Kannada NewsKarnataka NewsLatestPolitics

*ಲೋಕಸಭೆ ಚುನಾವಣೆ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರ ಧೂಳಿಪಟ: ಬಿ.ವೈ. ವಿಜಯೇಂದ್ರ ಭವಿಷ್ಯ*

ದೇಶದಲ್ಲಿ ಮೋದಿ ಆಡಳಿತ ಪರ ಅಲೆ ಇದೆ: ಬಿ.ವೈ ವಿಜಯೇಂದ್ರ

ಪ್ರಗತಿವಾಹಿನಿ ಸುದ್ದಿ: ಲೋಕಸಭೆ ಚುನಾವಣೆ ನಂತರ ರಾಜ್ಯದ ಕಾಂಗ್ರೆಸ್ ಸರಕಾರ ಧೂಳಿಪಟವಾಗುತ್ತದೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.


ಹಾವೇರಿಯಲ್ಲಿಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಏರ್ಪಡಿಸಿದ್ದ ಬೃಹತ್ ರೋಡ್ ಶೋ ಹಾಗೂ ಯುವ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಇದು ದೇಶದ ಭವಿಷ್ಯ ರೂಪಿಸುವ ಲೋಕಸಭೆಗೆ ನಡೆಯುವ ಚುನಾವಣೆ. ಈಗ ನಡೆಯುತ್ತಿರುವ ಚಿನಾವಣೆ ಎರಡು ಪಕ್ಷ, ಎರಡು ಜಾತಿಗಳ ನಡುವೆ ನಡೆಯುತ್ತಿರುವ ಚುನಾವಣೆಯಲ್ಲ. ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆಯಾಗಿದೆ. ದೇಶಾದ್ಯಂತ ಬಿಜೆಪಿ ಪರವಾದ ಅಲೆ ಇದೆ. ರಾಜ್ಯದಲ್ಲಿಯೂ ಬಿಜೆಪಿ ಪರ ಅಲೆಯಿಂದ ಇದರಿಂದ ಸಿಎಂ ಡಿಸಿಎಂ ನಿದ್ದೆಗೆಟ್ಟಿದ್ದಾರೆ. ಲೋಕಸಭೆ ಚುನಾವಣೆಯ ನಂತರ‌ ರಾಜ್ಯ ಕಾಂಗ್ರೆಸ್ ಸರ್ಕಾರ ಧೂಳಿಪಟವಾಗಲಿದೆ ಎಂದು ಹೇಳಿದರು.


2014 ರ ಮುಂಚೆ ಯುಪಿಎ ಸರ್ಕಾರದ ಅವಧಿಯಲ್ಲಿ ಈ ದೇಶದ ಜನರು ಈ ದೇಶಕ್ಕೆ ಭವಿಷ್ಯ ಇಲ್ಲ ಎಂದು ಆಶಾಭಾವನೆ ಕಳೆದುಕೊಂಡಿದ್ದರು. ಆದರೆ, 2014 ರಲ್ಲಿ ಮೋದಿಯವರು ಬಂದ ನಂತರ ಭಾರತಕ್ಕೂ ಭವಿಷ್ಯ ಇದೆ. ಈ ದೇಶವನ್ನು ಭ್ರಷ್ಟಾಚಾರ ಮುಕ್ತವಾಗಿ ಅಭಿವೃದ್ದಿ ಮಾಡಬಹುದು ಎಂದು ತೋರಿಸಿಕೊಟ್ಡಿದ್ದಾರೆ.‌ ಕಳೆದ ಹತ್ತು ವರ್ಷದಲ್ಲಿ ನರೇಂದ್ರ ಮೋದಿಯವರು ಭ್ತಷ್ಟಾಚಾರ ರಹಿತ ಆಡಳಿತ‌ ನೀಡಿದರು ಎಂದು ಹೇಳಿದರು.


