ಸಿಎಂ ಬೊಮ್ಮಾಯಿ ಮಾಮಾಗೆ ನನ್ನ ಬೆಂಬಲ ಎಂದ ಕಿಚ್ಚ ಸುದೀಪ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಿಚ್ಚ ಸುದೀಪ್ ರಾಜಕೀಯ ವ್ಯಕ್ತಿಯಲ್ಲ, ಅವರು ಚಿತ್ರರಂಗದಲ್ಲಿರುವ ವ್ಯಕ್ತಿ ಅವರಿಂದು ತಮ್ಮ ನಿಲುವು, ಮನದಾಳದ ಮಾತನ್ನು ಹಂಚಿಕೊಳ್ಳಲಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಕಿಚ್ಚ ಸುದೀಪ್, ಬೊಮ್ಮಾಯಿ ಅವರನ್ನು ಚಿಕ್ಕಂದಿನಿಂದಲೂ ನೊಡಿದ್ದೇನೆ. ಚಿತ್ರರಂಗದ ಕಷ್ಟದ ದಿನಗಳಲ್ಲಿ ಕೆಲವರು ನನ್ನ ಬೆನ್ನಿಗೆ ನಿಂತಿದ್ದರು. ಅವರಲ್ಲಿ ಬೊಮ್ಮಾಯಿ ಕೂಡ ಒಬ್ಬರು. ಸಿಎಂ ಬೊಮ್ಮಾಯಿ ಅವರಿಗೆ ಬೆಂಬಲ ಕೊಡಲು ನಾನು ಸಿದ್ಧ. ಬೊಮ್ಮಾಯಿ ಅವರ ವ್ಯಕ್ತಿತ್ವಕ್ಕೆ ನಾನು ಬೆಲೆ ಕೊಡುತ್ತೇನೆ. ಇಲ್ಲಿ ರಾಜಕೀಯ ಬರಲ್ಲ. ಒಬ್ಬ ವ್ಯಕ್ತಿಯ ವಿಚಾರವಾಗಿ ಮಾತನಾಡುತ್ತಿದ್ದೇನೆ. ನಾನು ಬೊಮ್ಮಾಯಿ ಮಾಮಾಗೆ ಬೆಂಬಲ ಕೊಡುತ್ತಿದ್ದೇನೆ ಎಂದರು.

ಬೊಮ್ಮಾಯಿ ಅವರು ಈ ಚುನಾವಣೆಯಲ್ಲಿ ನಿನ್ನಿಂದ ಈ ಕೆಲಸವಾಗಬೇಕು ಎಂದರೆ ಮಾಡಲು ನಾನು ಸಿದ್ಧನಿದ್ದೇನೆ. ಹಣಕ್ಕಾಗಿ ನಾನು ಅವರಿಗೆ ಬೆಂಬಲ ನೀಡುತ್ತಿಲ್ಲ. ಹಣಗಳಿಸಲು ನನಗೆ ಸಾಮರ್ಥ್ಯ ಇದೆ, ಬೇರೆ ಅವಕಾಶವಿದೆ ಎಂದು ಅವರು ಹೇಳಿದರು.

ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಯಾವುದೇ ಕಾರಣಕ್ಕೂ ರಾಜಕೀಯ ಪ್ರವೇಶ ಮಾಡಲ್ಲ. ಅನಿವಾರ್ಯಕಾರಣಗಳಿಗೆ ಚುನಾವಣೆಗೆ ನಿಲ್ಲುವ ವ್ಯಕ್ತಿಯೂ ಅಲ್ಲ. ಹಣಕ್ಕಾಗಿ ನಾನು ಚುನಾವಣ ಪ್ರಚಾರ ಮಾಡುತ್ತಿಲ್ಲ. ಎಲ್ಲರ ಪರ ಚುನಾವಣೆ ಪ್ರಚಾರ ಮಾಡಲು ಆಗಲ್ಲ. ಸಿಎಂ ಬೊಮ್ಮಾಯಿ ಅವರು ಯಾರ ಪರ ಹೇಳುತ್ತಾರೋ ಅವರ ಪರ ಪ್ರಚಾರ ಮಾಡುತ್ತೇನೆ ಎಂದರು.

