
ಪ್ರಗತಿವಾಹಿನಿ ಸುದ್ದಿ: ಅರಸೀಕೆರೆಯ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳ ಚಿನ್ನಾಭರಣ, ಹಣ ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
2018ರಲ್ಲಿ ನಡೆದಿದ್ದ ಪ್ರಕರಣ ಸಂಬಂಧ ಏಳು ವರ್ಷಗಳ ಬಳಿಕ ಕಳ್ಳ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಉತ್ತರಾಖಂಡದ ನೈನಿತಾಲ್ ಮೂಲದ ಜಿತೇಂದ್ರ ಬಂಧಿತ ಆರೋಪಿ.
ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು 2018ರಲ್ಲಿ ಬಾಗಲಕೋಟೆಯಿಂದ ಅರಸೀಕೆರೆಗೆ ರೈಲಿನಲ್ಲಿ ಎಸಿ ಬೋಗಿಯಲ್ಲಿ ತೆರಳುತ್ತಿದ್ದರು. ಈ ವೇಳೆ ಲೆದರ್ ಬ್ಯಾಗ್ ನಲ್ಲಿ ಚಿನ್ನಾಭರಣ, ಹಣ ಇಟ್ಟು ಸ್ವಾಮೀಜಿ ನಿದ್ದೆಗೆ ಜಾರಿದ್ದರು. ಮಧ್ಯರಾತ್ರಿ ಎಚ್ಚರವಾದಾಗ ಬ್ಯಾಗ್ ನೋಡಿದರೆ ಚಿನ್ನ, ಹಣ ಕಳುವಾಗಿತ್ತು. 250 ಗ್ರಾಂ ಚಿನ್ನದ ಸರ, ಗೌರಿಶಂಕರ ರುದ್ರಾಕ್ಷಿ ಪದಕ, 50 ಗ್ರಾಂ ಎರಡು ಚಿನ್ನದ ಉಂಗುರ, 1.62 ಲಕ್ಷ ನಗದು ಹಣ ನಾಪತ್ತೆಯಾಗಿತ್ತು.
ಈ ಬಗ್ಗೆ ಅರಸೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಏಳು ವರ್ಷಗಳ ಬಳಿಕ ಆರೋಪಿ ಜಿತೇಂದ್ರನನ್ನು ಪೊಲೀಸರು ಬಂಧಿಸಿದ್ದು, ಈತನ ಬಂಧನದಿಂದ 13 ಪ್ರಕರಣಗಳು ಬೆಳಕಿಗೆ ಬಂದಿವೆ. ರೈಲಿನಲ್ಲಿ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುವುದೇ ಈತನ ಕಾಯಕವಾಗಿತ್ತು ಎಂದು ತಿಳಿದುಬಂದಿದೆ.