
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಎಥನಾಲ್ ಪರಿಸರ ಸ್ನೇಹಿ ಇಂಧನವಾಗಿದ್ದು, ಕಾರ್ಬನ್ ಡೈಆಕ್ಸೈಡ್ ಉತ್ಪತ್ತಿ ಕಡಿಮೆಯಾಗುವ ಕಾರಣ ರಾಜ್ಯ ಸರ್ಕಾರವು ಹಸಿರು ಇಂಧನವನ್ನು ಉತ್ತೇಜಿಸಲು ಯೋಜನೆಗಳನ್ನು ರೂಪಿಸುತ್ತಿದೆ. ಕೇಂದ್ರ ಸರ್ಕಾರ ಹಸಿರು ಇಂಧನ ಬಳಕೆಯನ್ನು ಕಡ್ಡಾಯಗೊಳಿಸುವ ಗುರಿ ಹೊಂದಿದ್ದು, ರಾಜ್ಯದಲ್ಲಿ ಸಹ ಹಂತ ಹಂತವಾಗಿ ಉತ್ಪಾದನೆ ಪ್ರಾರಂಭವಾಗಿದೆ ಎಂದು ಕೃಷಿ ಮಾರುಕಟ್ಟೆ ಮತ್ತು ಎಸ್ .ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಅಧ್ಯಕ್ಷರು ಹಾಗೂ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಮತ್ತು ಜವಳಿ ಸಚಿವ ಶಿವಾನಂದ ಪಾಟೀಲ ಅವರು ತಿಳಿಸಿದರು.
ದಕ್ಷಿಣ ಭಾರತೀಯ ಕಬ್ಬು ಮತ್ತು ಸಕ್ಕರೆ ತಂತ್ರಜ್ಞರ ಸಂಘ ಮತ್ತು ಎಸ್ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಸಹಯೋಗದಲ್ಲಿ ಲಕ್ಷ್ಮೀ ಟೇಕ್, ಗಣೇಶಪೂರ ರಸ್ತೆ ಪಕ್ಕದ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ (ಏ.5) ನಡೆದ ಜಂಟಿ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಬ್ಬು ಬೆಳೆಯು ಭಾರತದಲ್ಲಿ ಪ್ರಮುಖ ಕೃಷಿ ಉತ್ಪನ್ನವಾಗಿದ್ದು, ಇದರಿಂದ ಸಕ್ಕರೆ ಮತ್ತು ಎಥನಾಲ್ ಉತ್ಪಾದನೆ ನಡೆಯುತ್ತದೆ. ದೇಶಕ್ಕೆ ನೂತನ ತಂತ್ರಜ್ಞಾನ ಬಳಕೆ ಮೂಲಕ ಹೊಸ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಎಂ.ಎಸ್.ಸಿ ಕೋರ್ಸ್ ಈಗ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಈಗಾಗಲೇ ಪ್ರಾರಂಭಿಸಲಾಗಿದೆ ಎಂದರು.
ಸಕ್ಕರೆ ಉದ್ಯಮ ಮತ್ತು ಕೋ-ಆಪ್ ರೇಟಿವ್ ಸಂಸ್ಥೆಗಳು ಒಟ್ಟಾಗಿ ರೈತರ ಆರ್ಥಿಕ ಸ್ವಾವಲಂಬನೆಗೆ ಹಾಗೂ ಗ್ರಾಮೀಣ ಸಮೃದ್ಧಿಗೆ ಶ್ರಮಿಸಬೇಕಿದೆ. ಇಂತಹ ಅಭಿವೃದ್ಧಿಯಿಂದ ರಾಜ್ಯದ ಕೃಷಿ ಆಧಾರಿತ ಆರ್ಥಿಕತೆ ಬೆಳೆದು ನಿಲ್ಲುತ್ತದೆ.