ಪರಿಚಯ
ಚಿತ್ರರಂಗದಲ್ಲಿ ನನಗೆ ಗಾಡ್ ಫಾದರ್ ಇರಲಿಲ್ಲ. ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿರುವುದು ನನಗೆ ಖುಷಿ. ಅವರಿಗೆ ನಾನು ಗೌರವ ಸಲ್ಲಿಸುತ್ತೇನೆ. ಚಿಕ್ಕ ವಯಸ್ಸಿನಿಂದ ಬೊಮ್ಮಾಯಿಯರನ್ನು ಮಾಮ ಎನ್ನುತ್ತೇನೆ ಎಂದ ಸುದೀಪ್, ರಾಜಕಾರಣಕ್ಕೆ ನಾನು ಇಳಿಯುವುದಿಲ್ಲ . ಆರಂಭದ ದಿನಗಳಿಂದಲೂ ನನಗೆ ಬೊಮ್ಮಾಯಿಯವರು ಪರಿಚಯ ಎಂದರು. ಬೊಮ್ಮಾಯಿಯವರ ಆಹ್ವಾನದ ಮೇಲೆ ಸುದ್ದಿಗೋಷ್ಠಿಗೆ ಬಂದಿದ್ದೇನೆ. ನಾನು ಬೊಮ್ಮಾಯಿ ಅವರ ಬೆಂಬಲಕ್ಕೆ ನಿಂತಿದ್ದೇನೆ. ನನ್ನ ತಂದೆ ತೋರಿಸಿದ ದಾರಿಯಲ್ಲಿ ನಡೆಯುವುದಾಗಿ ತಿಳಿಸಿದರು.
ಸಿಎಂ ಅವರಿಗೆ ಅವಶ್ಯಕತೆ ಇದ್ದಲ್ಲಿ ನಾನಿರುತ್ತೇನೆ. ಅನಿವಾರ್ಯ ಕಾರಣಗಳಿಗೆ ನಾನು ನಿಲುವು ಕೈಗೊಳ್ಳುವುದಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವುದೇ ಆದರೆ ಸ್ಪಷ್ಟವಾಗಿ ನಿರ್ಧಾರ ತೆಗೆದುಕೊಳ್ಳುವೆ ಎಂದರು. ಸಿಎಂ ಕೆಲವರಿಗೆ ಬೆಂಬಲಿಸಬೇಕು ಎಂದಿದ್ದಾರೆ, ಅವರಿಗೆ ಬೆಂಬಲ ನೀಡುತ್ತೇನೆ ಎಂದರು.

ಎಲ್ಲರ ಪರ ಪ್ರಚಾರ ಸಾಧ್ಯವಿಲ್ಲ
ಈ ವೇದಿಕೆಗೆ ಬರುವ ಅಗತ್ಯ ನನಗಿರಲಿಲ್ಲ. ಬೇರೆ ಪಕ್ಷದವರು ನನ್ನ ಕಷ್ಟಕ್ಕೆ ಬಂದಿದ್ದರೆ ಅವರ ಪರವೂ ಪ್ರಚಾರ ಕೈಗೊಳ್ಳುತ್ತೇನೆ. ಆದರೆ, ಎಲ್ಲರ ಪರ ಪ್ರಚಾರ ಮಾಡಲು ಸಾಧ್ಯವಿಲ್ಲ ಎಂದರು.

ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಪ್ರವೇಶವಿಲ್ಲ
ಪ್ರಕಾಶ್‌ ರಾಜ್‌ ಜೊತೆ ನಾನು ರನ್ನ ಚಿತ್ರ ಮಾಡಿದ್ದೇನೆ. ಪ್ರಕಾಶ್‌ ರೈ ಜತೆ ಮುಂದಿನ ಚಿತ್ರಕ್ಕೆ ಕಾಯುತ್ತಿದ್ದೇನೆ. ನಾನು ರಾಜಕೀಯಕ್ಕೆ ಪ್ರವೇಶಿಸುತ್ತಿಲ್ಲ. ಹಣಕ್ಕಾಗಿ ನಾನು ಪ್ರಚಾರಕ್ಕೆ ಬರುತ್ತಿಲ್ಲ. ಹಣ ಮಾಡುವುದಾದರೆ ನನಗೆ ಸಿನಿಮಾ ರಂಗ ಇದೆ. ಚಿತ್ರರಂಗದಿಂದಲೇ ನನಗೆ ಸಾಕಷ್ಟು ಹಣ ಬರಬೇಕಿದೆ. ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರಲ್ಲ. ಅನಿವಾರ್ಯ ಕಾರಣಗಳಿಗೂ ನಾನು ಚುನಾವಣೆಗೆ ನಿಲ್ಲುವ ನಿರ್ಧಾರ ಮಾದುವುದಿಲ್ಲ ಎಂದರು.
ಭಾರತ ಎತ್ತರಕ್ಕೆ ಏರುತ್ತಿರುವುದು ಏಕೆ ಎಂದು ತಿಳಿದಿದೆ. ಭಾರತದಲ್ಲಿ ಆಗಿರುವ ಅಭಿವೃದ್ದಿ ಬಗ್ಗೆ ನನಗೆ ಖುಷಿ ಇದ್ದು, ಭ್ರಷ್ಟಾಚಾರದ ಬಗ್ಗೆ ಕಾನೂನು ಸೂಕ್ತ ಕ್ರಮ ಕೈಗೊಳ್ಳಲಿದೆ.
ಅಭಿವೃದ್ದಿ ಆಗಿರುವುದನ್ನು ಗಮನಿಸಿದ್ದು, ಅದು ನನ್ನ ಅಭಿಪ್ರಾಯದ ಮೇಲೂ ಪ್ರಭಾವ ಬೀರಿದೆ. ನಮ್ಮ ನಾಯಕತ್ವವನ್ನ ನಾನು ಒಪ್ಪಿಕೊಳ್ಳುತ್ತೇನೆ. ನಾನು ಮೋದಿ ನಾಯಕತ್ವವನ್ನ ಒಪ್ಪಿಕೊಳ್ಳುತ್ತೇನೆ. ಆದರೆ, ಅದಕ್ಕೂ ಇಂದಿನ ನಿರ್ಣಯಕ್ಕೂ ಸಂಬಂಧವಿಲ್ಲ. ಒಳ್ಳೆಯ ಕಾರಣಗಳಿಗಾಗಿ ಬೆಂಬಲ ನೀಡುತ್ತಿರುವುದಾಗಿ ತಿಳಿಸಿದರು. ಹಲವು ಸಿದ್ದಾಂತಗಳನ್ನು ನಾನು ಸಹ ಒಪ್ಪುತ್ತೇನೆ ಎಂದರು.

ಒತ್ತಡ ಇಲ್ಲ
ಹಿಂದೆ ತಮ್ಮ ಮೇಲೆ ಐಟಿ ದಾಳಿ ನಡೆದ ಒತ್ತಡಕ್ಕೆ ಮಣಿದು ಬೆಂಬಲ ನೀಡುತ್ತಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆ ಗೆ ಉತ್ತರಿಸಿ, ಒತ್ತಡಕ್ಕೆ ಒಳಗಾಗುವ ವ್ಯಕ್ತಿ ನಾನಲ್ಲ. ಪ್ರಚಾರಕ್ಕೆ ಬರಲು ಯಾರ ಒತ್ತಡವೂ ಇಲ್ಲ. ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬೆಂಬಲಕ್ಕೆ ನಿಂತಿದ್ದೇನೆ ಎಂದರು.

