Belagavi NewsBelgaum NewsKannada NewsKarnataka NewsNationalPolitics

*ಸ್ನೇಹ ಪವಿತ್ರತೆಯ ಸೂಚಕ ರಾಖಿ*

ವಿಶ್ವಾಸ ಸೊಹೋನಿ

ಹಬ್ಬಗಳ ತವರೂರಾದ ಭಾರತ ದೇಶದಲ್ಲಿ ಹಬ್ಬ ಹರಿದಿನಗಳಿಂದ ಕೂಡಿದ ಶ್ರಾವಣ ಮಾಸಕ್ಕೆ ವಿಶೇಷ ಮಹತ್ವ ಇದೆ. ಶ್ರವಣ, ಪೂಜಾ-ಪಾಠಗಳು, ಧ್ಯಾನ-ಧಾರಣೆಗಳು, ಚಿಂತನೆಗಳ ಮಾಸವೇ ಶ್ರಾವಣ. ನಾಗಚೌತಿ, ನಾಗಪಂಚಮಿ, ಶ್ರಾವಣ ಸೋಮವಾರ, ಶ್ರಾವಣ ಶುಕ್ರವಾರ, ಗೋಕುಲಾಷ್ಟಮಿ, ನೂಲಹುಣ್ಣಿಮೆ, ಹೀಗೆ ಪ್ರತಿದಿನವು ಹಬ್ಬ.  ಈ ಎಲ್ಲ ಹಬ್ಬಗಳಲ್ಲಿ “ನೂಲಹುಣ್ಣಿಮೆ” ಅಥವಾ `ರಕ್ಷಾಬಂಧನ’ ಒಂದು ಪ್ರಮುಖ ಹಬ್ಬ.

ರಕ್ಷಾ ಬಂಧನ ಭಾರತದ ಸಂಸ್ಕಂತಿ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸುವ, ಅನೇಕ ಆಧ್ಯಾತ್ಮಿಕ ರಹಸ್ಯಗಳನ್ನು ಬೆಳಗಿಸುವ ಮತ್ತು ಸಾರ್ವತ್ರಿಕ ಸಹೋದರ-ಸಹೋದರಿ ಸಂಬಂಧವನ್ನು ನಮಗೆ ನೆನಪಿಸುವ ಕೊಡುಗೆಯಾಗಿದೆ. ರಾಖಿ ಕಟ್ಟುವ ಮೊದಲು, ಸಹೋದರಿಯು ಅಣ್ಣನ ಹಣೆಯ ಮೇಲೆ ಶ್ರೀಗಂಧದ ತಿಲಕವನ್ನು ಇಡುತ್ತಾಳೆ. ಇದು ಶುದ್ಧ, ಶೀತಲ ಮತ್ತು ಪರಿಮಳಯುಕ್ತ ಜೀವನವನ್ನು ನಡೆಸಲು ಪ್ರೇರೇಪಿಸುತ್ತದೆ. ಬಲಗೈಯಿಂದ ತಿಲಕ ಮತ್ತು ರಾಖಿಯನ್ನೂ ಕಟ್ಟಲಾಗುತ್ತದೆ. ಈ ವಿಧಾನವು ಯಾವಾಗಲೂ ಸರಿ(ರೈಟ್) ಯಾಗಿ ಯೋಚಿಸಲು ಮತ್ತು ಸರಿ(ರೈಡ್) ಯಾಗಿ ಮಾಡಲು, ಅಂದರೆ ಉತ್ತಮ ಕಾರ್ಯಗಳನ್ನು ಮಾಡಲು ಪ್ರೇರಣೆ ನೀಡುತ್ತದೆ. ಋಣಾತ್ಮಕ ಪರಿಣಾಮಗಳಿಂದ ವ್ಯಕ್ತಿಯು ದು:ಖ ಮತ್ತು ಸಂಕಟಗಳಿಂದ ಸುರಕ್ಷಿತವಾಗಿರುತ್ತಾನೆ. ರಾಖಿಯು ಕಟ್ಟಿದ ನಂತರ ಸಿಹಿಯನ್ನು ನೀಡಲಾಗುತ್ತದೆ, ಇದರ ಹಿಂದೆ ಪರಸ್ಪರ ಸಂಬಂಧಗಳನ್ನು ಮಧುರಗೊಳಿಸುವ ರಹಸ್ಯ ಅಡಗಿದೆ. 

ಭಾರತಿಯರು ನಾವು ವಿದೇಶಿಯರ ಅನುಕರಣೆಯಿಂದ ನಮ್ಮ ನಿಜವಾದ ಸಂಸ್ಸಂತಿಯನ್ನು ಮರೆತು ಸ್ನೇಹ ಆತ್ಮೀಯತೆಯಿಂದ ದೂರ ಹೋಗುತ್ತಿದ್ದೇವೆ.

