*ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಹಾಗೂ ಭ್ರಷ್ಟಾಚಾರ ತಡೆಗಾಗಿ ಮಾಹಿತಿ ಹಕ್ಕು ಕಾಯ್ದೆ ಜಾರಿ: ಎಸ್.ಎಲ್. ಪಾಟೀಲ*

*ಪ್ರಗತಿವಾಹಿನಿ ಸುದ್ದಿ, ಬೆಳಗಾವಿ* : ಸರಕಾರಿ ಕಚೇರಿಗಳಲ್ಲಿ ಹಾಗೂ ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಹಾಗೂ ಭ್ರಷ್ಟಾಚರ ತಡೆಗಾಗಿ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಲಾಗಿದೆ ಎಂದು ರಾಜ್ಯ ಮಾಹಿತಿ ಆಯೋಗದ ನಿವೃತ್ತ ಆಯುಕ್ತರಾದ ಎಸ್.ಎಲ್.ಪಾಟೀಲ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ (ಏ.29) ಏರ್ಪಡಿಸಲಾಗಿದ್ದ ಜಿಲ್ಲೆಯ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಅಧಿನಿಯಮ ಅನುಷ್ಠಾನ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳುವ ಹಕ್ಕು ದೇಶದ ಎಲ್ಲ ನಾಗರಿಕರಿಗೆ ಇರುತ್ತದೆ. ಇಲಾಖೆಗಳು ತಮ್ಮ ಇಲಾಖೆಯ ಎಲ್ಲಾ ಮಾಹಿತಿಯನ್ನು ವೆಬ್ ಸೈಟಿನಲ್ಲಿ ದಾಖಲಿಸಬೇಕು ಇದರಿಂದಾಗಿ ಮಾಹಿತಿ ಕೋರಿ ಬಂದಂತಹ ಅರ್ಜಿಗಳಿಗೆ ತ್ವರಿತವಾಗಿ ಮಾಹಿತಿ ಒದಗಿಸಬಹುದಾಗಿದೆ ಎಂದರು.
ಮಾಹಿತಿ ಕೋರಿ ಬಂದಂತಹ ಅರ್ಜಿಗಳಿಗೆ ಕಾಲಮಿತಿಯೊಳಗಾಗಿ ಮಾಹಿತಿಯನ್ನು ಅರ್ಜಿದಾರರಿಗೆ ಸಲ್ಲಿಸಬೇಕು. ಒಂದು ವೇಳೆ ಅರ್ಜಿದಾರರು ಕೇಳಿರುವ ಮಾಹಿತಿ ತಮ್ಮಲ್ಲಿ ಇರದೇ ಇದ್ದಲ್ಲಿ ಅಂತಹ ಅರ್ಜಿಗಳನ್ನು ಕೂಡಲೇ ಸಂಬಂಧಿಸಿದ ಇಲಾಖೆಗಳಿಗೆ ವರ್ಗಾಯಿಸಬೇಕು.
ಅರ್ಜಿದಾರರು ಕೇಳಿರುವ ಮಾಹಿತಿಯನ್ನು ಬೇರೆ ಬೇರೆ ಕಚೇರಿ ಅಥವಾ ಇಲಾಖೆಗಳಿಂದ ಕ್ರೋಢೀಕರಿಸಿ ಕೊಡುವಂತಿಲ್ಲ. ಪದನಾಮ, ಸಂಘ-ಸಂಸ್ಥೆಗಳು, ಖಾಸಗಿ ಕಂಪನಿಗಳ ಹೆಸರಿನಲ್ಲಿ ಕೇಳಲಾಗುವ ಮಾಹಿತಿಯನ್ನು ನೀಡುವಂತಿಲ್ಲ. ಆದರೆ ಪದನಾಮದ ಮೇಲೆ ವ್ಯಕ್ತಿಯ ಹೆಸರು ಇದ್ದರೆ ಆ ವ್ಯಕ್ತಿ(ಅರ್ಜಿದಾರ)ಗೆ ಮಾಹಿತಿ ನೀಡಬಹುದು.