ಮೋದಿಯವರು ಕೊವಿಡ್ ಸಂದರ್ಭದಲ್ಲಿ ದೇಶದ ಎಲ್ಲ ಬಡವರಿಗೆ ಉಚಿತ ಅಕ್ಕಿ ಕೊಡುತ್ತಿದ್ದಾರೆ. ಅದನ್ನು ರಾಜ್ಯ ಸರ್ಕಾರ ತನ್ನದು ಎಂದು ಹೇಳಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ನೀಡುತ್ತಿದೆ. ರಾಜ್ಯದ ಬಿಜೆಪಿ ಸರ್ಕಾರ ನೀಡುತ್ತಿದ್ದ ಕಿಸಾನ್ ಸಮ್ಮಾನ್ ಯೋಜನೆ ಸ್ಥಗಿತಗೊಳಿಸಿದ್ದಾರೆ. ಬಸವರಾಜ ಬೊಮ್ಮಾಯಿ ಜಾರಿಗೊಳಿಸಿದ್ದ ವಿದ್ಯಾನಿಧಿ ಯೋಜನೆ ಸ್ಥಗಿತಗೊಳಿಸಿದ್ದಾರೆ.
ವಿದ್ಯುತ್ ಬಿಲ್ ಪ್ರತಿ ಯುನಿಟ್ ಗೆ 5 ರೂ. ದಿಂದ 8 ರೂ ಗೆ ಹೆಚ್ಚಳ ಮಾಡಿದ್ದಾರೆ. ಮದ್ಯದ ಬೆಲೆ ಹೆಚ್ಚಳ ಮಾಡಿದ್ದಾರೆ.


ರಾಜ್ಯದಲ್ಲಿ ಭೀಕರ ಬರ ಬಂದರೂ ರೈತರಿಗೆ ಪರಿಹಾರ ನೀಡದೇ‌ ಕೇಂದ್ರ ಸರ್ಕಾರದ ಕಡೆಗೆ ಬೆರಳು ಮಾಡುತ್ತಾರೆ. ಇಡಿ ದೇಶದಲ್ಲಿ ಎಂಟು ರಾಜ್ಯಗಳಲ್ಲಿ ಬರ ಇದೆ. ಯಾವ ಸಿಎಂಗಳೂ ಕೇಂದ್ರದ ಮೇಲೆ ಆರೋಪ ಮಾಡದೇ ತಮ್ಮ ಖಜಾನೆಯಿಂದ ಪರಿಹಾರ ನೀಡುತ್ತಿದ್ದಾರೆ. ಸಿದ್ತರಾಮಯ್ಯ ಮಾತ್ರ ಹಣ ಕೊಡದೆ ರೈತರಿಗೆ ಮೋಸ ಮಾಡುತ್ತಿದ್ದಾರೆ. ಯಡಿಯುರಪ್ಪ ಸಿಎಂ ಆಗಿದ್ದಾಗ ಪ್ರವಾಹ ಬಂದಾಗ ಒಬ್ಬರೇ ಏಕಾಂಗಿಯಾಗಿ ಪ್ರವಾಹ ಪರಿಹಾರ ನೀಡಿದರು. ಆಗ ಯಡಿಯೂರಪ್ಪ ದೀಪಾವಳಿ ಮಾಡದೇ ಸಂತ್ರಸ್ತರ ಜೊತೆ ಹೋಗಿ ದೀಪಾವಳಿ ಆಚರಿಸಿದರು. ಅದು ಮಾತೃ ಹೃದಯಿ ನಾಯಕನಿಗೆ ಮಾತ್ರ ಸಾಧ್ಯ ಎಂದು ಹೇಳಿದರು.


ಬೆಳಗಾವಿಯಲ್ಲಿ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿದಾಗ ಸಿಎಂ ಸಿದ್ದರಾಮಯ್ಯ ಅಲ್ಲಿಯೇ ಇದ್ದರೂ ಅವರಿಗೆ ಸಾತ್ವನ ಹೇಳಲು ಸಿಎಂ ಹೋಗಲಿಲ್ಲ. ನಾನು ಹೊಗಿ ಆ ತಾಯಿಗೆ ಸಾಂತ್ವನ ಹೇಳಿದೆ. ಸಿದ್ದರಾಮಯ್ಯ ದಲಿತ ವಿರೊದಿ, ಮಹಿಳಾ ವಿರೋದಿ ಯುವಕರ ವಿರೋಧಿಯಾಗಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ 18 ಸ್ಥಾನ ಗೆಲ್ಲುತ್ತದೆ ಎಂದು ಹೇಳುತ್ತಾರೆ. ಹಾಗಾದರೆ ಅದು ಎಂಟನೆ ಅದ್ಬುತವಾಗಲಿದೆ ಎಂದು ಹೇಳಿದ್ದೇನೆ ಎಂದರು.


