಾದ ಪ್ರಭಾಕರ ಕೋರೆ ಅವರು ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಿದ್ದು ಮುಖ್ಯ ಅತಿಥಿಗಳಾಗಿ ಶಾಸಕರಾದ ಮಹಾಂತೇಶ ಕೌಜಲಗಿ, ಅಂಜಲಿ ನಿಂಬಾಳ್ಕರ, ವಿಧಾನಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ ಹಾಗೂ ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರು ಆಗಮಿಸಲಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ವಿಚಾರಗೊಷ್ಠಿ ನಡೆಯುತ್ತದೆ. ಡಾ. ಸಿ ಕೆ ನಾವಲಗಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಗೋಷ್ಠಿಯಲ್ಲಿ ಡಾ. ಸಂತೋಷ ಹಾನಗಲ್, ಹಾಗೂ ಪ್ರಕಾಶ ಗಿರಿಮಲ್ಲನವರ ಅವರು ಭಾಗವಹಿಸುತ್ತಾರೆ. ನಂತರ ಕವಿಗೋಷ್ಠಿ ನಡೆಯುತ್ತದೆ. ಗಿರಿಜಾದೇವಿ ಮ ದುರ್ಗದಮಠ ಅವರು ಅಧ್ಯಕ್ಷತೆ ವಹಿಸಲಿದ್ದು, ಹೇಮಾ ಸೋನಳ್ಳಿ ಹಾಗೂ ಮಹಾಂತೇಶ ಹುಬ್ಬಳ್ಳಿ ಭಾಗವಹಿಸುತ್ತಾರೆ. ಇವರ ಜೊತೆ ಕಿತ್ತೂರು ತಾಲೂಕಿನ ಮಹಿಳಾ ಹಾಗೂ ಪುರುಷ ಕವಿಗಳು ತಮ್ಮ ಕವನಗಳನ್ನು ಪ್ರಸ್ತುತಪಡಿಸುತ್ತಾರೆ. ಸಂಜೆ 5. 30 ಕ್ಕೆ ಸಮಾರೋಪ ಸಮಾರಂಭ ಜರುಗಲಿದೆ. ನಿಚ್ಚಣಿಕಿಯ ಪಂಚಾಕ್ಷರಿ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಸಾಹಿತಿ ಶಿವಾ ಕುಲಕರ್ಣಿ ಅವರು ಅಧ್ಯಕ್ಷತೆ ವಹಿಸುವರು.
ಸಾಹಿತಿ ಮಂಜುನಾಥ ಕಳಸಣ್ಣವರ, ಪ್ರಭು ಪಾಟೀಲ, ಸತೀಶ ಕಾರಿಮನಿ, ವಿವೇಕ ಕುರಗುಂದ, ಎಮ್ ಎಸ್ ಕಲ್ಮಠ, ಸಿ.ಎಂ.ಮುರಗೊಡ ಅವರು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಲಿದ್ದಾರೆ.
ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳು ಪಾಲ್ಗೊಳ್ಳಲಿವೆ.