*ತೋಟಗಾರಿಕೆ ಇಲಾಖಾ ಕ್ಷೇತ್ರಗಳ ಭೂ-ದಾಖಲೆಗಳನ್ನು ಇಲಾಖಾ ಹೆಸರಿಗೆ ವರ್ಗಾಯಿಸಿಕೊಳ್ಳಲು ಜಿಪಂ ಸಿಇಒ ಸೂಚನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ತೋಟಗಾರಿಕೆ ಅಭಿವೃದ್ಧಿ ಏಜೆನ್ಸಿ ಯೋಜನೆಯ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆಯು ಶುಕ್ರವಾರ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ರವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯಲ್ಲಿ ಮಾತನಾಡಿದ ಜಿಪಂ ಸಿಇಒ ರಾಹುಲ್ ಶಿಂಧೆ ರವರು ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳ ಭೂ ಕಂದಾಯ ದಾಖಲಾತಿಗಳನ್ನು ತೋಟಗಾರಿಕೆ ಇಲಾಖೆಯ ಹೆಸರಿಗೆ ವರ್ಗಾಯಿಸಿಕೊಳ್ಳಲು ಖುದ್ದಾಗಿ ತಹಶೀಲ್ದಾರ ಕಛೇರಿ, ಉಪವಿಭಾಗ ಅಧಿಕಾರಿ ಕಛೇರಿಯ ಅಧಿಕಾರಿಗಳನ್ನು ಸಂಪರ್ಕಿಸಲು ಎಲ್ಲ ತೋಟಗಾರಿಕೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.
ಅದರ ಜೊತೆಗೆ ಎಲ್ಲ ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಗಳಲ್ಲಿ ಗುಣಮಟ್ಟದ ಹಣ್ಣಿನ ಕಸಿ/ಸಸಿಗಳನ್ನು ಉತ್ಪಾದಿಸಿ ರೈತರಿಗೆ ವಿತರಿಸುವಂತೆ ತಿಳಿಸಿದರು. ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ಮೂಲ ಸೌಕರ್ಯಗಳನ್ನು ನಿರ್ಮಿಸಲು ನಬಾರ್ಡ ಅಥವಾ ಇತರೆ ಸಂಬಂಧಪಟ್ಟ ಇಲಾಖೆಗಳಿಗೆ ಆದಷ್ಡು ಬೇಗ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು. ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಗಳ ಆದಾಯವನ್ನು ಹೆಚ್ಚಿಸಲು ಎಲ್ಲ ಕ್ಷೇತ್ರ ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಳಿಕ ಮಾತನಾಡಿದ ತೋಟಗಾರಿಕೆ ಉಪನಿರ್ದೇಶಕ ಮಾಹಾಂತೇಶ ಮುರಗೋಡ ವಿವಿಧ ತೋಟಗಾರಿಕೆ ಕ್ಷೇತ್ರದ ಬಗ್ಗೆ ವಿವರಣೆ ನೀಡಿದರು. ಹಾಗೂ ಹಾಲಿ ಕೆಲವೊಂದು ಕ್ಷೇತ್ರಗಳು ಇತರ ಇಲಾಖೆಯ ಹೆಸರಿನಲ್ಲಿದ್ದು ಅವುಗಳನ್ನು ತೋಟಗಾರಿಕೆ ಇಲಾಖೆಯ ಹೆಸರಿಗೆ ಬದಲಿಸಬೇಕಿರುತ್ತದೆ ಎಂದು ಸಭೆಗೆ ತಿಳಿಸಿದರು. ಮುಂದುವರೆದು 2024-25ನೇ ಸಾಲಿನ ಪ್ರಗತಿಯನ್ನು ಸಭೆಗೆ ವಿವರಿಸುತ್ತಾ 2025-26ನೇ ಸಾಲಿನ ಕ್ರಿಯಾ ಯೋಜನೆ ಕ್ಷೇತ್ರದಲ್ಲಿ ಆಗಬೇಕಾದ ಮೂಲಭೂತ ಸೌಕರ್ಯದ ಬಗ್ಗೆ ವಿವರಣೆ ನೀಡಿದರು. ಆದಾದ ನಂತರ ಮಾತನಾಡಿದ ಮಾನ್ಯರು ಅನುದಾನದ ಮೂಲದೊಂದಿಗೆ ಪ್ರಸ್ತಾವಣೆಯನ್ನು ಸಲ್ಲಿಸಿ ಅನುಮೋದಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ವಿಜಯಕುಮಾರ ಹೊನಕೇರಿ, ತೋಟಗಾರಿಕೆ ಉಪ ನಿರ್ದೇಶಕರಾದ ಮಾಹಾಂತೇಶ ಮುರಗೋಡ, ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ಡಾ. ದಿಲೀಪ ಮಸೂತಿ, ಕೃಷಿ ಇಲಾಖೆ ಜಂಟಿ ನಿರ್ದೇಶಕರು ಶ್ರೀ ಹೆ. ಡಿ. ಕೋಳೆಕರ, ಪಶುಪಾಲನಾ ಇಲಾಖೆ ಉಪನಿರ್ದೇಶಕರಾದ ರವಿ ಸಾಲಿಗೌಡರ, ರೇಷ್ಮೆ ಇಲಾಖೆ ಉಪನಿರ್ದೇಶಕರಾದ ಮಹೇಶ ಕುಮಾರ ವಾಗೆ, ಮೀನುಗಾರಿಕೆ ಇಲಾಖೆ ಉಪನಿರ್ದೇಶಕರಾದ ಸಂತೋಷ ಕೊಪ್ಪದ, ಕೃಷಿ ಮಾರುಕಟ್ಟೆ ಎಂ.ಡಿ. ಚಬನೂರು, ಕೈಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಎ. ಐ. ಪಠಾನ ಮತ್ತು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ರಾಜ್ಯವಲದ ಕೆ. ಏನ್. ಶ್ಯಮಂತ ಹಾಗೂ ತೋಟಗಾರಿಕೆ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ಕ್ಷೇತ್ರ ಮತ್ತು ನರ್ಸರಿ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.