ತಂತ್ರಜ್ಞಾನ ಅಳವಡಿಕೆಯ ಮೂಲಕ ಸಕ್ಕರೆ ಉದ್ಯಮದಲ್ಲಿ ಪರಿಸರಪಾಲನೆ ಹಾಗೂ ರೈತರ ಆದಾಯ ಹೆಚ್ಚಳ ಸಾಧ್ಯವಾಗುತ್ತದೆ. ಈ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಗೂ ಸಹಾಯಕವಾಗುತ್ತದೆ ಎಂದು ಹೇಳಿದರು.
ಇತರೆ ಬೆಳೆಗಳು ಹಾಗೂ ಚಿನ್ನದ ಬೆಲೆಯ ನಿರಂತರ ವ್ಯತ್ಯಾಸದಂತೆಯೇ ಕಬ್ಬಿನ ಬೆಲೆ ಸಹ ಸ್ಥಿರವಾಗಿಲ್ಲ. ರೈತರಿಗೆ ಬಾಕಿ ಹಣ ವಿತರಣೆಯಲ್ಲಿ ವಿಳಂಬ. ಹವಾಮಾನ ವೈಪರಿತ್ಯದಿಂದ ಕೃಷಿಗೆ ಬರುವ ಪರಿಣಾಮ ಸೇರಿದಂತೆ ಇಂತಹ ಎಲ್ಲಾ ಸಮಸ್ಯೆಗಳನ್ನು ಎದುರಿಸಿ ಸಕ್ಕರೆ ಕಾರ್ಖಾನೆಗಳು, ರೈತರು ಮತ್ತು ಕಾರ್ಮಿಕರು ತಮ್ಮ ಜೀವನೋಪಾಯ ಉಳಿಸಿಕೊಳ್ಳಲು ಹೋರಾಡಬೇಕಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ತಿಳಿಸಿದರು.
ಕಬ್ಬು ಅಭಿವೃದ್ಧಿ ಆಯುಕ್ತರು ಮತ್ತು ಸಕ್ಕರೆ ಸಂಸ್ಥೆ ನಿರ್ದೇಶಕ ಆರ್. ರವಿಕುಮಾರ, TruAlt Bioenergy ಹಾಗೂ MRN ಗ್ರೂಪ್ ನಿರ್ದೇಶಕರಾದ ವಾಯ್.ಬಿ.ರಾಮಕೃಷ್ಣ, ದಕ್ಷಿಣ ಭಾರತೀಯ ಕಬ್ಬು ಮತ್ತು ಸಕ್ಕರೆ ತಂತ್ರಜ್ಞರ ಸಂಘದ ಅಧ್ಯಕ್ಷರಾದ ಚಿನ್ನಪ್ಪನ್, ಬೀಳಗಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಎಸ್.ಆರ್.ಪಾಟೀಲ, ರಾಷ್ಟ್ರೀಯ ಸಕ್ಕರೆ ಸಂಸ್ಥೆ ನಿರ್ದೇಶಕರಾದ ಸೀಮಾ ಪರೋಹ, ಭಾರತೀಯ ಸಕ್ಕರೆ ಅಧ್ಯಕ್ಷ ವಿಕ್ರಮಸಿಂಗ ಶಿಂಧೆ, ದಕ್ಷಿಣ ಭಾರತೀಯ ಕಬ್ಬು ಮತ್ತು ಸಕ್ಕರೆ ತಂತ್ರಜ್ಞರ ಸಂಘದ ಉಪಾಧ್ಯಕ್ಷ ಮತ್ತು ಸಂಚಾಲಕರು ಹಾಗೂ TruAlt Bioenergy ಹಾಗೂ MRN ಗ್ರೂಪ್ ನಿರ್ದೇಶಕರಾದ ಜೆ.ಡಿ ಆನಂದ್ ಮುರ್ಗನ್ ಸೇರಿದಂತೆ ವಿವಿಧ ಸಂಸ್ಥೆಯ ನಿರ್ದೇಶಕರು, ಪ್ರತಿನಿಧಿಗಳು ಉಪಸ್ಥಿತರಿದ್ದರು.