ಮಾಹಿತಿ ಹಕ್ಕು ಕಾಯ್ದೆಯಡಿ ನೌಕರರ ಸೇವಾ ದಾಖಲೆ, ಆಸ್ತಿ-ಋಣಭಾರ ಮಾಹಿತಿಯನ್ನು ಹಾಗೂ ರಹಸ್ಯ ವರದಿಯನ್ನು ನೀಡಬಾರದು. ನೌಕರನ ಜಾತಿ ಪ್ರಮಾಣಪತ್ರ, ಸಾಲ, ವೇತನಪತ್ರ ಖಾಸಗಿ ಮಾಹಿತಿಯಾಗಿದ್ದು ಇವುಗಳನ್ನು ನೀಡುವಂತಿಲ್ಲ; ಆದರೆ ಟಿಎ/ಡಿಎ ಹಾಗೂ ಕೆಲಸದ ಡೈರಿಯು ಸಾರ್ವಜನಿಕ ಮಾಹಿತಿಯಾಗಿದ್ದು ಇದನ್ನು ಅರ್ಜಿದಾರರಿಗೆ ನೀಡಬಹುದು. ಮಾಹಿತಿಯು ದೈನಂದಿನ ಕೆಲಸಕ್ಕೆ ಸಂಬಂಧಿಸಿದ್ದರೆ ಅದು ಸಾರ್ವಜನಿಕರ ಹಿತಾಸಕ್ತಿ ಹೊಂದಿದ್ದರೆ ಮಾಹಿತಿಯನ್ನು ನೀಡಬಹುದು.
ಸಮಂಜಸ ಕಾರಣವಿಲ್ಲದೇ ಮಾಹಿತಿ ನೀಡದಿದ್ದರೆ ಅಥವಾ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿದ್ದರೆ ದಂಡ ಮತ್ತು ಶಿಸ್ತು ಕ್ರಮಕ್ಕೆ ಹೊಣೆಗಾರರಾಗುತ್ತರೆ. ಮಾಹಿತಿ ಅಧಿಕಾರಿಗಳು ದಂಡ ಮತ್ತು ಶಿಸ್ತುಕ್ರಮ ತಪ್ಪಿಸಿಕೊಳ್ಳಬೇಕಾದರೆ ಮಾಹಿತಿಯನ್ನು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಿರುವ ಬಗ್ಗೆ ಆಯೋಗಕ್ಕೆ ಮನವರಿಕೆ ಆಗಬೇಕು. ಕಲಂ 14 ರ ಪ್ರಕಾರ ಒಂದು ಅರ್ಜಿಯಲ್ಲಿ ಒಂದೇ ವಿಷಯದ ಮಾಹಿತಿಯನ್ನು ಕೇಳಬೇಕು. ಒಂದೇ ವಿಷಯಕ್ಕೆ ಸಂಬಂಧಿಸಿದ ಬೇರೆ ಬೇರೆ ಮಾಹಿತಿಯನ್ನು ನೀಡಬಹುದು.