*ನಟ ಸುದೀಪ್ ಬೆಂಬಲದಿಂದ ಪಕ್ಷ ಹಾಗೂ ಪ್ರಚಾರಕ್ಕೆ ದೊಡ್ಡ ಶಕ್ತಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ನಟ ಸುದೀಪ್ ಬೆಂಬಲದಿಂದ ಪಕ್ಷ ಹಾಗೂ ಪ್ರಚಾರಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ನಗರದ ಖಾಸಗಿ ಹೋಟೇಲ್ ನಲ್ಲಿ ನಟ ಸುದೀಪ್ ಅವರೊಂದಿಗೆ ಕರೆಯಲಾಗಿದ್ದ  ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಚಿತ್ರನಟ ಸುದೀಪ್ ಅವರ ಬೆಂಬಲಕ್ಕೆ ಅಭಿನಂದನೆ ಹಾಗೂ ಧನ್ಯವಾದಗಳನ್ನು ಸಲ್ಲಿಸಿದ ಮುಖ್ಯಮಂತ್ರಿಗಳು,  ಅವರ ನಿರ್ಣಯವನ್ನು ಹೃದಯಪೂರ್ವಕವಾಗಿ ಸ್ವಾಗತಿಸುವುದಾಗಿ ಹೇಳಿದರು.  ಸುದೀಪ್ ಅವರು ಜನಪ್ರಿಯ ನಟರಾಗಿರುವುದರಿಂದ ಅವರ ಪ್ರಚಾರವನ್ನು ಸೂಕ್ತವಾಗಿ ಆಯೋಜಿಸಲಾಗುವುದು. ಅವರ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು.  ಸುದೀಪ್ ಅವರಿಗೆ ದೇಶದ ಹಾಗೂ ಕರ್ನಾಟಕದ ಬಗ್ಗೆ ಅವರದ್ದೇ ಆದ ವಿಚಾರಧಾರೆಗಳಿವೆ. ಅವುಗಳನ್ನು ಮುಂದೆ ಪ್ರಚಾರದಲ್ಲಿ ತಿಳಿಸುತ್ತಾರೆ.  ನಮ್ಮ ವೈಯಕ್ತಿಕ ಸಂಬಂಧದಿಂದ   ನಿರ್ಣಯ ತೆಗೆದುಕೊಂಡಿದ್ದಾರೆ. ನಾನು ಸೂಚಿಸುವಲ್ಲಿ ಪ್ರಚಾರ ಮಾಡುತ್ತಾರೆ. ಬಿಜೆಪಿ ಪರವಾಗಿಯೂ ಅವರು ಪ್ರಚಾರ ಮಾಡುವುದರಿಂದ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ ಎಂದ ಅವರು ಅವರ ತಂದೆತಾಯಿಗಳಿಗೂ ಕೃತಜ್ಞತೆಗಳನ್ನು ತಿಳಿಸಿದರು. ಅವರ ಸಮಯ, ಗೌರವವನ್ನು ಗಮನದಲ್ಲಿಟ್ಟುಕೊಂಡು  ಸುದೀಪ್ ಅವರು ಪ್ರಚಾರಕ್ಕೆ ನಿಂತಿರುವುದು ಕರ್ನಾಟಕದಲ್ಲಿ ವಿದ್ಯುತ್ ಸಂಚಲನವಾದಂತಾಗಿದೆ. ವಿಶೇಷವಾಗಿ ಯುವಕರು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸುತ್ತಿದ್ದಾರೆ. ಅವರ ಬೆಂಬಲವನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು ಎಂದರು. 

ಪತ್ರಿಕಾಗೋಷ್ಠಿ ಯಲ್ಲಿ ಸಚಿವರಾದ ಆರ್. ಅಶೋಕ್, ಡಾ. ಸುಧಾಕರ್, ಮುನಿರತ್ನ ಹಾಜರಿದ್ದರು. 

https://pragati.taskdun.com/kichcha-sudeepreactioncm-basavaraj-bommaividhanasabha-election/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button