ಆಡಳಿತ ಪರ ಅಲೆ
ನರೇಂದ್ರ ಮೋದಿಯವರು ಹತ್ತು ವರ್ಷ ಅಧಿಕಾರ ನಡೆಸಿದರೂ ಆಡಳಿತ ವಿರೋಧಿ ಅಲೆ ಇಲ್ಲ. ಆಡಳಿತ ಪರ ಅಲೆ ಇದೆ. ಮೋದಿಯವರು ಹತ್ತು ವರ್ಷದಲ್ಲಿ ಒಂದು ದಿನವೂ ವಿಶ್ರಾಂತಿ ತೆಗೆದುಕೊಳ್ಳದೆ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ತಾಯಿ ನಿಧನ ಆದಾಗ ಎರಡು ಗಂಟೆಯಲ್ಲಿ ಅಂತ್ಯ ಸಂಸ್ಕಾರ ಮುಗಿಸಿ ಮತ್ತೆ ದೆಹಲಿಗೆ ತೆರಳಿ ಕರ್ತವ್ಯಕ್ಕೆ ಹಾಜರಾಗುತ್ತಾರೆ.


ರಾಮಂದಿರ ನಿರ್ಮಾಣ, ಆರ್ಟಿಕಲ್ 370 ರದ್ದು ಮಾಡಿ ಕಾಶ್ಮೀರದಲ್ಲಿ ಶಾಂತಿ ನೆಲೆಸುವ ಕೆಲಸ ಮಾಡಿದ್ದಾರೆ. ಮೊದಿಯವರು ಕೇವಲ ಭಾರತದ ಪ್ರಧಾನ ಮಂತ್ರಿ ಅಲ್ಲ, ವಿಶ್ವದ ನಾಯಕರಾಗಿದ್ದಾರೆ ಎಂದರು.

ಹಿಂದೆ ಮನಮೊಹನ್ ಸಿಂಗ್ ಅಮೇರಿಕೆಗೆ ಹೋದಾಗ ಯಾರೂ ಅವರನ್ನು ಸ್ವಾಗತಿಸಲು ಇರುತ್ತಿರಲಿಲ್ಲ. ಈಗ ಮೋದಿಯವರು ಯಾವುದೇ ದೇಶಕ್ಕೆ ಹೋದರೂ ಅಲ್ಲಿನ ಅಧ್ಯಕ್ಷರು ಮೋದಿಯವರನ್ನು ಸ್ವಾಗತ ಮಾಡುತ್ತಾರೆ ಎಂದರು.

ಮೂರು ಲಕ್ಷ ಅಂತರದ ಗೆಲುವು
ಈ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳ ಕಾರ್ಯಕರ್ತರ ಜವಾಬ್ದಾರಿ ಹೆಚ್ಚಳವಾಗಿದೆ. ಬಸವರಾಜ ಬೊಮ್ಮಾಯಿಯವರು ಸುಮಾರು ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲುವುದು ಶತ ಸಿದ್ದ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ 28 ಸ್ಥಾನ ಗೆಲ್ಲಬೇಕು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುವವರೆಗೂ ನಾನು ವಿರಮಿಸುವುದಿಲ್ಲ ಎಂದು ವಿಜಯೇಂದ್ರ ಹೇಳಿದರು.


ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಬಿ.ಸಿ ಪಾಟೀಲ್, ಮನೋಹರ್ ತಹಸೀಲ್ದಾರ್, ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಧೀರಜ್ ಮುನಿರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಅರುಣ್‌ಕುಮಾರ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.
ಇದಕ್ಕೂ ಮೊದಲು ಸುಮಾರು ಎರಡು ಕಿಲೋ ಮೀಟರ್ ಗುದ್ಲೆಪ್ಪ ಹಳ್ಳಿಕೇರಿ ಸರ್ಕಲ್ ನಿಂದ್ ಸಿ.ಬಿ. ಕೊಳ್ಳಿ ಪಾಲಿಟೆಕ್ನಿಕ್ ವರೆಗೆ ಬೃಹತ್ ರೋಡ್ ಶೋ ನಡೆಸಲಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button