ಈ ಕಾಯ್ದೆಯಡಿ ಪ್ರಶ್ನೆಗೆ ಅವಕಾಶವಿರುವುದಿಲ್ಲ, ಆದರೆ ಪ್ರಶ್ನೆಗೆ ಸಂಬಂಧಿಸಿದ ಉತ್ತರವಿದ್ದರೆ ಅದು ಕೂಡ ಮಾಹಿತಿಯಾಗುತ್ತದೆ. ಆದ್ದರಿಂದ ಕೆಲವೊಂದು ಪ್ರಶ್ನೆಗಳಿಗೆ ಮಾಹಿತಿಯನ್ನು ನೀಡಬೇಕಾಗುತ್ತದೆ. ಉದಾಹರಣೆಗೆ ಯಾವುದೋ ಒಂದು ಕಾಮಗಾರಿಗೆ ಎಷ್ಟು ಖರ್ಚಾಗಿದೆ? ಎಂಬ ಪ್ರಶ್ನೆಗೆ ಮಾಹಿತಿರೂಪದಲ್ಲಿ ಉತ್ತರ ನೀಡಬಹುದಾಗಿದೆ. ಮೇಲ್ಮನವಿ ವಿಚಾರಣೆಗೆ ಮಾಹಿತಿ ಅಧಿಕಾರಿಗಳೇ ಕಡ್ಡಾಯವಾಗಿ ಹಾಜರಾಗಬೇಕಿಲ್ಲ: ಆದರೆ ನೀವು ಕಳುಹಿಸುವ ಪ್ರತಿನಿಧಿಗೆ ಆ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಇರಲೇಬೇಕು. ಮಾಹಿತಿ ವಿಳಂಬ ಅಥವಾ ಮಾಹಿತಿ ನೀಡದಿರುವುದರಿಂದ ಅರ್ಜಿದಾರನಿಗೆ ನಷ್ಟವಾಗಿರುವುದು ಕಂಡುಬಂದರೆ ಮಾತ್ರ ಅರ್ಜಿದಾರನಿಗೆ ಪರಿಹಾರ ನೀಡಬಹುದು.
ಒಂದು ಮಾಹಿತಿ ಅರ್ಜಿಯಲ್ಲಿ 150 ಪದಗಳಿಗಿಂತ ಹೆಚ್ಚು ಶಬ್ದಗಳಿದ್ದರೆ ಮಾಹಿತಿ ನೀಡಬೇಕಿಲ್ಲ. ಇಂತಹ ಸಂದರ್ಭಗಳಲ್ಲಿ ಅರ್ಜಿದಾರನಿಗೆ ಹಿಂಬರಹ ನೀಡಬಹುದು. ಕಾಯ್ದೆ ಪ್ರಕಾರ ಅಥವಾ ಇಲಾಖೆಯ ಸುತ್ತೋಲೆಗಳ ಪ್ರಕಾರ ನಿಗದಿತ ಮಾಹಿತಿ ಇಟ್ಟುಕೊಳ್ಳುವುದು ಕಡ್ಡಾಯವಿಲ್ಲದಿದ್ದಾಗ ಮಾತ್ರ ಮಾಹಿತಿ ಲಭ್ಯವಿಲ್ಲ ಎಂದು ತಿಳಿಸಬಹುದು. ನಿಯಮಾನುಸಾರ ಕಚೇರಿಯ ದಾಖಲೆಗಳನ್ನು ಎ,ಬಿ,ಸಿ ಮತ್ತು ಡಿ ಎಂದು ಕಾಯ್ದಿರಿಸಬೇಕು.
ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳು ಆಯೋಗ ಮತ್ತು ಮಾಹಿತಿ ಅಧಿಕಾರಿಗಳ ಮಧ್ಯದ ಕೊಂಡಿಯಾಗಿದ್ದು, ತಮ್ಮ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿಭಾಯಿಸಿದರೆ ದಂಡ ಅಥವಾ ಶಿಸ್ತು ಕ್ರಮಗಳನ್ನು ತಪ್ಪಿಸಬಹುದಾಗಿದೆ ಎಂದು ರಾಜ್ಯ ಮಾಹಿತಿ ಆಯೋಗದ ನಿವೃತ್ತ ಆಯುಕ್ತರಾದ ಎಸ್.ಎಲ್.ಪಾಟೀಲ ಅವರು ತಿಳಿಸಿದರು.
ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವಾಹಕ ಅಧಿಕಾರಿ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೆರಿ, ಜಿಲ್ಲಾಪಂಚಾಯತ ಉಪಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಹೆಗನಾಯಕ, ಜಿಲ್ಲಾಪಂಚಾಯತ ಯೋಜನಾ ನಿರ್ದೇಶಕ ಗಂಗಾಧರ ದಿವಟರ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.