ಕಾಮುಕ ವೃತ್ತಿಯಿಂದ ಅನೇಕ ನಾರಿಯರು ಇವತ್ತು ಅತ್ಯಾಚಾರ ಅನ್ಯಾಯಕ್ಕೆ ಬಲಿ ಆಗುತ್ತಿದ್ದಾರೆ. ಆಧುನಿಕತೆಯ ವೇಷದಲ್ಲಿ ಸಮಾಜವು ಅಧೋಗತಿಗೆ ಹೋಗುತ್ತಿದೆ. ಪವಿತ್ರತೆಯ ಆಧಾರದಿಂದ ಈ ಪರಿಸ್ಥಿತಿಯನ್ನು ಬದಲಾಯಿಸಬಹುದು. ಪುರುಷರು ನಾರಿಯರನ್ನು ನೋಡುವ ದೃಷ್ಟಿಯು ಪರಿವರ್ತನೆ ಆಗಬೇಕು. ಅವರನ್ನು ಸಬಲೆಯ ರೂಪದಲ್ಲಿ, ದೇವಿಯ ರೂಪಗಳಾದ ಶಕ್ತಿ, ಮಹಾಕಾಳಿ, ದುರ್ಗಾ ಮುಂತಾದ ರೂಪಗಳಲ್ಲಿ ಕಾಣಬೇಕು.`ಯತ್ರ ನಾರಿಸ್ಯ ಪೂಜ್ಯಂತೆ ರಮಂತೆ ತತ್ರ ದೇವತ:’ ಎಂದು ಹೇಳಿಕೆಯನ್ನು ಸಾಕಾರ ಗೊಳಿಸಬೇಕು. 

ರಕ್ಷಾಬಂಧನ ಹಬ್ಬವು ಪ್ರಾಚೀನ ಕಾಲದಿಂದ ನಡೆದು ಬಂದ ಹಬ್ಬವಾಗಿದ್ದು ವಿಶ್ವಕ್ಕೆ ಸ್ನೇಹ ಮತ್ತು ಮಮತೆಯ ಸಂದೇಶ ನೀಡುತ್ತದೆ. 4-5 ನಿಮಿಷಗಳಲ್ಲಿ ಮುಗಿಯುವ ರಾಖಿ ಕಟ್ಟುವ ಈ ಕಾರ್ಯಕ್ರಮ ಸೋದರ-ಸೋದರಿಯ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಈ ಮಧುರ ಸಂಬಂಧ ಉಸಿರು ಇರುವವರೆಗೂ ಇರುತ್ತದೆ. ಕಟ್ಟಿರುವ ದಾರ ಹೋದರೂ ಹೃದಯದಲ್ಲಿ ಇರುವ ಸ್ನೇಹ ದೃಢವಾಗಿರುತ್ತದೆ.

ಸಂಕಟದ  ಸಮಯದಲ್ಲಿ ಮಾನವರೆಲ್ಲರೂ ನಾನಾ ಪ್ರಕಾರದ ರಕ್ಷಣೆಯನ್ನು ಬಯಸುತ್ತಾರೆ. 1)ತನುವಿನ ರಕ್ಷಣೆ, 2)ಮನಸ್ಸಿನ ರಕ್ಷಣೆ, 3)ಧನದ ರಕ್ಷಣೆ, 4)ಧರ್ಮ ಪವಿತ್ರತೆಯ ಅಥವಾ ಸತೀತ್ವದ ರಕ್ಷಣೆ, 5) ಆಪತ್ತುಗಳು ಹಾಗೂ ಸಂಕಟಗಳಿಂದ ರಕ್ಷಣೆ, 6)ಕಾಲ ಅಥವಾ ಮೃತ್ಯವಿನ ಪಾಶದಿಂದ ರಕ್ಷಣೆ – ಇವು ಮುಖ್ಯವಾದವು. ಮೃತ್ಯುವು ಸನ್ನಿಹಿತವಾದಾಗ ನಿಗದಿಯಾಗಿರುವ ಮೃತ್ಯುವಿನಿಂದ  ರಕ್ಷಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಮನಸ್ಸಿನ ರಕ್ಷಣೆಯನ್ನು ಮಾಯೆಯ ಬಂಧನಗಳಿಂದ ಅಥವಾ ತಾಮಸಿಕ ವಿಕಾರಗಳಿಂದ ಮುಕ್ತನಾಗಲು ಭಗವಂತನಿಗೆ ಶರಣು ಹೋಗಬೇಕಾಗುತ್ತದೆ.  ಆದ್ದರಿಂದಲೇ ವಿಷಯ ವಿಕಾರಗಳನ್ನು ನಾಶಮಾಡು, ಪಾಪವನ್ನು ಹರಿಸು ಎಂದು ಪತಿತಪಾವನ, ಪಾಪಕಟೇಶ್ವರನಾದ ಪರಮಾತ್ಮನಿಗೆ ಪ್ರಾರ್ಥನೆ ಮಾಡುತ್ತಾರೆ. 

ಧರ್ಮದ, ಪವಿತ್ರತೆಯ ಹಾಗೂ ಸತೀತ್ವದ ರಕ್ಷಣೆಯನ್ನು ಸರ್ವಸಮರ್ಥನಾದ ಭಗವಂತ ಒಬ್ಬನೇ ಮಾಡಲು ಸಾಧ್ಯವಿದೆ. ಇದಕ್ಕೆ ದ್ರೌಪದಿಯ ದೃಷ್ಟಾಂತವಿದೆ. ಕಾಲ ಅಥವಾ ಯಮನ ಪಾಶದಿಂದ ಪಾರು ಮಾಡುವವನು, ಕಾಲರಕಾಲ ಮಹಾಕಾಲ ಮಹಾಕಾಳೇಶ್ವರನೇ ಆಗಿದ್ದಾನೆ. ಯಾರನ್ನು ಈಶ್ವರನು ರಕ್ಷಣೆ ಮಾಡುತ್ತಾನೋ ಅವರಿಗೆ ಇಡೀ ಪ್ರಪಂಚವೇ ವೈರಿಯಾದರೂ ಅವರ ಕೂದಲನ್ನೂ ಕೊಂಕಿಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ಭಕ್ತ ಮಾರ್ಕಂಡೇಯನ ದೃಷ್ಟಾಂತವಿದೆ.  ಸಾಂಸಾರಿಕ ಆಪತ್ತುಗಳು ಆಥವಾ ಲೌಕಿಕ ಸಂಕಟಗಳಿಂದಲೂ ರಕ್ಷಣೆಯನ್ನು ಈಶ್ವರನ ಹೊರತು ಪಡಿಸಿ ಬೇರೆ ಯಾರೂ ಮಾಡಲು ಸಾಧ್ಯವಿಲ್ಲ. ಅದ್ದರಿಂದಲೇ ಅವನಿಗೆ ದುಃಖಹರ, ಸುಖಕರ, ವಿಘ್ನವಿನಾಶಕ ಎಂದು ಕರೆಯುತ್ತಾರೆ. 

ಸಕಲಜೀವರಾಶಿಗಳಿಗೆ ಲೇಸನ್ನು ಬಯಸುವ, ಸಬಕಾ ಮಾಲಿಕ್ ಏಕ್ ಆಗಿರುವ, ಸರ್ವರ ರಕ್ಷಕ ಭಗವಂತನ ಜೊತೆಗೆ ಸಂಬಂಧದ ಬಂಧನವೇ ರಕ್ಷಾಬಂಧನ. ಅವನನ್ನು ತಿಳಿದು, ಅವನನ್ನೇ ನೆನೆಯುತ್ತಾ, ನಾವೆಲ್ಲರೂ ಅವನ ಮಕ್ಕಳು ಎಂದು ನಡೆದಾಗ `ವಸುಧೈವ ಕುಟುಂಬಕಂ’ ಆಗುವುದು. ನಾವೆಲ್ಲರೂ ಭಗವಂತನ ಮಕ್ಕಳು ಸಹೋದರ ಸಹೋದರಿಯರು. ನಮ್ಮ ಪವಿತ್ರ ಸ್ನೇಹದ ಸೂಚಕವೇ ರಾಖಿ. 

  ಮಸ್ತಕದಲ್ಲಿ ಇಡುವ ತಿಲಕ ಆತ್ಮಜ್ಯೋತಿಯ ಪ್ರತೀಕ, ಬಾಯಿ ಸಿಹಿ ಮಾಡುವುದೆಂದರೆ ಮಧುರವಾದ ನುಡಿಗಳನ್ನು ನುಡಿಯುವುದು, ರಾಖಿಯಲ್ಲಿ ಇರುವ ದಾರವು ನಿಯಮ ಹಾಗು ಸಂಯಮದ ಸೂಚಕ, ದುರ್ಗುಣ, ದುಶ್ಚಟಗಳನ್ನು ಬಿಡುವುದು ಕಾಣಿಕೆಯ ಅರ್ಥವಾಗಿದೆ. ಹಾಗಾದರೆ ಬನ್ನಿ ನಾವೆಲ್ಲರೂ ಶ್ರೀರಕ್ಷೆಯಲ್ಲಿ ಬಂಧಿತರಾಗಿ ಇತರ ಅನೇಕ ಬಂಧನಗಳನ್ನು ಸ್ನೇಹದ ಸಂಬಂಧದಲ್ಲಿ ಪರಿವರ್ತಿತಿಸಿ, ಜಾತಿ, ಮತ, ಭಾಷೆ. ಭೇದಗಳನ್ನು ಮರೆತು ಸಹೋದರತ್ವದ ಭಾವನೆಯಿಂದ ಜೀವನದಲ್ಲಿ ಸುಖ-ಶಾಂತಿಯನ್ನು ಪಡೆಯೋಣ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button